ಶಾಲಾರಂಭದ ಹಿನ್ನೆಲೆಯಲ್ಲಿ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ!
ಬೆಂಗಳೂರು, ಆ. 23: ಒಂದೂವರೆ ವರ್ಷಗಳ ಬಳಿಕ ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದ ಸದಸ್ಯರಿಗೆ ಖಡಕ್ ಆದೇಶ ಮಾಡಿದ್ದಾರೆ. ಕೊರೊನಾ ಮೂರನೇ ಅಲೆ ಆತಂಕದ ಮಧ್ಯೆ ಇಂದಿನಿಂದ (ಆ.23) ಶಾಲೆಗಳು ಆರಂಭವಾಗುತ್ತಿವೆ. ಹೀಗಾಗಿ ರಾಜ್ಯ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿಯೂ ಇದೆ. ಆದರಿಂದ ಸಿಎಂ ಬೊಮ್ಮಾಯಿ ಎಲ್ಲ ಸಚಿವರಿಗೆ ಮಹತ್ವದ ಸೂಚನೆ ರವಾನಿಸಿದ್ದಾರೆ.
ಸರ್ಕಾದ ಮಾರ್ಗಸೂಚಿಯಂತೆ ತರಗತಿಗಳು ಆರಂಭವಾಗುತ್ತಿವೆ. ಆದರೂ ಮಕ್ಕಳು ಹಾಗೂ ಪೋಷಕರಲ್ಲಿ ಕೊರೊನಾ ಕುರಿತು ಆತಂಕವಿದೆ. ಹೀಗಾಗಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಹೀಗಾಗಿ ಮಕ್ಕಳು ಹಾಗೂ ಪೋಷಕರಲ್ಲಿ ಧೈರ್ಯ ತುಂಬುವಂತೆ ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಸರ್ಕಾರದ ಸಚಿವರಿಗೆ ಸೂಚಿಸಿದ್ದಾರೆ. ಈ ಬಗ್ಗೆ ಸಚಿವರಿಗೆ ಕೊಟ್ಟಿರುವ ಮತ್ತೊಂದು ಸೂಚನೆ ಏನು? ಮುಂದಿದೆ ಮಾಹಿತಿ.
ಸಚಿವರಿಗೆ ಸಿಎಂ ಬೊಮ್ಮಾಯಿ ಸೂಚನೆ!
ಇಂದಿನಿಂದ (ಸೋಮವಾರ) 9, 10 ಮತ್ತು ಪಿ.ಯು.ಸಿ ತರಗತಿಗಳು ಪ್ರಾರಂಭವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಚಿವರುಗಳು ಬೆಂಗಳೂರಿನಲ್ಲಿರದೆ, ತಮ್ಮ ತಮ್ಮ ಜಿಲ್ಲೆಗಳಿಗೆ ತೆರಳಿ ಶಾಲೆಗಳಿಗೆ ಭೇಟಿ ಕೊಡಬೇಕು. ಜೊತೆಗೆ ಶಿಕ್ಷಕರನ್ನು ಪ್ರೋತ್ಸಾಹಿಸಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ. ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಬೇಕು ಎಂಬ ಸೂಚನೆಯನ್ನು ಸಿಎಂ ಬೊಮ್ಮಾಯಿ ಸಚಿವರಿಗೆ ಕೊಟ್ಟಿದ್ದಾರೆ. ಶಾಲೆ ಆರಂಭಿಸಲು ಸರ್ಕಾರ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೂ ಸಚಿವರು ಹೋಗಿ ಮಕ್ಕಳು ಹಾಗೂ ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸದಬೇಕು ಎಂದು ಸಿಎಂ ಬೊಮ್ಮಾಯಿ ನಿದೇರ್ಶನ ಕೊಟ್ಟಿದ್ದಾರೆ.
ಪಾಲಕ-ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸಿ
ಸಚಿವರು ತಮ್ಮ ಜಿಲ್ಲೆಯ ಶಾಲೆಗಳಿಗೆ ಭೇಟಿ ಕೊಟ್ಟು ಶಾಲೆಗಳಲ್ಲಿ ತೆಗೆದುಕೊಂಡಿರುವ ಮುಂಜಾಗೃತಾ ಕ್ರಮಗಳನ್ನು ಪರಿಶೀಲಿಸುವುದರಿಂದ ಪಾಲಕ-ಪೋಷಕರಲ್ಲಿ ವಿಶ್ವಾಸ ಮೂಡುತ್ತದೆ. ಈ ನಿರ್ದೇಶನವನ್ನು ಎಲ್ಲ ಸಚಿವರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಸರ್ಕಾರದ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆ. ಸರ್ಕಾರವೂ ಎಲ್ಲ ಹಂತಗಳಲ್ಲಿ ಜನರೊಂದಿಗಿದೆ, ಮಕ್ಕಳ ಭವಿಷ್ಯ ಹಿತದೃಷ್ಟಿಯಿಂದ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂಬುದನ್ನು ಸಚಿವರು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಪೋಷಕರಿಗೆ ಸಿಎಂ ಬೊಮ್ಮಾಯಿ ಮನವಿ!
ಶಾಲೆಗೆ ಬರುವ ಮಕ್ಕಳು ಮತ್ತು ಪಾಲಕರು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು. ಜೊತೆಗೆ ಇತರ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಯಾವುದೇ ಆತಂಕ ಇಲ್ಲದೇ ಸರ್ಕಾರದ ಜತೆ ಸಹಕರಿಸಬೇಕು ಎಂದು ಪಾಲಕರು ಮತ್ತು ಪೋಷಕರರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮನವಿ ಮಾಡಿದ್ದಾರೆ. ಜೊತೆಗೆ ಮಕ್ಕಳ ಹಿತದೃಷ್ಟಿಯಿಂದ ತೆಗೆದು ಕೊಳ್ಳಲಾಗಿರುವ ಕ್ರಮಗಳನ್ನೂ ಕೂಡ ಪೋಷಕರ ಗಮನಕ್ಕೆ ಮುಖ್ಯಮಂತ್ರಿಗಳು ತಂದಿದ್ದಾರೆ.
ಶಾಲೆ ಆರಂಭಕ್ಕೆ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರ ಅನುಮತಿ, ಕೋವಿಡ್ ಸುರಕ್ಷತೆಯೊಂದಿಗೆ ಶಾಲೆಗಳಲ್ಲಿ ಕಲಿಕೆ, ಶಾಲೆಗಳನ್ನು ಸ್ಯಾನಿಟೈಸ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಪರ್ಯಾಯ ದಿನಗಳಲ್ಲಿ ಅಥವಾ ಪಾಳೆಯದಲ್ಲಿ ತರಗತಿಗಳನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದ್ದಾರೆ.
Recommended Video
ಶಾಲೆಗಳಿಗೆ ಭೇಟಿ ನೀಡಲಿದ್ದಾರೆ ಸಿಎಂ ಬೊಮ್ಮಾಯಿ
"ಶಾಲೆಗಳನ್ನು ಪ್ರಾರಂಭಿಸುವಲ್ಲಿ ಅತ್ಯಂತ ಕಾಳಜಿಯನ್ನು ವಹಿಸಲಾಗುವುದು. ಮಕ್ಕಳು ಶಾಲೆಗೆ ಬರಬೇಕು, ಕಲಿಕೆ ಆಗಬೇಕು. ಅದರ ಜೊತೆಗೆ ಕೋವಿಡ್ ಸುರಕ್ಷತೆಯೂ ಆಗಬೇಕು. ಪಾಲಕರು ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಶಾಲೆಗೆ ಆಗಮಿಸುವ ಮಕ್ಕಳಿಗೆ ಧೈರ್ಯ ತುಂಬಿ, ಮಕ್ಕಳ ಆರೋಗ್ಯದ ಬಗ್ಗೆ ಗಮನ ವಹಿಸಿ. ಶಾಲೆಗಳಲ್ಲಿ ಹಂತಹಂತವಾಗಿ ಮಕ್ಕಳ ಹಾಜರಾತಿ ಹೆಚ್ಚಬೇಕು" ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಜೊತೆಗೆ ಇಂದು (ಸೋಮವಾರ) ಬೆಳಿಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರೊಂದಿಗೆ ಮಲ್ಲೇಶ್ವರದ 18ನೇ ಕ್ರಾಸ್ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ನಿರ್ಮಲಾರಾಣಿ ಅನುದಾನಿತ ಪ್ರೌಡ ಶಾಲೆಗೆ ಸಿಎಂ ಬೊಮ್ಮಾಯಿ ಭೇಟಿ ಕೊಟ್ಟು ನೀಡಿ ಪರಿಶೀಲನೆ ನಡೆಸಲಿದ್ದಾರೆ.