ಸಾಲುಮರದ ತಿಮ್ಮಕ್ಕನಿಗೆ ಬಿಡಿಎ ಸೈಟ್ ದಾಖಲೆ ಹಸ್ತಾಂತರ
ಬೆಂಗಳೂರು ಜೂ. 25: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಂಜೂರು ಮಾಡಿದ ನಿವೇಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಶತಾಯುಷಿ ಸಾಲು ಮರದ ತಿಮ್ಮಕ್ಕಗೆ ಹಸ್ತಾಂತರಿಸಿದರು.
ಶನಿವಾರ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಸಾಲುಮರದ ತಿಮ್ಮಕ್ಕ ಸಾಕು ಪುತ್ರನ ಜೊತೆ ಆಗಮಿಸಿದ್ದರು. ಕೆಲವು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವೇಶನ ನೀಡುವ ಭರವಸೆ ನೀಡಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ದೇಶನ ಮೇರೆಗೆ ಬಿಡಿಎ 50x80 ಅಡಿಯ ನಿವೇಶನ ಮಂಜೂರು ಮಾಡಿತ್ತು. ಶನಿವಾರ ಸೈಟ್ಗಳ ಪತ್ರವನ್ನು ಹಂಚಿಕೆ ಮಾಡಲಾಗಿದೆ.
ನಿವೇಶನ ಹಂಚಿಕೆ ; ಮೂರು ದಿನಗಳ ಹಿಂದೆ ಮುಖ್ಯಮಂತ್ರಿಗಳ ನಿವಾಸದಲ್ಲಿ ಬಸವಾಜ ಬೊಮ್ಮಾಯಿಯನ್ನು ಸಾಲುಮರದ ತಿಮ್ಮಕ್ಕ ಭೇಟಿ ಮಾಡಿದ್ದರು. ಯೋಗಕ್ಷೇಮ ವಿಚಾರಿಸಿ ಕೆಲ ಹೊತ್ತು ಮಾತುಕತೆ ನಡೆಸಿದ ನಂತರ ಬೊಮ್ಮಾಯಿ ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದರು.
ಇದೇ ವೇಳೆ ಮುಖ್ಯಮಂತ್ರಿಗಳು ತಿಮ್ಮಕ್ಕಗೆ ಒಂದು ಬಿಡಿಎ ನಿವೇಶನ ಮತ್ತು ಮರಗಳನ್ನು ಬೆಳೆಸಲು ಸೂಕ್ತ ಜಮೀನು ಕೊಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದ್ದರು.
ಭರವಸೆಯಂತೆ ಮೂರೇ ದಿನಕ್ಕೆ ನಾಡಪ್ರಭು ಕೆಂಪೇಗೌಡ ಬಡಾವಣೆಯ 7 ನೇ ಬ್ಲಾಕ್ ಜೆ-ಸೆಕ್ಟರ್ನಲ್ಲಿರುವ 50x80 ಚದರ ಅಡಿ ನಿವೇಶನದ ಕ್ರಯಪತ್ರವನ್ನು ಹಸ್ತಾಂತರ ಮಾಡಲಾಗಿದೆ. ಇನ್ನು ಮರಗಳನ್ನು ನೆಡಲು ತಿಮ್ಮಕ್ಕ ಅವರಿಗೆ ಜಮೀನು ನೀಡುವಂತೆಯೂ ಅಧಿಕಾರಿಗಳಿಗೆ ಬೊಮ್ಮಾಯಿ ಸೂಚಿಸಿದ್ದಾರೆ.