ನೂತನ ಸಚಿವರಿಗೆ ಸಿಎಂ ಬೊಮ್ಮಾಯಿ ಖಾತೆ ಹಂಚಿಕೆ ವಿಳಂಬದ ಹಿಂದಿನ ರಹಸ್ಯ ಬಯಲು!
ಬೆಂಗಳೂರು, ಆ. 07: ನಿರೀಕ್ಷೆಯಂತೆ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಗ್ಗಂಟಾಗಿದೆ. ಖಾತೆ ಹಂಚಿಕೆ ವಿಳಂವಾಗಿರುವುದರಿಂದ ಉಮೇದಿನಿಂದ ಪ್ರಮಾಣ ವಚನ ಸ್ವೀಕರಿಸಿರುವ ನೂತನ ಮಂತ್ರಿಗಳಿಗೆ ಮಾಡಲು ಕೆಲಸವಿಲ್ಲದಂತಾಗಿದೆ. ಕಳೆದ ಬುಧವಾರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ವಿಸ್ತರಣೆಯಾಗಿದೆ. ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿ ಇಂದಿಗೆ ನಾಲ್ಕು ದಿನಗಳಾಗಿವೆ. ರಾಜ್ಯದಲ್ಲಿ ಒಂದೆಡೆ ಪ್ರವಾಹ ಪರಿಸ್ಥಿತಿ ಪರಿಹಾರ ಕಾರ್ಯಗಳನ್ನು ಮಾಡಬೇಕಿದೆ. ಮತ್ತೊಂದೆಡೆ ಕೊರೊನಾ ಆರೋಗ್ಯ ತುರ್ತು ಪರಿಸ್ಥಿತಿಯೂ ಇದೆ. ಆದರೆ ಹೈಕಮಾಂಡ್ ಮಾತ್ರ ಇವರಿಗೆ ಇದೇ ಖಾತೆ ಎಂಬುದನ್ನು ಇನ್ನೂ ಅಂತಿಮಗೊಳಿಸುತ್ತಿಲ್ಲ. ಇದು ಹೊಸ ಮಂತ್ರಿಗಳಿಗಿಂತ ಹೆಚ್ಚಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ಒಂದೆಡೆ ಮಾಜಿ ಸಿಎಂ ಯಡಿಯೂರಪ್ಪ ಶಾಡೋದಿಂದ ಹೊರಕ್ಕೆ ಬನ್ನಿ ಎಂದು ಸೂಚಿಸಿರುವ ಬಿಜೆಪಿ ವರಿಷ್ಠರು ಕನಿಷ್ಠ ತಮ್ಮ ಸಂಪುಟದ ಮಂತ್ರಿಗಳಿಗೆ ಖಾತೆ ಹಂಚಿಕೆಯನ್ನು ಮಾಡಲೂ ಸಿಎಂ ಬೊಮ್ಮಾಯಿ ಅವರಿಗೆ ಸ್ವಾತಂತ್ರ್ಯ ಕೊಟ್ಟಿಲ್ಲ. ಅಥವಾ ಖಾತೆ ಹಂಚಿಕೆ ಮಾಡಿ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳಲು ಸಿಎಂ ಬೊಮ್ಮಾಯಿ ತಯಾರಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ನಿನ್ನೆ ಮಧ್ಯರಾತ್ರಿಯೇ ಎಲ್ಲರಿಗೂ ಖಾತೆ ಹಂಚಿಕೆ ಇನ್ನೇನು ಆಗೇ ಬಿಡುತ್ತದೆ ಅಂದುಕೊಂಡು ಕಾಯುತ್ತಿದ್ದ ಮಂತ್ರಿಗಳಿಗೆ ನಿರಾಸೆಯಾಗಿದೆ. ಅಷ್ಟಕ್ಕೂ ಖಾತೆ ಹಂಚಿಕೆ ವಿಳಂಬವಾಗುತ್ತಿರುವುದರ ಹಿಂದಿನ ಕಾರಣ ಏನು? ಮುಂದಿದೆ ಮಾಹಿತಿ!
ಖಾತೆ ಹಂಚಿಕೆ ದಿಢೀರ್ ಮುಂದೂಡಿಕೆ!
ಶುಕ್ರವಾರ ರಾತ್ರಿ ಎಲ್ಲ ಸಚಿವರಿಗೆ ಖಾತೆ ಹಂಚಿಕೆ ಮಾಡುವುದಾಗಿ ಕೋವಿಡ್ ನಿಯಂತ್ರಣ ಸಭೆಯ ಬಳಿಕ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದರು. ಬಳಿಕ ರಾತ್ರಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿಕೊಟ್ಟು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದರು. ಜೊತೆಗೆ ಬೆಂಗಳೂರಿಗೆ ಹಿಂದಿರುಗಿದ ಬಳಿಕ ಮಂಧ್ಯರಾತ್ರಿ ಎಲ್ಲ 29 ಸಚಿವರಿಗೆ ಖಾತೆ ಹಂಚಿಕೆ ಆಗುತ್ತದೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ಕೊಟ್ಟಿದ್ದರು. ಆದರೆ ಶುಕ್ರವಾರ ಆಗಬೇಕಿದ್ದ ಖಾತೆ ಹಂಚಿಕೆ ದಿಢೀರ್ ಮುಂದೂಡಿಕೆ ಆಯ್ತು. ಶನಿವಾರ ಅಥವಾ ಭಾನುವಾರ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂಬ ಮಾಹಿತಿ ಬಂದಿದೆ. ಏಕಾಏಕಿ ಖಾತೆ ಹಂಚಿಕೆ ಮುಂದೂಡಿದ್ದು ಯಾಕೆ ಅಂತಾ ಹೊಸದಾಗಿ ಮಂತ್ರಿಗಳಾಗಿರುವವರು ಗೊಂದಲಕ್ಕೀಡಾಗಿದ್ದಾರೆ. ಆದರೆ ಖಾತೆ ಹಂಚಿಕೆ ಮುಂದೂಡಿರುವುದು ಯಾಕೆ ಅನ್ನೋದು ಹಿರಿಯ ಮಂತ್ರಿಗಳಿಗೆ ಗೊತ್ತಿದೆ. ಅದಕ್ಕೆ ಕಾರಣವೂ ಇದೆ.
ಯಾರಿಗೆ ಯಾವ ಖಾತೆ ಮೇಲೆ ಕಣ್ಣು?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದ ಹಿರಿಯ ಸಚಿವರು ಪ್ರಮುಖ ಖಾತೆಗಳ ಮೇಲೆ ಕಣ್ಣಿಟ್ಟಿದ್ದು, ಪ್ರಭಾವಿ ಖಾತೆಗಳಿಗೆ ಸಿಎಂ ಬಳಿ ಬೇಡಿಕೆ ಇಟ್ಟಿದ್ದಾರೆ.
ಪ್ರಮುಖವಾಗಿ ಗೃಹ, ಇಂಧನ, ಕಂದಾಯ, ಗ್ರಾಮೀಣಾಭಿವೃದ್ಧಿ, ಬೃಹತ್ ಕೈಗಾರಿಕೆ, ಬೆಂಗಳೂರು ನಗರಾಭಿವೃದ್ಧಿ, ಜಲ ಸಂಪನ್ಮೂಲ ಖಾತೆಗಳು ಬೇಕೆಂದು ಹಿರಿಯ ಸಚಿವರು ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ಈ ಹಿಂದೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿರುವ ಸಚಿವರುಗಳಿಗೆ ಅವರು ನಿರ್ವಹಿಸಿದ ಖಾತೆಗಳನ್ನೇ ಕೊಡುವಂತೆ ಪಕ್ಷದ ವರಿಷ್ಠರು ಸಿಎಂಗೆ ಸೂಚನೆ ಕೊಟ್ಟಿದ್ದರು. ಇದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲಾಗಿದೆ ಎನ್ನಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮೊದಲ ಬಾರಿ ಸಚಿವರಾಗಿ ಸೇರಿಕೊಂಡಿರುವವರಿಗೆ ಮುಜರಾಯಿ, ಜವಳಿ, ವಕ್ಫ್, ಅಲ್ಪ ಸಂಖ್ಯಾತ, ಕನ್ನಡ ಮತ್ತು ಸಂಸ್ಕೃತಿ, ಪೌರಾಡಳಿ, ಯುವಜನ ಸೇವೆ ಮತ್ತು ಕ್ರೀಡೆ, ಯೋಜನೆ ಮತ್ತು ಸಾಂಖಿಕದಂತಹ ಖಾತೆಗಳನ್ನು ನೀಡುವ ಸಾಧ್ಯತೆಗಳಿದ್ದವು. ಆದರೆ ಅದಕ್ಕೆ ನೂತನ ಸಚಿವರ ವಿರೋಧ ವ್ಯಕ್ತವಾಗಿದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾತೆ ಹಂಚಿಕೆ ವಿಚಾರನ್ನು ವರಿಷ್ಠರ ಗಮನಕ್ಕೆ ತಂದಿದ್ದಾರೆ. ವರಿಷ್ಠರು ತಾವೇ ಖಾತೆ ಹಂಚಿಕೆ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ನಮಗೆ ಇದೇ ಖಾತೆ ಬೇಕು ಎಂದು ಪಟ್ಟು?
ಹಿರಿಯ ಸಚಿವ ಕೆ.ಎಸ್. ಈಶ್ವರಪ್ಪ ಗೃಹ ಖಾತೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಗೃಹ ಖಾತೆ ದೊರೆಯದಿದ್ದರೂ ಕಂದಾಯ ಖಾತೆಯಾದರೂ ದೊರೆಯುವ ವಿಶ್ವಾಸದಲ್ಲಿ ಈಶ್ವರಪ್ಪ ಇದ್ದಾರೆ ಎಂದು ತಿಳಿದು ಬಂದಿದೆ. ಮಾಜಿ ಡಿಸಿಎಂ ಆರ್. ಅಶೋಕ್ ಕಂದಾಯ ಖಾತೆ ಬದಲು ಗೃಹ ಅಥವಾ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಯೇ ಉಮೇಶ್ ಕತ್ತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಥವಾ ಕಂದಾಯ, ಮುರುಗೇಶ್ ನಿರಾಣಿ ಬೃಹತ್ ಕೈಗಾರಿಕೆ, ವಸತಿ ಸಚಿವರಾಗಿದ್ದ ವಿ. ಸೋಮಣ್ಣ ಕೂಡ ಗ್ರಾಮೀಣಾಭಿವೃದ್ಧಿ ಅಥವಾ ಕಂದಾಯ ಖಾತೆ ದೊರೆಯುವ ವಿಶ್ವಾಸದಲ್ಲಿದ್ದಾರೆ.
ಜೊತೆಗೆ ಗೋವಿಂದ ಕಾರಜೋಳ ಲೋಕೋಪಯೋಗಿ, ಬಿ. ಶ್ರೀರಾಮುಲು ಸಮಾಜ ಕಲ್ಯಾಾಣ, ಶಶಿಕಲಾ ಜೊಲ್ಲೆೆ, ಪ್ರಭು ಚೌಹ್ವಾಾಣ್, ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ ಹಿಂದೆ ನಿರ್ವಹಿಸಿದ್ದ ಖಾತೆಯಲ್ಲಿಯೇ ಮುಂದುವರೆಯಲು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದಿನ ಖಾತೆಗಳಿಗೆ ವಲಸಿಗರ ಪಟ್ಟು!
ಮೂಲ ಬಿಜೆಪಿ ಹಿರಿಯರು ಪ್ರಬಲ ಖಾತೆಗಳಿಗೆ ಬೇಡಿ ಇಟ್ಟಿದ್ದರೆ, ವಲಸಿಗ ಸಚಿವರಲ್ಲಿ ಬಹುತೇಕರು ಯಡಿಯೂರಪ್ಪ ಸಂಪುಟದಲ್ಲಿ ತಾವು ಹೊಂದಿದ್ದ ಖಾತೆಗಳಲ್ಲಿಯೇ ಮುಂದುವರೆಯಲು ಬಯಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ಕೃಷಿ ಖಾತೆ ಹೊಂದಿರುವ ಬಿ.ಸಿ. ಪಾಟೀಲ್ ಅವಕಾಶ ಸಿಕ್ಕರೆ ಗೃಹ ಖಾತೆ ಸಿಕ್ಕರೆ ಅಡ್ಡಿಯಿಲ್ಲ ಎಂಬ ನಿರೀಕ್ಷೆೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್, ಡಾ. ಸುಧಾಕರ್ ತಾವು ಹಿಂದೆ ಹೊಂದಿದ ಖಾತೆಗಳಲ್ಲಿಯೇ ಮುಂದುವರೆಯಲು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಇದರೊಂದಿಗೆ ಸಚಿವರಾದ ಕೆ.ಸಿ. ನಾರಾಯಣಗೌಡ, ಆನಂದ ಸಿಂಗ್ ಹಾಗೂ ಎಂ.ಟಿ.ಬಿ. ನಾಗರಾಜ್ ತಮಗೆ ಉತ್ತಮ ಖಾತೆ ಕೊಡಬೇಕೆಂದು ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಖಾತೆ ಹಂಚಿಕೆ ಎಂಬುದು ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕಗ್ಗಂಟಾಗುತ್ತಿದೆ ಎನ್ನಲಾಗಿದೆ. ಹೀಗಾಗಿ ಪಕ್ಷದ ವರಿಷ್ಠರ ಮೇಲೆ ಖಾತೆ ಹಂಚಿಕೆ ಜವಾಬ್ದಾರಿಯನ್ನು ಸಿಎಂ ಬೊಮ್ಮಾಯಿ ಹಾಕಿದ್ದಾರೆ. ಹೀಗಾಗಿ ಶನಿವಾರ ಸಂಜೆ ಅಥವಾ ಭಾನುವಾರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂಬ ಮಾಹಿತಿ ಬಂದಿದೆ.
Recommended Video
ಹೈಕಮಾಂಡ್ ಅಂಗಳಕ್ಕೆ ಖಾತೆ ಹಂಚಿಕೆ
ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ಹೈಕಮಾಂಡ್ ಅಂಗಳಕ್ಕೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವು ಸಚಿವರು ತಾವು ಬಯಸಿದ ಖಾತೆಯನ್ನೇ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಖಾತೆ ಗೊಂದಲವೂ ಹೈಕಮಾಂಡ್ ಅಂಗಳಕ್ಕೆ ಹೋಗಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಚಿವರುಗಳು ಬೇಡಿಕೆ ಇಟ್ಟಿರುವ ಖಾತೆಗಳ ಮಾಹಿತಿಯ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ನಿಂದ ಶುಕ್ರವಾರ ತಡರಾತ್ರಿವರೆಗೂ ಬರುವ ನಿರೀಕ್ಷೆಯಲ್ಲಿ ಇದ್ದರು ಎನ್ನಲಾಗಿದ್ದು, ಶುಕ್ರವಾರ ಹೈಕಮಾಂಡ್ ನಾಯಕರಿಂದ ಪಟ್ಟಿ ಬಾರದ ಹಿನ್ನೆಲೆಯಲ್ಲಿ ಖಾತೆ ಹಂಚಿಕೆ ವಿಳಂಬವಾಗಿದೆ.