2023ರಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಲಿದೆ?: ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ
ಬೆಂಗಳೂರು, ಅ.22: ರಾಜ್ಯದಲ್ಲಿ 2023ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ. ಆ ಮೂಲಕ ಈಗ ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆ ರಾಜ್ಯ ರಾಜಕೀಯದ ಟ್ರಯಲ್ ಎಂಬ ಸಂದೇಶವನ್ನೂ ನೀಡಿದ್ದಾರೆ.
ತವರು ಜಿಲ್ಲೆಯಲ್ಲೇ ಬೀಡುಬಿಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ವಲ್ಪ ಹೆಚ್ಚಿನ ಮಟ್ಟದಲ್ಲೇ ವಿಶ್ವಾಸದಿಂದ ಇದ್ದಾರೆ. ಕ್ಷೇತ್ರದಾದ್ಯಂತ ಮಠ ಮಂದಿರಗಳ ಭೇಟಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚುನಾವಣಾ ಪ್ರಚಾರಕ್ಕೆ ಎಂಟ್ರಿ ನೀಡಿರುವುದು ಬೊಮ್ಮಾಯಿ ಅವರ ಭುಜಬಲವನ್ನು ಹೆಚ್ಚಿಸಿದೆ.
ಹಾನಗಲ್ ಮತ್ತು ಸಿಂದಗಿಯಲ್ಲಿ ನಡೆಯುತ್ತಿರುವ ಉಪಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ಭವಿಷ್ಯ ಎಂದು ಇದುವರೆಗೂ ಯಾರೂ ಸಹ ಹೇಳಿಕೆ ನೀಡಿರಲಿಲ್ಲ. ಆದರೆ, ಹಾನಗಲ್ ಮತ ಕ್ಷೇತ್ರದ ಹೊಂಕಣ ಗ್ರಾಮದಲ್ಲಿ ಗುರುವಾರ ಮಾತನಾಡಿದ ಬಸವರಾಜ ಬೊಮ್ಮಾಯಿ ಹಾನಗಲ್ ಮತ್ತು ಸಿಂದಗಿ ಕ್ಷೇತ್ರದ ಉಪಚುನಾವಣೆಯ ಫಲಿತಾಂಶದಿಂದ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಭವಿಷ್ಯ ಏನಾಗಲಿದೆ ಎಂದು ಹೇಳುವ ಮೂಲಕ ಉಪಚುನಾವಣೆಯ ಮೂಲಕ ರಾಜ್ಯದ ಮತದಾರನ ಒಲವು ಯಾವ ಪಕ್ಷದ ಕಡೆ ಇದೆ ಎಂಬುದರ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.
ಇದು ಟ್ರೇಲರ್ ಮಾತ್ರ
"ಇತ್ತೀಚೆಗೆ ವಿಧಾನಸೌಧಕ್ಕೆ ಸಿದ್ದರಾಮಯ್ಯನವರು ಹಾಗೂ ಡಿಕೆ ಶಿವಕುಮಾರ್ ಚಕ್ಕಡಿ ಏರಿ ಬಂದಿದ್ದರು. ಹಗ್ಗ ಸಿದ್ದರಾಮಯ್ಯ ಕೈಯ್ಯಲ್ಲಿ. ಬಾರಕೋಲು ಡಿಕೆಶಿ ಕೈಯಲ್ಲಿ ಇತ್ತು. ಇವರಿಬ್ಬರ ಎಳೆದಾಟದಲ್ಲಿ ಚಕ್ಕಡಿಯಲ್ಲಿ ಇದ್ದ ಶಾಸಕರು ಕೆಳಗೆ ದಬದಬನೆ ಕೆಳಗೆ ಬಿದ್ದರು. ಇದೇ ರೀತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 2023ರ ಚುನಾವಣೆಯಲ್ಲಿ ದಬದಬನೇ ಬೀಳುತ್ತಾರೆ. ಇದು ಟ್ರೇಲರ್ ಮಾತ್ರ. ಹಾನಗಲ್ ಕ್ಷೇತ್ರದಿಂದ ಕಾಂಗ್ರೆಸ್ ಸೋಲು ಆರಂಭವಾಗಲಿದೆ. ಕಾಂಗ್ರೆಸ್ ಸೋಲಿನ ಮುನ್ನುಡಿ ಹಾನಗಲ್ನಿಂದ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭವಿಷ್ಯ ನುಡಿದರು.
ಕಾಂಗ್ರೆಸ್ನವರು ಈಗಾಗಲೇ ಸೋಲು ಒಪ್ಪಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುವುದುಕಾಂಗ್ರೆಸ್ಗೆ ಅಲ್ಲ. ರಾಜಕೀಯವಾಗಿ ಮತ್ತು ನೈತಿಕವಾಗಿ ಬಿಜೆಪಿಗೇ ಗೆಲುವು ಆಗುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ನನ್ನ ಮತ ಗೆಲ್ಲಬೇಕು ಎಂಬ ವಿಶ್ವಾಸ ಇರುತ್ತದೆ. ಅದೇ ರೀತಿ ನಿಮ್ಮ ನಾವು ಹೂವು ತರುತ್ತೇವೆ ಹೊರತು ಹುಲ್ಲು ತರುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
'ಮುಂದುವರಿದು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ಕಮಲದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ 2023 ರ ಚುನಾವಣೆಗೆ ಮತದಾರರು ಮುನ್ನುಡಿ ಬರೆಯಲಿದ್ದಾರೆ' ಎಂದೂ ಸಹ ಹೇಳುವ ಮೂಲಕ ಈ ಉಪ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ಟ್ರೇಲರ್ ಎಂಬುದರ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಆದರೆ, ಇದೇ ಚುನಾವಣೆಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ನ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಥವಾ ಜೆಡಿಎಸ್ನಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಮಾತುಗಳಲ್ಲಿ ಉಪಚುನಾವಣೆ ಮುಂದಿನ ಚುನಾವಣೆಯ ಭವಿಷ್ಯ ಎಂದು ಎಲ್ಲಿಯೂ ಸಹ ಹೇಳಿಕೆ ನೀಡಿರಲಿಲ್ಲ.
ಸಿದ್ದರಾಮಯ್ಯ ಅವರು ಗುರುವಾರ ಹಾನಗಲ್ ಗ್ರಾಮದ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ಮಾಡುತ್ತಾ, "ಯಾವುದೇ ಉಪ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಆದರೆ ಜನರ ಆಕ್ರೋಶ ಏನು ಎನ್ನುವುದು ಗೊತ್ತಾಗತ್ತೆ. ರಾಜ್ಯದ ನಾಯಕರಿಗೆ ತಮ್ಮ ಸ್ವಂತ ಕೆಲಸ ಕಾರ್ಯಗಳ ಮೇಲೆ ಮತ ಕೇಳುವ ಧೈರ್ಯ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ರಾಜ್ಯಕ್ಕೆ ಬಿಜೆಪಿ ಮಾಡಿರುವ ಅನ್ಯಾಯಗಳಿಗೆ ತಕ್ಕ ಉತ್ತರ ನೀಡಲು ಜನರಿಗೆ ಉಪಚುನಾವಣೆಯಲ್ಲಿ ಒಂದು ಅವಕಾಶ ಇದೆ" ಎಂದಷ್ಟೇ ಹೇಳಿಕೆ ನೀಡಿದ್ದರು.
Recommended Video