ಕರ್ನಾಟಕದಲ್ಲಿ ಇರೋರಿಗೆ ಕನ್ನಡ ಕಡ್ಡಾಯ; ಇದೊಂದು ಹೊಸ ಮಸೂದೆ!
ಬೆಂಗಳೂರು, ಸೆಪ್ಟೆಂಬರ್ 15: ಕರ್ನಾಟಕದಲ್ಲಿ ಬದುಕುವವರು ಕನ್ನಡ ಕಲಿಯುವುದು ಕಡ್ಡಾಯ. ರಾಜ್ಯದಲ್ಲಿ ಆಡಳಿತ ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಬಳಸುವುದಕ್ಕಾಗಿಯೇ ಹೊಸ ಕಾನೂನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಬುಧವಾರ ವಿಧಾನಸಭೆಯ ಮುಂಗಾರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸುವ ಉದ್ದೇಶದಿಂದ ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು: ಕನ್ನಡ ಕಡ್ಡಾಯ ಆದೇಶ ಬೆನ್ನಲ್ಲೆ ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ
ಪ್ರಸ್ತಾವಿತ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆಯು ಶಾಲಾ-ಕಾಲೇಜುಗಳಲ್ಲಿ ಕನ್ನಡವನ್ನು ಬೋಧನಾ ಮಾಧ್ಯಮವಾಗಿ ಪರಿಚಯಿಸಲು ಮತ್ತು ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯನ್ನು ಸೃಷ್ಟಿಸುವ ಗುರಿಯನ್ನು ಇಟ್ಟುಕೊಂಡು ವಿಧೇಯಕ ಮಂಡಿಸಲು ಸರ್ಕಾರ ಮುಂದಾಗಿದೆ. ಬುಧವಾರ ನಡೆದ ಮುಂಗಾರು ಅಧಿವೇಶನದ ಕಲಾಪದಲ್ಲಿ ಮೊಳಗಿದ ಕನ್ನಡದ ಕೇಕೆ ಹೇಗಿತ್ತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಗಾಂಧಿ ಪ್ರತಿಮೆ ಎದುರು ಜೆಡಿಎಸ್ ಪ್ರತಿಭಟನೆ
ದೇಶದಲ್ಲಿ ಹಿಂದಿ ಭಾಷೆ ಹೇರಿಕೆಯನ್ನು ಜೆಡಿಎಸ್ ವಿರೋಧಿಸಿದೆ. ದೇಶಾದ್ಯಂತ ಹಿಂದಿ ದಿವಸ್ ಆಚರಣೆಯನ್ನು ಖಂಡಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು. ಇದರ ಬೆನ್ನಲ್ಲೇ ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಕುರಿತು ವಿಧೇಯಕ ಮಂಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು. ರಾಜ್ಯದಲ್ಲಿ ಕನ್ನಡವನ್ನು ಹೊರತುಪಡಿಸಿ ಯಾವುದೇ ಭಾಷೆಯನ್ನು ಹೇರಲು ಯಾರೂ ಒತ್ತಾಯಿಸಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೂಡ ಎಲ್ಲಾ ಪ್ರಾದೇಶಿಕ ಭಾಷೆಗಳು ರಾಷ್ಟ್ರ ಭಾಷೆಗಳೇ ಎಂದಿದ್ದಾರೆ ಅಂತಾ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ರಾಜ್ಯದಲ್ಲಿ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ ಎಂದ ಸಿಎಂ
"ನಮ್ಮ ಸರ್ಕಾರ ಕನ್ನಡವನ್ನು ರಕ್ಷಿಸುವುದು ಮಾತ್ರವಲ್ಲದೇ, ಅದನ್ನು ಉತ್ತೇಜಿಸಲು ಸಹ ಬದ್ಧವಾಗಿದೆ. ಕರ್ನಾಟಕದಲ್ಲಿ ನೆಲ, ಜಲ, ಭಾಷೆ, ಜನರ ವಿಚಾರದಲ್ಲಿ ರಾಜಕೀಯವನ್ನು ಬದಿಗಿಟ್ಟು ಈ ಹಿಂದೆಯೂ ಸಾಮೂಹಿಕ ನಿರ್ಧಾರ ಕೈಗೊಂಡಿದ್ದೇವೆ. ಇಷ್ಟು ವರ್ಷಗಳ ಕಾಲ ಕನ್ನಡವನ್ನು ಕಡ್ಡಾಯಗೊಳಿಸಬೇಕೆಂಬ ಬೇಡಿಕೆ. ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರವು ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಆ ಮೂಲಕ ಕನ್ನಡದ ರಕ್ಷಣೆಯ ಬದ್ಧತೆಯನ್ನು ಸಾಬೀತುಪಡಿಸಿದೆ ಎಂದರು.
ವೃತ್ತಿಪರ ಕೋರ್ಸ್ ಅನ್ನು ಕನ್ನಡದಲ್ಲಿ ಕಲಿಸಲು ಒತ್ತು
ಭಾಷೆಯ ಪ್ರಚಾರಕ್ಕಾಗಿ ಕೆಲಸ ಮಾಡುವ ಸಮಿತಿಗಳು ಮತ್ತು ಪ್ರಾಧಿಕಾರಗಳು ಕಾನೂನು ಚೌಕಟ್ಟನ್ನು ಹೊಂದಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅಡಿಯಲ್ಲಿ ಕರ್ನಾಟಕವು ಕನ್ನಡದಲ್ಲಿ ಎಂಜಿನಿಯರಿಂಗ್ ಕೋರ್ಸ್ಗಳನ್ನು ನೀಡುತ್ತಿದ್ದು, ಮೊದಲ ಸೆಮಿಸ್ಟರ್ಗೆ ಪಠ್ಯಕ್ರಮ ಸಿದ್ಧವಾಗಿದೆ. ವೃತ್ತಿಪರ ಕೋರ್ಸ್ಗಳನ್ನು ಕನ್ನಡದಲ್ಲಿ ಕಲಿಸಬೇಕೆಂದು ನಾವು ಬಯಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗಾಭರಣ ಹೇಳಿದ್ದೇನು?
"ಶಾಲೆಗಳು, ಕಾಲೇಜುಗಳು ಮತ್ತು ವೃತ್ತಿಪರ ಕೋರ್ಸ್ಗಳಲ್ಲಿ ಕನ್ನಡವನ್ನು ಬೋಧನಾ ಮಾಧ್ಯಮವಾಗಿ ಬಳಸುವುದು, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ, ಕನ್ನಡದಲ್ಲಿ ಸಾಫ್ಟ್ವೇರ್ ತಯಾರಿಕೆಗೆ ಮಸೂದೆಯು ಒತ್ತು ನೀಡುತ್ತದೆ. ವಾಣಿಜ್ಯ ಸಂಸ್ಥೆಗಳಲ್ಲಿ ಕನ್ನಡ ಬೋರ್ಡ್ಗಳ ಬಳಕೆ ಸೇರಿದಂತೆ ರಾಜ್ಯಾದ್ಯಂತ ಭಾಷೆಯ ಅನುಷ್ಠಾನ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ ಇದುವರೆಗೆ ಕಾನೂನು ವ್ಯಾಪ್ತಿಗೆ ತಂದಿಲ್ಲ. ಕರ್ನಾಟಕ ಕಾನೂನು ಪ್ರಾಧಿಕಾರದೊಂದಿಗೆ ಕೆಡಿಎ ಮತ್ತು ನ್ಯಾಯಮೂರ್ತಿ (ನಿವೃತ್ತ) ಬನ್ನೂರಮಠ ಮಾರ್ಗದರ್ಶನದ ಸಹಾಯದಿಂದ ಮಸೂದೆ ಸಿದ್ಧಪಡಿಸಲಾಗಿದೆ," ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಕೆಡಿಎ) ಅಧ್ಯಕ್ಷ ಟಿ. ಎಸ್. ನಾಗಾಭರಣ ತಿಳಿಸಿದ್ದಾರೆ.