ಆತ್ಮಸಾಕ್ಷಿಗೊಪ್ಪಿ ಸಾಧನಾ ಸಮಾವೇಶ ರದ್ದು: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಜುಲೈ 28: ಭಾರತೀಯ ಜನತಾ ಪಕ್ಷದ ಯುವ ಮುಖಂಡ ಪ್ರವೀಣ್ ಹತ್ಯೆಯಾದ ನಂತರ ಜನ ಹಾಗೂ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಆತ್ಮಸಾಕ್ಷಿಯಾಗಿ ಸರ್ಕಾರದ ಸಾಧನಾ ಸಮಾವೇಶ ರದ್ದುಗೊಳಿಸಲು ತಿರ್ಮಾನಿಸಲಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದೆ. ಇದರ ಅಂಗವಾಗಿ ದೊಡ್ಡಬಳ್ಲಾಪುರದಲ್ಲಿ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮ ರದ್ದು ಮಾಡಲಾಗಿದೆ ಎಂದರು.
ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆಯ ಹಿಂದೆ ಪಿಎಫ್ಐ ಕೈವಾಡ: ನಳಿನ್ ಕುಮಾರ್ ಕಟೀಲ್ ಆರೋಪ
ಈ ನಿರ್ಣಯದ ಬಗ್ಗೆ ಹಲವಾರು ವ್ಯಾಖ್ಯಾನಗಳು ಆಗಿವೆ. ಆದರೆ, ಮೊನ್ನೆ ನಡೆದ ಪ್ರವೀಣ್ ಹತ್ಯೆ ಘಟನೆಯ ಬಗ್ಗೆ ಯೋಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಕಾರ್ಯಕರ್ತರು ಹಾಗೂ ಜಿಲ್ಲಾ ಮಂತ್ರಿಗಳೊಂದಿಗೆ ಜೊತೆಗೆ ಚರ್ಚೆ ಮಾಡಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ಪುನರುಚ್ಚರಿಸಿದರು.
ವರ್ಷ ಸಾಧನೆ ಹೇಳುವುದು ಕರ್ತವ್ಯ
ಕರ್ನಾಟಕದಲ್ಲಿ ಬಿಜೆಪಿ ಆಡಳಿತದ ಸರ್ಕಾರಕ್ಕೆ ಮೂರು ವರ್ಷ ತುಂಬಿದೆ. ಎರಡು ವರ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಹಾಗೂ ಕಳೆದ ಒಂದು ವರ್ಷ ನನ್ನ ನೇತೃತ್ವದಲ್ಲಿ ಸರ್ಕಾರ ಸಾಗಿ ಬಂದಿದೆ. ಜನರಿಗೆ ಒಂದು ವರ್ಷ ಏನು ಮಾಡಿದ್ದೇವೆ ಎಂದು ಹೇಳುವುದು ನಮ್ಮ ಕರ್ತವ್ಯ ಹಾಗೂ ಉತ್ತರದಾಯಿತ್ವ. ಈ ಸಂದರ್ಭದಲ್ಲಿ ಮಾಡಬಹುದಾದ ಇನ್ನಷ್ಟು ಕಲ್ಯಾಣ ಕಾರ್ಯಕ್ರಮಗಳನ್ನು ತಿಳಿಸುವ ಸಂದರ್ಭವೂ ಇದು ಹೌದು ಎಂದರು.
ಸಂಪುಟ ಸದಸ್ಯರಿಗೆ ವಂದಿಸಿದ ಬೊಮ್ಮಾಯಿ
ಸಚಿವ ಸಂಪುಟದ ಸಹೋದ್ಯೋಗಿಗಳಿಗೆ, ಪಕ್ಷದ ಕಾರ್ಯಕರ್ತರಿಗೆ, ಸದಸ್ಯರಿಗೆ, ಪದಾಧಿಕಾರಿಗಳಿಗೆ, ಕಾರ್ಯಕರ್ತರಿಗೆ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಜೆ.ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ದೇಶವನ್ನು ಸಮರ್ಥವಾಗಿ ನಡೆಸುತ್ತಿರುವ ಪ್ರಧಾನಿ ಮೋದಿಯವರಿಗೆ ಸವಾಲುಗಳ ಮಧ್ಯೆಯೂ ಸಾಧನೆ ಮಾಡಲು ಎಲ್ಲರು ಸಹಕರಿಸಿದ್ದಾರೆ ಎಂದ ಬೊಮ್ಮಾಯಿ ಅವರೆಲ್ಲರಿಗೂ ಧನ್ಯವಾದ ತಿಳಿಸಿದರು.
ಬದ್ಧತೆಯುಳ್ಳ ಸಚಿವ ಸಂಪುಟ
ಸರ್ಕಾರದ ಸಚಿವ ಸಂಪುಟದಲ್ಲಿ ಅತ್ಯಂತ ದಕ್ಷ ಆಡಳಿತಗಾರಿದ್ದಾರೆ. ಸೇವಾ ಮನೋಭಾವವಿರುವವರು, ಯುವಕರು ಇದ್ದಾರೆ. ಒಟ್ಟಾರೆ ಬದ್ಧತೆ ಇರುವ ಸಚಿವ ಸಂಪುಟ ನಮ್ಮದು. ಇವರೆಲ್ಲರ ಪಾಲು ಒಂದು ವರ್ಷದ ಸಾಧನೆಯಲ್ಲಿ ಅಡಗಿದೆ. ಕೋವಿಡ್ ಸಾಂಕ್ರಾಮಿಕ ಒಂದು ಹಂತಕ್ಕೆ ಬಂದಂಥ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಳ್ಳಲಾಯಿತು. 2 ವರ್ಷ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪ ನವರು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ್ದು, ಅವರಿಗೆ ಸಚಿವ ಸಂಪುಟದ ಸಚಿವರು, ಸಹಕಾರ ನೀಡಿದರು. ವಿಶೇಷವಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಜನರ ಪಾಲ್ಗೊಳ್ಳುವಿಕೆ ಹಾಗೂ ಭಾಗೀಧಾರಿಕೆಯ ಆಡಳಿತ
ಆಡಳಿತ ಯಾರ ಪರವಾಗಿದೆ ಎನ್ನುವುದು ಮುಖ್ಯ. ನಮ್ಮ ನಿರ್ಣಯಗಳ ಮುಖಾಂತರ ಒಟ್ಟಾರೆ ಜನಪರವಾಗಿರುವ ಆಡಳಿತ ನೀಡುವುದು, ರಾಜ್ಯವನ್ನು ಸಮಗ್ರ ಅಭಿವೃದ್ಧಿ ಪಥದತ್ತ ಕೊಂಡೊಯ್ಯವುದು ಉದ್ದೇಶವಾಗಿತ್ತು. ಅದರಂತೆ ಎಲ್ಲರಿಗೂ ಪಾಲುದಾರಿಕೆ ಮತ್ತು ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸುವ ಆಡಳಿತ ಬಿಜೆಪಿ ಸರ್ಕಾರ ನೀಡಿದೆ ಎಂದು ತಿಳಿಸಿದರು.