ಕಾಂಗ್ರೆಸ್ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಅಂತ ಹೇಳೋಕೆ ಆಗುತ್ತಾ?
ಬೆಂಗಳೂರು, ಜೂ. 30: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 120 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂಬ ಆಂತರಿಕ ಸಮೀಕ್ಷೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಅದು ಕಾಂಗ್ರೆಸ್ನವರ ಸಮೀಕ್ಷೆ. ಬಿಜೆಪಿ ಬಹುಮತ ಬರುತ್ತೆ ಅಂತ ತೋರಿಸೋಕೆ ಆಗುತ್ತಾ ಅಂತ ವ್ಯಂಗ್ಯ ಮಾಡಿದ್ದಾರೆ.
ಮಂಗಳವಾರ ಆರ್ಟಿ ನಗರ ನಿವಾಸದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ ಅವರು ಉದಯಪುರದಲ್ಲಿ ನಡೆದಿರುವ ಶಿರಚ್ಛೇಧ ಘಟನೆಯನ್ನು ಖಂಡಿಸಿದರು. ಇದೇ ವೇಳೆ ಕಾಂಗ್ರೆಸ್ ಆಂತರಿಕ ಸಮೀಕ್ಷೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಪಕ್ಷಗಳು ಇದೀಗ ಗೆಲುವಿನ ಲೆಕ್ಕಾಚಾರ ಆರಂಭಿಸಿವೆ. ಆಂತರಿಕ ಸಮೀಕ್ಷೆಗೆ ಇಳಿದಿವೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದ ಕೇಂದ್ರ ಬಿಜೆಪಿ ನಾಯಕರು ರಾಜ್ಯದಲ್ಲಿ ಬಿಜೆಪಿ ಎಷ್ಟು ಸ್ಥಾನಗಳು ಗೆಲ್ಲಲಿದೆ ಎಂಬುದರ ಬಗ್ಗೆ ಮೂರು ಸಂಸ್ಥೆಗಳಿಂದ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡಿದ್ದಾರೆ. ಬಿಜೆಪಿ ಕಡಿಮೆ ಸೀಟು ಗೆಲ್ಲಲಿದೆ ಎಂಬ ಮಾಹಿತಿ ಸಿಕ್ಕ ಬೆನ್ನಲ್ಲೇ ಇದೀಗ ಟಾರ್ಗೆಟ್ 150 ಪ್ಲಾನ್ ರೂಪಿಸಿ ಹೊಸ ಕಾರ್ಯತಂತ್ರ ಎಣೆಯುತ್ತಿದ್ದಾರೆ.
ಬಿಜೆಪಿ ಕೇಂದ್ರ ವರಿಷ್ಠರ ಸಮೀಕ್ಷೆ ಬೆನ್ನಲ್ಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೂ ಆಂತರಿಕ ಸಮೀಕ್ಷೆ ನಡೆಸಿದೆ. ಕಾಂಗ್ರೆಸ್ ರಾಜಕೀಯ ತಂತ್ರಜ್ಞ ಸುನೀಲ್ ಕನ್ನಗೋಲು ಸಿದ್ದಪಡಿಸಿರುವ ಪ್ರಾಥಮಿಕ ಸಮೀಕ್ಷಾ ವರದಿ ಪ್ರಕಾರ ಕಾಂಗ್ರೆಸ್ ಈಗ ವಿಧಾನಸಭೆ ಚುನಾವಣೆ ನಡೆದಿರೆ 120 ಕ್ಕಿಂತಲೂ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸಲಿದೆ ಎಂದು ವರದಿ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಅಧಿನಾಯಕ ಡಿ.ಕೆ. ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿ ರಾಹುಲ್ ಗಾಂಧಿ ಜತೆ ಚರ್ಚೆ ನಡೆಸಿದ್ದಾರೆ. ಸಾಮೂಹಿಕ ನಾಯಕತ್ವದಡಿ ಚುನಾವಣೆ ಎದುರಿಸಲು ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಸಿದ್ದರಾಮಯ್ಯ ಸಿಎಂ ಅಭ್ಯರ್ಥಿಯಾಗಲು ಹೆಚ್ಚು ಒಲವು ವ್ಯಕ್ತವಾಗಿದೆ.
ರಾಜ್ಯದಲ್ಲಿ ಚುನಾವಣೆ ನಡೆದರೆ ಆಡಳಿತ ರೂಢ ಬಿಜೆಪಿ ಕೇವಲ 70 ಸ್ಥಾನದಲ್ಲಿ ಗೆಲ್ಲಲಿದೆ ಎಂದು ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ. ಈ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, ಅದು ಕಾಂಗ್ರೆಸ್ ಪಕ್ಷದ ಸಮೀಕ್ಷೆ. ಅವರದ್ದು ಜಾಸ್ತಿ ತೋರಿಸಿಕೊಳ್ಳದೇ ಬಿಜೆಪಿ ಜಾಸ್ತಿ ಸ್ಥಾನ ಗೆಲ್ಲುತ್ತೆ ಅಂತ ಹೇಳೋಕೆ ಆಗುತ್ತಾ ? ಎಂದು ಲೇವಡಿ ಮಾಡಿದ್ದಾರೆ.
ಉದಯಪುರ ಶಿರಚ್ಛೇಧಕ್ಕೆ ಬೊಮ್ಮಾಯಿ ಖಂಡನೆ:
ಉದಯಪುರದಲ್ಲಿ ಟೈಲರ್ ಶಿರಚ್ಛೇಧ ಮಾಡಿರುವುದು ಹೇಯ ಕೃತ್ಯ. ಇದರ ಹಿಂದೆ ಅಂತಾರಾಷ್ಟ್ರೀಯ ಭಯೋತ್ಪಾದಕರ ಸಂಘಟನೆಗಳಿವೆ. ಈ ಕೃತ್ಯ ಎಸಗಿದವರನ್ನು ಗಲ್ಲಿಗೆ ಏರಿಸಬೇಕು. ಈ ನಿಟ್ಟಿನಲ್ಲಿ ರಾಜಸ್ಥಾನ ಸರ್ಕಾರ ಎಲ್ಲಾ ಕ್ರಮ ಜರುಗಿಸಬೇಕು. ಇದರ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ಷಡ್ಯಂತ್ರವಿದೆ. ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದ್ದಾರೆ.