ಕರ್ನಾಟಕದಲ್ಲಿ ಇನ್ಮುಂದೆ ಪುಣ್ಯ ಪುರುಷರ ಆಚರಣೆಗಳಿಗೆ ಸರ್ಕಾರಿ ರಜೆ ಇಲ್ಲ; ಕೆಲಸ ಮಾಡಿ ಗೌರವ ಸಲ್ಲಿಸ್ತೀವಿ: ಬಸವರಾಜ ಬೊಮ್ಮಾಯಿ
ತುಮಕೂರು,ಜನವರಿ21: ಕರ್ನಾಟಕದಲ್ಲಿ ಇನ್ಮುಂದೆ ಪುಣ್ಯ ಪುರುಷರ ಆಚರಣೆಗಳಿಗೆ ಸರ್ಕಾರಿ ರಜೆ ಇಲ್ಲ. ಪುಣ್ಯಪುರುಷರಿಗೆ ಕೆಲಸ ಮಾಡಿ ಗೌರವ ಸಲ್ಲಿಸುವ ಕೆಲಸ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶನಿವಾರ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಡಾ: ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಾಸೋಹ ದಿನದ ಪ್ರಯುಕ್ತ ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿ ದಾಸೋಹ ಮಂಟಪಗಳು ಮಠಮಾನ್ಯಗಳಲ್ಲಿ ಆಗಬೇಕು. ಇದರ ಆಚರಣೆಗೆಂದು ರಜೆ ಘೋಷಿಸುವುದಿಲ್ಲ. ಆದರೆ ಗೌರವ ಸಲ್ಲಿಸುವ ಕೆಲಸ ಮಾಡಲಾಗುವುದು. ಬಸವಣ್ಣ ಹಾಗೂ ಶಿವಕುಮಾರ ಸ್ವಾಮೀಜಿಗಳು ಕಾಯಕತತ್ವವನ್ನು ಪ್ರತಿಪಾದಿಸಿದ್ದು, ಅದರಂತೆ ನಾವು ನಡೆಯುತ್ತೇವೆ ಎಂದರು.
ತುಮಕೂರು ಸ್ಮಾರ್ಟ್ ಸಿಟಿ ಯೋಜನೆಗೆ 500 ಕೋಟಿ ರೂ: ಬಸವರಾಜ ಬೊಮ್ಮಾಯಿ
ಫೆಬ್ರವರಿ ಮಾಹೆಯಲ್ಲಿ ದಾಸೋಹ ದಿನವನ್ನು ವಿಶಿಷ್ಟವಾದ ಕಾರ್ಯಕ್ರಮವಾಗಿ ಇಡೀ ರಾಜ್ಯದಲ್ಲಿ ಆಚರಣೆಯಾಗಬೇಕು. ನಡೆದಾಡುವ ದೇವರು , ಪರಮಪೂಜ್ಯ ಡಾ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸಂಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು, ಗದ್ದುಗೆ ನಮಸ್ಕಾರ ಮಾಡಿದ್ದು, ಸಂತೋಷ, ಸಮಾಧಾನವಾವಿದೆ. ಅವರ ಆಶೀರ್ವಾದ ಈ ನಾಡಿನ ಜನತೆ ಮೇಲೆ ಇದೆ ಎಂಬ ಭಾವನೆಯಿಂದ ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದೇನೆ ಇನ್ನೂ ಶಿವಕುಮಾರ್ ಸ್ವಾಮೀಜಿ ಹುಟ್ಟೂರಿನಲ್ಲಿ ಅವರ ಪ್ರತಿಮೆ ಸ್ಥಾಪನೆ ಕುರಿತು ಪರಿಶೀಲಿಸಿದ್ದು, ಅದಕ್ಕೆ ವೇಗ ನೀಡಲಾಗುತ್ತಿದೆ ಎಂದರು.
ಬಿಜೆಪಿ 130 ಸ್ಥಾನಗಳ ಬಹುಮತ
ಭಾರತೀಯ ಜನತಾ ಪಕ್ಷ ಸಂಪೂರ್ಣ ಬಹುಮತ ಅಂದರೆ 130 ಸ್ಥಾನಗಳನ್ನು ಗಳಿಸಲಿದೆ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಈಗಾಗಲೇ ಅಮಿತ್ ಶಾ ಅವರು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಎಂದು ಹೇಳಿದ್ದಾರೆ. ಅದರರ್ಥ ಕೇವಲ ಮುಖ್ಯಮಂತ್ರಿಯಲ್ಲ, ನಮ್ಮ ಸಂಪೂರ್ಣ ತಂಡ ಪಕ್ಷ, ಹಾಗೂ ಸರ್ಕಾರದ ಎಲ್ಲಾ ಪ್ರಮುಖರು ಸೇರಿ ಶ್ರಮಿಸುತ್ತೇವೆ. ಚುನಾವಣೆ ಎನ್ನುವುದು ಎಲ್ಲರೂ ಸೇರಿ ಮಾಡಬೇಕು ಎನ್ನುವ ಸತ್ಯದ ಅರಿವಿನಿಂದ ಕ್ರಮ ಕೈಗೊಳ್ಳುತ್ತೇವೆ ಎಂದರು.
ವಿಜಯ ಸಂಕಲ್ಪ ಯಾತ್ರೆ ಇಡೀ ರಾಜ್ಯದಲ್ಲಿ ಆಗುತ್ತಿದ್ದು, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯಪುರದ ಇಂಡಿ ತಾಲ್ಲೂಕಿನಲ್ಲಿ ನಡೆಯುವ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೂಡ ಮತ್ತೊಂದೆಡೆ ಭಾಗವಹಿಸುತ್ತಿದ್ದಾರೆ. ಪಕ್ಷದ ಪ್ರಮುಖರೆಲ್ಲರೂ ವಿವಿದೆಡೆ ಭಾಗವಹಿಸುತ್ತಿದ್ದಾರೆ. ಮನೆ ಮನೆಗೆ ಅಭಿಯಾನ ಕೈಗೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಹಾಗೂ ಸಾಧನೆಗಳ ಬಗ್ಗೆ ಜನರಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದರು.