ಸರ್ಕಾರಿ ವೆಬ್ಸೈಟ್ಗಳ ಟೆಂಪ್ಲೇಟ್ಗಳನ್ನು ಕನ್ನಡದಲ್ಲಿಯೇ ಸಿದ್ಧಪಡಿಸಲು ಸಿಎಂ ಆದೇಶ
ಬೆಂಗಳೂರು, ಮೇ 17: ಸರ್ಕಾರಕ್ಕೆ ಸಂಬಂಧಿಸಿದ ತಂತ್ರಾಂಶಗಳಲ್ಲಿ ಟೆಂಪ್ಲೆಟ್ಗಳು ಕನ್ನಡ ಭಾಷೆಯಲ್ಲಿಯೇ ಇರಬೇಕೆಂದು ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅವರು ಇಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಇ-ಕನ್ನಡ ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಸಮಗ್ರ ಕನ್ನಡ ಜನತೆಯನ್ನು ಒಳಗೊಂಡ ರೀತಿಯಲ್ಲಿ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕವಿರಬೇಕು. ಮುಂದಿನ ಪೀಳಿಗೆಗೆ ಅನುಕೂಲಕರವಾಗುವ ರೀತಿಯಲ್ಲಿ, ಕನ್ನಡ ಭಾಷೆಯ ಅಭಿವೃದ್ಧಿಯನ್ನು ಒಳಗೊಂಡಂತೆ ಎಲ್ಲ ಆಯಾಮಗಳಲ್ಲೂ ಕನ್ನಡ, ಕನ್ನಡಿಗ, ಕರ್ನಾಟಕ ಅಭ್ಯುದಯವಾಗುವಂತ ಅಂಶಗಳು ವಿಧೇಯಕದಲ್ಲಿರಬೇಕು. ಇದಕ್ಕೆ ನಮ್ಮ ಸರ್ಕಾರ ಅಗತ್ಯ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಆಧುನಿಕ ಕಾಲಘಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದೊಂದಿಗೆ ಭಾಷೆಯ ಬೆಳವಣಿಗೆಯೂ ಆಗಬೇಕು. ತಂತ್ರಜ್ಞಾನ ಮತ್ತು ಭಾಷೆ ಜೊತೆಗೂಡಿ ಕಾರ್ಯ ನಿರ್ವಹಿಸಿದರೆ ಮಾತ್ರವೇ ಭಾಷಾ ಅಭಿವೃದ್ಧಿ ಸಾಧ್ಯವಾಗಲಿದೆ. ಹಿಂದೆ ಕನ್ನಡದಲ್ಲಿ ತಂತ್ರಜ್ಞಾನ ಮತ್ತು ತಂತ್ರಾಂಶಕ್ಕೆ ಸಂಬಂಧಿಸಿದ ಮಾಹಿತಿ ಲಭಿಸುತ್ತಿರುತ್ತಿರಲಿಲ್ಲ. ಈಗ ಕನ್ನಡದಲ್ಲಿಯೂ ಹಲವು ತಂತ್ರಾಂಶಗಳು ಲಭಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಟಿ.ಎಸ್.ನಾಗಾಭರಣ, ಮುಖ್ಯಮಂತ್ರಿಗಳ ಸಲಹೆಗಾರ (ಇ-ಆಡಳಿತ) ರಾದ ಬೇಳೂರು ಸುದರ್ಶನ ಮತ್ತಿತರರು ಹಾಜರಿದ್ದರು.
ಸಿಎಂ ತುರ್ತು ಸಭೆಯ ಮುಖ್ಯಾಂಶಗಳು:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಅಪರ ಮುಖ್ಯ ಕಾರ್ಯದರ್ಶಿಗಳ, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳೊಂದಿಗೆ ನಡೆಸಿದ ತುರ್ತು ಸಭೆಯ ಮುಖ್ಯಾಂಶಗಳು:
1. ಬಜೆಟ್ ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಕೂಡಲೇ ಕ್ರಮ ವಹಿಸಬೇಕು.
2. ನಿಮ್ಮ ಹಂತದಲ್ಲಿ ಕಾರ್ಯಾದೇಶವಾಗಬೇಕು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗಳ ಹಂತದಲ್ಲಿ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಬೇಕು.
3. ಬಜೆಟ್ ನಲ್ಲಿ ಮೂಲಸೌಕರ್ಯ ಅಭಿವೃದ್ಧಿ ಗೆ ಒತ್ತು ನೀಡಲಾಗಿದೆ. ಕಾರ್ಯಾದೇಶದ ಜೊತೆಗೆ ಡಿಪಿಆರ್ ಆಗಬೇಕು. ಅಂದಾಜುಪಟ್ಟಿ, ಟೆಂಡರ್ ಪ್ರಕ್ರಿಯೆ ಭೂ ಸ್ವಾಧೀನ ಪ್ರಕ್ರಿಯೆಗಳು ಕ್ಷಿಪ್ರಗತಿಯಲ್ಲಿ ಆಗಬೇಕು . ಇಲಾಖೆಗಳು ಕಾಲಮಿತಿಯೊಳಗೆ ಅನುಷ್ಠಾನ ಮಾಡಬೇಕು.
4. ಮುಂದುವರೆದ ಕಾರ್ಯಕ್ರಮಗಳು, ಹೊಸ ಘೋಷಣೆಗಳ ವಿಶ್ಲೇಷಣೆ ಅಗತ್ಯ. ಇಲಾಖೆ ಮುಖ್ಯಸ್ಥರಿಗೆ.ಈ ಬಗ್ಗೆ ಸ್ಪಷ್ಟತೆ ಇರಬೇಕು.
5. ಕಾನೂನು ತಿದ್ದುಪಡಿಗಳನ್ನು ಪರಿಗಣಿಸಬೇಕು. ಹೊಸ ಕಾನೂನು ಗಳನ್ನು ಅಧ್ಯಯನ ಮಾಡಿ ಅನುಷ್ಠಾನಕ್ಕೆ ತರಬೇಕು.
6. ಬಜೆಟ್ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳಬಾರದು. ಬಜೆಟ್ ಘೋಷಣೆಗಳಿಗೆ ಪ್ರಸ್ತುತತೆ ಹಾಗೂ ಅರ್ಥಪೂರ್ಣತೆ ನೀಡುವುದು ನಮ್ಮ ಮುಖ್ಯ ಉದ್ದೇಶ. ಇದರ ಅರಿವು ನಿಮಗಿರಬೇಕು.
7. ಮಳೆಗಾಲದಲ್ಲಿ ಚಾಲನೆ ನೀಡಬಹುದಾದ ವೆಬ್ ಸೈಟ್, ಡಿಬಿಟಿ ಮುಂತಾದ ಕಾರ್ಯಕ್ರಮಗಳಿಗೆ ಚಾಲನೆ ನೀಡುವುದು.
8. ಆಗಸ್ಟ್ ಮಾಹೆಯೊಳಗೆ ಎಲ್ಲಾ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕು.
9. ಈ ವರ್ಷ 6500 ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಾಲೆಗಳ ಗುರುತಿಸುವಿಕೆ ಪ್ರಾರಂಭಿಸಿ. ಜೂನ್ ಜುಲೈ ಒಳಗೆ ತಯಾರಿ ನಡೆಸಿ ಆಗಸ್ಟ್ ನಲ್ಲೋ ಕಾಮಗಾರಿ ಪ್ರಾರಂಭವಾಗಬೇಕು.
10. ಪ್ರಾಥಮಿಕ ಆರೋಗ್ಯ ಕೇಂದ್ರ ಗಳ ಮೇಲ್ದರ್ಜೆಗೇರಿಸುವ ಕಾರ್ಯಕ್ರಮ, ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಅಗತ್ಯ.
11. ರಸ್ತೆ, ರೈಲು, ಬಂದರು ಮುಂತಾದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವುದು
12. ಸಾಮಾಜಿಕ ವಲಯ, ಶಿಕ್ಷಣ, ಆರೋಗ್ಯ ಇಲಾಖೆ ಕಾರ್ಯಕ್ರಮ ಗಳನ್ನು ಹೇಗೆ ಅನುಷ್ಠಾನ ಮಾಡುವುದು ಎಂದು ಮೈಕ್ರೋ ಮಟ್ಟದಲ್ಲಿ ಯೋಜನೆ ಆಗಬೇಕು.
13. ಗೋಶಾಲೆ, ಪಶು ಚಿಕಿತ್ಸಾಲಯ, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳ ಕಾರ್ಯಕ್ರಮಗಳು ಅನುಷ್ಠಾನಕ್ಕೆ ತರಲು ಸೂಕ್ತ ಯೋಜನೆ ಅಗತ್ಯ.
14. ಕ್ಯಾನ್ಸರ್ ರೋಗಿಗಳಿಗೆ 10 ಕಿಮೋಥೆರಪಿ ಕೇಂದ್ರಗಳ ಸ್ಥಾಪಿಸುವ ಯೋಜನೆಗೆ ರೂಪುರೇಷೆ ಸಿದ್ಧಪಡಿಸಿ. 16000 ಸೈಕಲ್ಸ್ ಹೆಚ್ಚಿಸಿರುವ ಬಗ್ಗೆ ರೂಪುರೇಷೆ ಸಿದ್ಧಪಡಿಸಿ.
15. ಒಂದು ತಂಡವಾಗಿ, ಅಡಚಣೆಗಳನ್ನು ನಿವಾರಿಸಿ ಕಾರ್ಯ ನಿರ್ವಹಿಸಬೇಕು. ಅನುದಾನ ಹಾಗೂ ಸಮಯದ ಸರಿಯಾದ ನಿರ್ವಹಣೆ ಅತ್ಯವಶ್ಯ.
16. ಕಡತ ವಿಲೇವಾರಿಗೆ ಇಲಾಖೆಗಳಿಗೆ ಗಡುವು ನೀಡಿ. ಸಕಾಲ ಯೋಜನೆಯಡಿ ಕಡತ ವಿಲೇವಾರಿ ಮಾಡುವುದು.
17. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳು ಪೂರ್ಣಗೊಳ್ಳಬೇಕು.
18. ಯಾವುದೇ ನಿಗಮಗಳಲ್ಲಿ ಬಿಡುಗಡೆಯಾಗಿರುವ ಅನುದಾನವನ್ನು ಬಳಸದೇ ಖಾತೆಗಳಲ್ಲಿ ಇಡಬಾರದು.
Recommended Video