ಬಿಜೆಪಿಯ ಅಸಲಿ ಸಿನಿಮಾ ಸೆನ್ಸಾರಿಗೆ: ಇನ್ನೇನು 3-4 ತಿಂಗಳಲ್ಲೇ ಬೊಮ್ಮಾಯಿ ಸರಕಾರಕ್ಕೆ ಗ್ರಹಣ?
ಹಾಲಿ ವಿಧಾನಸಭೆಯ ಇನ್ನುಳಿದ ಅವಧಿ ತನಗೆ ಶಾಶ್ವತ ಅಲ್ಲ ಎನ್ನುವುದು ಅರಿತೋ ಏನೋ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ಜನಸ್ನೇಹಿ ನಿರ್ಧಾರದ ಮೂಲಕ ಜನರಿಗೆ ಹತ್ತಿರವಾಗುತ್ತಿದ್ದಾರೆ. ಯಾಕೆಂದರೆ, ಅವರಿಗೂ ಸಿಎಂ ಹುದ್ದೆ ಬಯಸದೇ ಬಂದ ಭಾಗ್ಯ.
ಕಳೆದ ಮತ್ತು ಈಗಿನ ಬಿಜೆಪಿ ಸರಕಾರದಲ್ಲಿ ಯಡಿಯೂರಪ್ಪನವರು ಪೂರ್ಣಾವಧಿಯನ್ನು ಮುಗಿಸಲು ಆಗಲಿಲ್ಲ. ಆದರೆ, ಅಂದಿನ ಸರಕಾರದಲ್ಲಿ ಮತ್ತು ಇಂದಿನ ಸರಕಾರದಲ್ಲಿ ತಾನು ಬಯಸಿದವರನ್ನೇ ಸಿಎಂ ಅನ್ನಾಗಿ ಮಾಡುವಲ್ಲಿ ಬಿಎಸ್ವೈ ಆಗಿದ್ದರು. ಅದು, ಸದಾನಂದ ಗೌಡ್ರು, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಆಗಿರಬಹುದು.
ಬರೀ ಮಾತಾಡಿ, ಮಾತಾಡಿಯೇ ಸಿಎಂ ಹುದ್ದೆಯನ್ನು ಕಳ್ಕೊಂಡು ಬಿಟ್ರಲ್ಲಾ ಮಿ. ಯತ್ನಾಳ್
ಹಾಗಾಗಿ ಸ್ವಾಭಾವಿಕವಾಗಿ ಅನಿಸುವುದು ಯಡಿಯೂರಪ್ಪನವರು ಬಯಸಿದಷ್ಟು ದಿನ ಬೊಮ್ಮಾಯಿಯವರು ಸಿಎಂ ಆಗಿರಬಹುದು ಎನ್ನುವುದು. ತಾನು ಶಕ್ತಿಕೇಂದ್ರ ಆಗಲು ಬಯಸುವುದಿಲ್ಲ ಎಂದು ಬಿಎಸ್ವೈ ಹೇಳಿದ್ದರೂ, ಸದ್ಯದ ಮಟ್ಟಿಗೆ ಬಿಜೆಪಿಯ ರಾಜ್ಯ ರಾಜಕೀಯ ಅದೇ ದಿಕ್ಕಿನಲ್ಲಿ ಸಾಗುತ್ತಿದೆ.
ಸಂಪುಟ ರಚನೆ ಇದಾದ ನಂತರ ಖಾತೆ ಹಂಚಿಕೆಯ ವಿಚಾರದಲ್ಲಿ ಹಲವರು ಕ್ಯಾತೆ ತೆಗೆದಿರುವುದು ಗೊತ್ತೇ ಇದೆ. ಆನಂದ್ ಸಿಂಗ್ ಮತ್ತು ಎಂ.ಟಿ.ಬಿ ನಾಗರಾಜ್ ಇಬ್ಬರು ಸದ್ಯಕ್ಕೆ ಮಾತ್ರ ಮುನ್ನಲೆಗೆ ಬಂದವರು, ಅಸಲಿ ಸಿನಿಮಾ ಸೆನ್ಸಾಸರಿಗೆ ಹೋಗಿದೆ ಎನ್ನುವ ಬಲವಾದ ಮಾತು ಈ ವಿಚಾರದಲ್ಲಿ ಬಿಜೆಪಿಯಲ್ಲಿ ಕೇಳಿ ಬರುತ್ತಿದೆ.
ನೆಹರೂ ಎಂಬ ದೈತ್ಯ ಶಕ್ತಿಯ ಮುಂದೆ ಬಿಜೆಪಿಯ ಅಲ್ಪಮತಿಗಳು ನಿಲ್ಲಬಲ್ಲರೇ?
ಆನಂದ್ ಸಿಂಗ್, ಎಂಟಿಬಿಯವರನ್ನು ತಣ್ಣಗಾಗಿಸಿರುವುದು ಬೊಮ್ಮಾಯಿ ಪ್ಯಾಚ್ ವರ್ಕ್
ಆನಂದ್ ಸಿಂಗ್ ಮತ್ತು ಎಂಟಿಬಿಯವರನ್ನು ತಣ್ಣಗಾಗಿಸಿರುವುದು ಬೊಮ್ಮಾಯಿಯವರ ಪ್ಯಾಚ್ ವರ್ಕ್ ಎಂದೇ ಬಿಜೆಪಿ ವಲಯದಲ್ಲಿ ಹರಿದಾಡುತ್ತಿರುವ ಸುದ್ದಿ. ಯಾಕೆಂದರೆ, ಇವರು ಸದ್ಯದಲ್ಲೇ ಸಿಡಿಯಲಿದ್ದಾರೆ ಎನ್ನುವುದಕ್ಕೆ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ನಂತರ ಆನಂದ್ ಸಿಂಗ್ ನೀಡಿರುವ ಹೇಳಿಕೆ ಸಾಕ್ಷಿಯಾಗಬಲ್ಲದು. ಮೂಲಗಳ ಪ್ರಕಾರ, ಖಾತೆ ಬದಲಾವಣೆಯ ವಿಚಾರದಲ್ಲಿ ಕೆಲವೇ ದಿನಗಳ ಕಾಲಾವಕಾಶವನ್ನು ಬೊಮ್ಮಾಯಿ ಇವರಿಂದ ಪಡೆದಿರುವುದು.
ಮೈಸೂರಿನ ರಾಮದಾಸ್ ಸಂಘದ ಶಿಸ್ತಿಗೋಸ್ಕರ ಇವರು ಸುಮ್ಮನಿದ್ದಾರೆ
ರಮೇಶ್ ಜಾರಕಿಹೊಳಿ, ಸಿ.ಪಿ. ಯೋಗೇಶ್ವರ್, ರೇಣುಕಾಚಾರ್ಯಯವರು ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿರುವುದು ಗೊತ್ತಿರುವ ವಿಚಾರ. ಮೈಸೂರಿನ ರಾಮದಾಸ್ ಅವರು ಖಾತೆ ಸಿಗಲಿಲ್ಲ ಎನ್ನುವ ವಿಚಾರದಲ್ಲಿ ತೀವ್ರವಾಗಿ ಮುನಿಸಿಕೊಂಡಿದ್ದರೂ, ಸಂಘದ ಶಿಸ್ತಿಗೋಸ್ಕರ ಇವರು ಸುಮ್ಮನಿದ್ದಾರೆ ಎನ್ನುವುದು ಅವರ ಆಪ್ತರ ವಲಯದಿಂದ ಕೇಳಿ ಬರುತ್ತಿರುವ ಮಾತು. ಮೈಸೂರಿಗೆ ಸಿಎಂ ಭೇಟಿ ನೀಡಿದ್ದಾಗ, ಶಿಷ್ಟಾಚಾರಕ್ಕಾದರೂ ಅವರು ಸಿಎಂ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ತಮ್ಮ ಕೇಸ್ ಇನ್ನೂ ಫೈನಲ್ ಆಗಿಲ್ಲ ಎನ್ನುವ ವಿಚಾರದಲ್ಲಿ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿ
ತಮ್ಮ ಕೇಸ್ ಇನ್ನೂ ಫೈನಲ್ ಆಗಿಲ್ಲ ಎನ್ನುವ ವಿಚಾರದಲ್ಲಿ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿಯವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಅತೃಪ್ತರ ಜೊತೆ ಬ್ಯಾಕ್ ಟು ಬ್ಯಾಕ್ ಸಭೆ ನಡೆಸುತ್ತಿದ್ದಾರೆ. ಸಚಿವಾಕಾಂಕ್ಷಿಗಳಾಗಿರುವ ಜಾರಕಿಹೊಳಿ, ರಾಮದಾಸ್, ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಶ್ರೀಮಂತ ಪಾಟೀಲ್ ಮುಂತಾದವರ ಜೊತೆಗೆ, ಮುಖ್ಯಮಂತ್ರಿಗಳು ಪ್ರತೀದಿನ ದೂರವಾಣಿ ಮೂಲಕ ಮಾತುಕತೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯಿದೆ.
Recommended Video
ಮೂರ್ನಾಲ್ಕು ತಿಂಗಳು ಬಸವರಾಜ ಬೊಮ್ಮಾಯಿಯವರು ಪರಿಸ್ಥಿತಿಯನ್ನು ನಿಭಾಯಿಸಬಹುದು
ಬಿಜೆಪಿಯೊಳಗಿನ ಆಂತರಿಕ ಬೇಗುದಿ ಸದ್ಯದ ಮಟ್ಟಿಗೆ ಬೂದಿ ಮುಚ್ಚಿದ ಕೆಂಡ, ಸಂಪುಟದಲ್ಲಿ ಖಾಲಿ ಇರುವ ಜಾಗವನ್ನು ತುಂಬಿಸಲು ಈಗಾಗಲೇ ಬಲವಾದ ಒತ್ತಡ ಶುರುವಾಗಿದೆ. ಸಂಘದ ಮಾತಿಗೆ ನಿಷ್ಟರಾಗಿರುವವರೇ ಬಲಿಪಶುವಾಗುವ ಸಾಧ್ಯತೆ ಹೆಚ್ಚು ಎನ್ನುವ ಮಾತಿದೆ. ಮೂಲಗಳ ಪ್ರಕಾರ, ಇನ್ನೇನು ಅಬ್ಬಬ್ಬಾ ಎಂದರೆ ಮೂರ್ನಾಲ್ಕು ತಿಂಗಳು ಬಸವರಾಜ ಬೊಮ್ಮಾಯಿಯವರು ಪರಿಸ್ಥಿತಿಯನ್ನು ನಿಭಾಯಿಸಬಹುದು. ಅದಾದ ನಂತರ ಓವರ್ ಟು ಯಡಿಯೂರಪ್ಪ ಇಲ್ಲವೇ, ಹೈಕಮಾಂಡ್..