Breaking: ಸಿಎಂ ಬದಲಾವಣೆ:ಕಾಂಗ್ರೆಸ್ ಟ್ವಿಟ್ಗೆ ಬೊಮ್ಮಾಯಿ ತಿರುಗೇಟು
ಬೆಂಗಳೂರು ಆಗಸ್ಟ್ 11: ಅತಂತ್ರ ಸ್ಥಿತಿಯಲ್ಲಿರುವ ಕಾಂಗ್ರೆಸ್ ನಿರಾಧಾರವಾಗಿ, ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡುತ್ತಿರುವುದು ಇದೇನು ಮೊದಲಲ್ಲ. ನಾಯಕತ್ವ ಬದಲಾವಣೆ ವಿಚಾರ ಕೇವಲ ಊಹಾಪೋಹ. ಸತ್ಯ ಗೊತ್ತಿರುವುದರಿಂದ ನಾನು ಸ್ಥಿತಪ್ರಜ್ಞನಾಗಿದ್ದೇನೆ ಎಂದು ಕಾಂಗ್ರೆಸ್ ಟ್ವೀಟ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಕೊರೋನಾದಿಂದ ಚೇತರಿಸಿಕೊಂಡ ನಂತರ ಗುರುವಾರ ಮೈಸೂರು, ಮಂಡ್ಯ ಜಿಲ್ಲೆ ಪ್ರವಾಸ ಅವರ ಮೊದಲ ಕಾರ್ಯಕ್ರಮವಾಗಿದೆ. ಪ್ರವಾಸಕ್ಕೂ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಮುಖ್ಯಮಂತ್ರಿಗಳು, ಕಾಂಗ್ರೆಸ್ ನಾಯಕರ ಮಧ್ಯದಲ್ಲೇ ಸಾಕಷ್ಟು ಗೊಂದಲ, ಅತಂತ್ರ ಪರಿಸ್ಥಿತಿ ಇದೆ. ಅಂತಹ ಹೇಳಿಕೆಗಳಿಗೆ ಮಹತ್ವ ಕೊಡುವ ಅಗತ್ಯತೆ ಇಲ್ಲ ಎಂದರು.
ರಾಜಕೀಯ ಪ್ರೇರಿತವಾಗಿ ಕಾಂಗ್ರೆಸ್ ಪದಚ್ಯುತಿ ಹೇಳಿಕೆ ನೀಡುತ್ತಿದೆ. ಇವು ಸತ್ಯಕ್ಕೆ ದೂರವಾದವು ಮತ್ತು ಅವುಗಳಿಂದ ನಾನು ಸಾಕಷ್ಟು ಗಟ್ಟಿಯಾಗಿದ್ದೇನೆ. ಸತ್ಯ ಗೊತ್ತಿರುವ ಕಾರಣ ಆರೋಪಗಳಿಗೆ ಮಹತ್ವ ಕೊಡದೇ ವಾಸ್ತವ, ಸ್ಥಿತಪ್ರಜ್ಞೆಯಿಂದ ಕೆಲಸ ಮಾಡಲು ಇಚ್ಚಿಸಿದ್ದೇನೆ. ನಿತ್ಯ ಎರಡು ಗಂಟೆ ಹೆಚ್ಚು ಕೆಲಸ ಮಾಡಲು, ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಲು ಇಂತಹ ವಿಚಾರಗಳೇ ನನಗೆ ಪ್ರೇರಣೆ. ಅತಂತ್ರ ಸ್ಥಿತಿಯಲ್ಲಿರುವ ಕಾಂಗ್ರೆಸ್ ನಾಯಕರ ಆರೋಪ, ಹೇಳಿಕೆಗಳನ್ನು ಕೇಳಲು ರಾಜ್ಯದ ಜನರು ತಯಾರಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ಬಲವರ್ಧನೆ ಶ್ರಮಿಸುವುದು. ರಾಜ್ಯ ಸರ್ಕಾರ ಜನಪರವಾದ ಸರ್ಕಾರ ಎಂದು ಸಾಬೀತು ಮಾಡುವ ಕೆಲಸಗಳು ದೊಡ್ಡ ಪ್ರಮಾಣದಲ್ಲಿ ನಡೆಸುವ ಗುರಿ ಇದೆ ಎನ್ನುವ ಮೂಲಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವನ್ನು ಬೊಮ್ಮಾಯಿ ತಳ್ಳಿಹಾಕಿದರು.
2 ದಿನದಲ್ಲಿ ಮಳೆ ಹಾನಿ ವರದಿ: ಈದ್ಗಾ ಬಗ್ಗೆ ಸೂಕ್ತ ನಿರ್ಧಾರ
ನಿರಂತರ ಮಳೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ, ನೆರೆ ಪರಿಸ್ಥಿತಿ ಉಂಟಾಗಿದೆ. ಆ ಬಗ್ಗೆ ಅಧಿಕಾರಿಗಳ ನಡೆಸುವ ಹಾನಿಯ ಸಮೀಕ್ಷಾ ವರದಿ ಎರಡು ಮೂರು ದಿನದಲ್ಲಿ ಕೈ ಸೇರಲಿದೆ. ನಂತರ ಪರಿಹಾರಕ್ಕಾಗಿ ವರದಿಯನ್ನು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದರು.
ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಅಲ್ಲಿ ಏನು ಕಾರ್ಯಕ್ರಮ ನಡೆಸಬೇಕು, ಯಾವುದನ್ನು ನಡೆಸಬಾರದು ಎಂಬುದರ ಬಗ್ಗೆ ಸರ್ಕಾರ ತೀರ್ಮಾನಿಸುತ್ತದೆ. ಕಾನೂನಿಗೆ ಪ್ರಾಧಾನ್ಯತೆ ನೀಡುವ ರಾಜ್ಯ ಸರ್ಕಾರ ನಿಯಮಗಳಂತೇ ನಡೆದುಕೊಳ್ಳಲಿದೆ. ಕಾನೂನಿನ ಮುಂದೆ ಯಾರು ದೊಡ್ಡವರಲ್ಲ ಎಂದು ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಬಿಡಲ್ಲ ಎಂದಿದ್ದ ಜಮೀರ್ ಹೇಳಿಕೆಯ ಪ್ರಶ್ನೆ ಬೊಮ್ಮಾಯಿ ಉತ್ತರಿಸಿದರು.