ರಾಜ್ಯದಲ್ಲೂ ತೈಲಬೆಲೆ ಇಳಿಕೆ: ವಿದೇಶಕ್ಕೆ ಹೋಗುವ ಮುನ್ನ ಸಿಎಂ ಬೊಮ್ಮಾಯಿ ಮುನ್ಸೂಚನೆ?
ಬೆಂಗಳೂರು, ಮೇ 23: ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರಕಾರ ತೈಲಬೆಲೆಯ ಮೇಲಿನ ಅಬಕಾರಿ ಸುಂಕವನ್ನು ಕಳೆದ ಶನಿವಾರ (ಮೇ 21) ಕಡಿತಗೊಳಿಸಿತ್ತು. ಇದರಿಂದಾಗಿ, ಪೆಟ್ರೋಲ್ ಬೆಲೆ ಲೀಟರ್ಗೆ 9.5 ರೂಪಾಯಿ ಮತ್ತು ಡೀಸೆಲ್ ಬೆಲೆಯಲ್ಲಿ 7 ರೂಪಾಯಿ ಇಳಿಕೆ ಆಗಿತ್ತು.
Recommended Video
ಕೇಂದ್ರ ಸರಕಾರ ಸುಂಕ ಕಡಿತಗೊಳಿಸಿದ ಬೆನ್ನಲ್ಲೇ ಹಲವು ರಾಜ್ಯಗಳು ತಮ್ಮ ಪಾಲಿನ ಸುಂಕವನ್ನೂ ಕಮ್ಮಿಮಾಡಿತ್ತು. ನಾಲ್ಕು ರಾಜ್ಯಗಳು ಸುಂಕವನ್ನು ಕಡಿತಗೊಳಿಸಿತ್ತು, ಗಮನಿಸಬೇಕಾದ ಅಂಶವೇನಂದರೆ, ಈ ನಾಲ್ಕು ರಾಜ್ಯಗಳಲ್ಲಿ ಬಿಜಿಪಿಯೇತರ ಸರಕಾರವಿದೆ.
ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಇಳಿಸಿದ ಮಹಾರಾಷ್ಟ್ರ ಸರಕಾರ
ಸದ್ಯ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.94 ಮತ್ತು ಡೀಸೆಲ್ ಬೆಲೆ 87.89 ರೂಪಾಯಿ. ಕೇಂದ್ರ ಸರಕಾರದಂತೆ ರಾಜ್ಯ ಸರಕಾರವೂ ವ್ಯಾಟ್ ದರ ಇಳಿಸಬೇಕೆನ್ನುವ ಒತ್ತಡ ಹೆಚ್ಚಾಗುತ್ತಿದೆ. ಸ್ವಪಕ್ಷೀಯರೇ ಬೊಮ್ಮಾಯಿ ಸರಕಾರಕ್ಕೆ ಒತ್ತಾಯವನ್ನು ಮಾಡುತ್ತಿದ್ದಾರೆ.
ಕಳೆದ ಬಾರಿ ಕೇಂದ್ರ ಸರಕಾರ ಸುಂಕವನ್ನು ಇಳಿಸಿದಾಗ, ಮೊದಲು ರಾಜ್ಯದಲ್ಲೂ ವ್ಯಾಟ್ ಇಳಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇತರ ರಾಜ್ಯಗಳಿಗೆ ಮೇಲ್ಪಂಕ್ತಿಯಾಗಿದ್ದರು. ವಿದೇಶ ಪ್ರವಾಸದಲ್ಲಿರುವ ಬೊಮ್ಮಾಯಿ, ವಾಪಸ್ ಆದ ನಂತರ ಮತ್ತೆ ಸುಂಕ ಇಳಿಸುವ ಸಾಧ್ಯತೆಯಿದೆ.
ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತ ಮಾಡಿತ ರಾಜಸ್ಥಾನ ಸರ್ಕಾರ: ಈಗ ಎಷ್ಟಿದೆ ದರ?
ಕರ್ನಾಟಕದಲ್ಲಿ ತೈಲ ಉತ್ಪನ್ನಗಳ ಮೇಲೆ ವ್ಯಾಟ್ ಕಡಿತ
ಕೇಂದ್ರ ಸರಕಾರ ಸುಂಕ ಇಳಿಸಿದ ನಂತರ ಮಹಾರಾಷ್ಟ್ರ, ಕೇರಳ, ರಾಜಸ್ಥಾನ ಮತ್ತು ಒಡಿಶಾ ಸರಕಾರ ಕೂಡಾ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿತ್ತು. ಕಳೆದ ನವೆಂಬರ್ ನಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ಬೆಲೆ ಐದು, ಡೀಸೆಲ್ ಬೆಲೆಯಲ್ಲಿ ಹತ್ತು ರೂಪಾಯಿ ಕಡಿತಗೊಳಿಸಿತ್ತು. ಇದರ ಬೆನ್ನಲ್ಲೇ ಕರ್ನಾಟಕ ಸರಕಾರ ಎರಡೂ ತೈಲ ಉತ್ಪನ್ನಗಳ ಮೇಲೆ ಏಳು ರೂಪಾಯಿ ವ್ಯಾಟ್ ಕಡಿತಗೊಳಿಸಿ, ಜನಸ್ನೇಹಿಯಾಗಿತ್ತು. ಕರ್ನಾಟಕ ಸರಕಾರ ಸುಂಕ ಇಳಿಸಿದ ಬೆನ್ನಲ್ಲೇ ದೇಶದ ಇತರ ಎನ್ಡಿಎ ಸರಕಾರವೆಲ್ಲವೂ ತೆರಿಗೆ ಇಳಿಸಿದ್ದವು.
ವ್ಯಾಟ್ ದರ ಕಮ್ಮಿ ಮಾಡಬೇಕು ಎಂದು ನಿರ್ಮಲಾ ಸೀತಾರಾಮನ್ ಮನವಿ
ಕೇಂದ್ರ ಸರಕಾರ ತೆರಿಗೆ ಇಳಿಸಿದ ನಂತರ ರಾಜ್ಯ ಸರಕಾರವೂ ತಮ್ಮ ಪಾಲಿನ ವ್ಯಾಟ್ ದರವನ್ನು ಕಮ್ಮಿ ಮಾಡಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮನವಿ ಮಾಡಿದ್ದರು. ಕೆಲವು ರಾಜ್ಯಗಳು ಇದಕ್ಕೆ ಸ್ಪಂದಿಸಿದರೆ ಮತ್ತೆ ಕೆಲವು ರಾಜ್ಯಗಳು ವ್ಯಾಟ್ ದರ ಇಳಿಸುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದವು. ಕರ್ನಾಟಕ ಸರಕಾರ ಬಜೆಟ್ ಮಂಡನೆಯ ವೇಳೆ ಮತ್ತಷ್ಟು ತೆರಿಗೆಯನ್ನು ಇಳಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸರಕಾರದ ಮುಂದೆ ಅಂತಹ ಆಲೋಚನೆಯಿಲ್ಲ ಎಂದು ಸಿಎಂ ಹೇಳಿದ್ದರು.
ಎಚ್. ಡಿ. ಕುಮಾರಸ್ವಾಮಿ, ಯಡಿಯೂರಪ್ಪ ಕೂಡಾ ಒತ್ತಾಯ
"ಕೇಂದ್ರ ಸರಕಾರ ಸುಂಕ ಇಳಿಸಿದ್ದರೂ, ರಾಜ್ಯ ಸರಕಾರ ವ್ಯಾಟ್ ಇಳಿಸುವ ವಿಚಾರದಲ್ಲಿ ಮೀನಾಮೇಷ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು"ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಇನ್ನು, "ಕೇಂದ್ರ ಸರಕಾರದಂತೆ ರಾಜ್ಯ ಸರಕಾರವೂ ಸುಂಕವನ್ನು ಇಳಿಸಿದರೆ, ಜನರ ಮೇಲಿನ ಹೊರೆ ಸ್ವಲ್ಪಮಟ್ಟಿಗೆ ಕಮ್ಮಿಯಾಗಲಿದೆ"ಎಂದು ಬಿ. ಎಸ್. ಯಡಿಯೂರಪ್ಪ ಕೂಡಾ ಒತ್ತಾಯಿಸಿದ್ದಾರೆ.
ರಾಜ್ಯದ ವ್ಯಾಟ್ ಭಾಗವನ್ನು ಇಳಿಸುವ ಮುನ್ಸೂಚನೆ ನೀಡಿದ ಸಿಎಂ
ವಿದೇಶ ಪ್ರವಾಸಕ್ಕೆ ಮುನ್ನ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಕೇಂದ್ರ ಸರಕಾರ ಸುಂಕವನ್ನು ಇಳಿಸಿರುವ ಕ್ರಮ ಸ್ವಾಗತಾರ್ಹ. ವಿದೇಶ ಪ್ರವಾಸದಿಂದ ಬಂದ ನಂತರ ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು"ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಆ ಮೂಲಕ, ರಾಜ್ಯದ ವ್ಯಾಟ್ ಭಾಗವನ್ನು ಮತ್ತಷ್ಟು ಇಳಿಸುವ ಮುನ್ಸೂಚನೆಯನ್ನು ಸಿಎಂ ನೀಡಿದ್ದಾರೆ.