ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷ: 'ಜನೋತ್ಸವ' ರ್ಯಾಲಿಗೆ ಮತ್ತೆ ಸಿದ್ಧತೆ
ಬೆಂಗಳೂರು, ಆ. 13: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಿಂದ ಸ್ಥಗಿತಗೊಂಡಿದ್ದ ಬೊಮ್ಮಾಯಿ ಸರ್ಕಾರದ ಒಂದು ವರ್ಷದ ಸಾಧನೆ ಜನೋತ್ಸವ ರ್ಯಾಲಿ ಮತ್ತೆ ಚಾಲನೆ ಸಿಕ್ಕಿದೆ. ಆ. 28 ರಿಂದ ರಾಜ್ಯದ ಐದು ಕಡೆ ರಾಜ್ಯ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ ರ್ಯಾಲಿ ನಡೆಸಲು ಬೊಮ್ಮಾಯಿ ಸರ್ಕಾರ ತೀರ್ಮಾನಿಸಿದೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಆರ್.ಟಿ. ನಗರ ನಿವಾಸದ ಬಳಿ ಸುದ್ದಿಗಾರರ ಬಳಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, "ಅನಿವಾರ್ಯ ಕಾರಣದಿಂದ ನಮ್ಮ ಸರ್ಕಾರದ ಸಾಧನೆ ರ್ಯಾಲಿಯನ್ನು ಸ್ಥಗಿತಗೊಳಿಸಲಾಗಿತ್ತು. ಕಳೆದ ಹತ್ತು ದಿನದಿಂದ ಮಂಗಳೂರು ಭಾಗದ ಜನರೇ ಒತ್ತಡ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಾಧನಾ ರ್ಯಾಲಿ ಹಮ್ಮಿಕೊಳ್ಳುವಂತೆ ಹೇಳುತ್ತಿದ್ದಾರೆ. ಹೀಗಾಗಿ ಮೊದಲ ಹೆಜ್ಜೆ ಎಲ್ಲಿ ಇಟ್ಟವೋ ಅಲ್ಲಿಂದಲೇ ಸಾಧನಾ ರ್ಯಾಲಿ ಹಮ್ಮಿಕೊಳ್ಳುತ್ತಿದ್ದೇವೆ. ರಾಜ್ಯದ ಐದು ಕಡೆ ರಾಜ್ಯ ಬಿಜೆಪಿ ಸರ್ಕಾರದ ಸಾಧನಾ ರ್ಯಾಲಿ ಹಮ್ಮಿಕೊಂಡಿದ್ದೇವೆ," ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜ್ಯದ ಐದು ಕಡೆ ಸಾಧನಾ ರ್ಯಾಲಿ ಹಮ್ಮಿಕೊಳ್ಳುವ ಸಂಬಂಧ ಈಗಾಗಲೇ ಪಕ್ಷದ ಮುಖಂಡರ ಜತೆ ಚರ್ಚೆ ನಡೆಸಲಾಗುತ್ತಿದೆ. ಬಿಜೆಪಿ ಕೇಂದ್ರ ವರಿಷ್ಠರು ಸಹ ಈ ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಆ. 28 ರಿಂದ ಸಾಧನಾ ರ್ಯಾಲಿ ಆರಂಭವಾಗಲಿದ್ದು, ರಾಜ್ಯದ ಐದು ಕಡೆ ಅದ್ಧೂರಿಯಾಗಿ ನಡೆಸಲಿದ್ದೇವೆ. ಈ ಮೂಲಕ ನಮ್ಮ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಜನರಿಗೆ ತಿಳಿಸುತ್ತೇವೆ. ರಾಜ್ಯದ ಯಾವ ನಗರಗಳಲ್ಲಿ ರ್ಯಾಲಿ ಹಮ್ಮಿಕೊಳ್ಳಬೇಕು ಎಂಬುದನ್ನು ಶೀಘ್ರದಲ್ಲಿಯೇ ತೀರ್ಮಾನಿಸುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
Recommended Video
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡು ಜು. 28 ಕ್ಕೆ ಒಂದು ವರ್ಷ ತುಂಬಿದೆ. ಒಂದು ವರ್ಷದ ಸಾಧನೆ ಬಗ್ಗೆ ತಿಳಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಸರ್ಕಾರ ಸಾಧನಾ ರ್ಯಾಲಿ ಆಯೋಜಿಸಿತ್ತು. ಆದರೆ ರ್ಯಾಲಿ ಆಯೋಜನೆ ಮೊದಲೇ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಯಾಗಿದ್ದರಿಂದ ಸಾಧನಾ ರ್ಯಾಲಿಯನ್ನು ಅನಿರ್ಧಿಷ್ಟ ಕಾಲಕ್ಕೆ ಮುಂದೂಡಲಾಗಿತ್ತು. ಸರ್ಕಾರವೇ ಸಾಧನಾ ರ್ಯಾಲಿಯನ್ನು ರದ್ದು ಪಡಿಸಿತ್ತು. ಇದೀಗ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಪೂರ್ಣಗೊಂಡ ಬಳಿಕ ಸಾಧನಾ ರ್ಯಾಲಿ ಹಮ್ಮಿಕೊಳ್ಳಲಾಗುತ್ತಿದೆ.