ಯಡಿಯೂರಪ್ಪ ನೇಮಿಸಿದ್ದ ಸಲಹೆಗಾರರಿಗೆ ಬೊಮ್ಮಾಯಿ 'ಬಿಗ್ ಗೇಟ್ ಪಾಸ್'
ಯಡಿಯೂರಪ್ಪನವರು ನಮ್ಮ ಮಾರ್ಗದರ್ಶಕರು, ಅವರ ಹಾಕಿಕೊಟ್ಟ ದಾರಿಯಲ್ಲೇ ನಡೆಯುತ್ತೇನೆ ಎಂದು ಹೇಳಿದ್ದ ನೂತನ ಸಿಎಂ ಬಸವರಾಜ ಬೊಮ್ಮಾಯಿ, ಅವರ ಸರಕಾರದಲ್ಲಿ ಆಯಕಟ್ಟಿನ ಜಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಲಹೆಗಾರರು/ಅಧಿಕಾರಿಗಳನ್ನು ಎತ್ತಂಗಡಿ ಮಾಡಿದ್ದಾರೆ. ಹಲವು ಹುದ್ದೆಗಳನ್ನೇ ಬೊಮ್ಮಾಯಿ ರದ್ದು ಮಾಡಿದ್ದಾರೆ.
ಮೇಲ್ನೋಟಕ್ಕೆ ಇದು ಯಾವುದೇ ಹೊಸ ಸರಕಾರ/ಮುಖ್ಯಮಂತ್ರಿ ನೇಮಕವಾದಾಗ ನಡೆಯುವ ಆಡಳಿತಾತ್ಮಕ ಪ್ರಕ್ರಿಯೆ ಎಂದೆನಿಸಿದರೂ, ಇದರಲ್ಲಿ ಹಲವು ರಾಜಕೀಯ ಆಯಾಮಗಳಿವೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಅದರಲ್ಲಿ ಒಂದು, ಯಡಿಯೂರಪ್ಪನವರ ಹಿಡಿತದಿಂದ ನಿಧಾನವಾಗಿ ಹೊರಬರುವುದು.
ಇನ್ನೊಂದು, ಆಡಳಿತದಲ್ಲಿ ನಡೆಯುವ ಬೆಳವಣಿಗೆಗಳು, ಆರ್ಥಿಕ ನಿರ್ವಹಣೆಗಳ ವಿಚಾರ ಸೋರಿಕೆಯಾಗದಂತೆ ನೋಡಿಕೊಳ್ಳಲು ಸಿಎಂ ಬೊಮ್ಮಾಯಿ ಈ ನಿರ್ಧಾರಕ್ಕೆ ಬಂದಿರಬಹುದು. ಡಿಪಿಎಆರ್ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಈ ಸಂಬಂಧ ಅಧಿಕೃತ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊರಡಿಸಿದೆ.
ಜುಲೈ 31ಕ್ಕೆ ಈ ಆದೇಶವನ್ನು ಹೊರಡಿಸಲಾಗಿದೆ ಮತ್ತು ಇದರಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳೂ ಸೇರಿದ್ದಾರೆ. ಇವರಲ್ಲಿ ಕೆಲವರು ಮಾಜಿ ಸಿಎಂ ಯಡಿಯೂರಪ್ಪನವರ ಆಪ್ತ ವಲಯದವರು ಎನ್ನುವುದು ಗಮನಿಸಬೇಕಾದ ವಿಚಾರ.
ಆಡಳಿತಾತ್ಮಕ ವೆಚ್ಚವನ್ನು ಕಮ್ಮಿ ಮಾಡುವ ಕೆಲಸವನ್ನು ಮಾಡುತ್ತೇನೆ ಎಂದ ಸಿಎಂ
ಇದರ ಜೊತೆಗೆ, ಯಡಿಯೂರಪ್ಪನವರ ಕಾಲದಲ್ಲಿ ನೇಮಕಗೊಂಡಿದ್ದ ಹತ್ತು ಹುದ್ದೆಗಳನ್ನೇ ರದ್ದುಗೊಳಿಸಲಾಗಿದೆ. ಆಡಳಿತಾತ್ಮಕ ವೆಚ್ಚವನ್ನು ಕಮ್ಮಿ ಮಾಡುವ ಕೆಲಸವನ್ನು ಮೊದಲು ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದರು. ಇದರಲ್ಲಿ ಬಹುತೇಕ ಎಲ್ಲರೂ ಯಡಿಯೂರಪ್ಪನವರ ಆಪ್ತರಾಗಿದ್ದಾರೆ. ಜೊತೆಗೆ, ಹತ್ತೊಂಬತ್ತು ಅಧಿಕಾರಿಗಳನ್ನೂ ಅವರ ಮಾತೃ ಖಾತೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಬಿಎಸ್ವೈ ರಾಜಕೀಯ ಕಾರ್ಯದರ್ಶಿಗಳಾಗಿದ್ದ ಎಂ.ಪಿ. ರೇಣುಕಾಚಾರ್ಯ, ಎನ್.ಆರ್.ಸಂತೋಷ್
ರದ್ದಾಗಿರುವ ಹತ್ತು ಹುದ್ದೆಗಳು ಮತ್ತು ಅದರ ಸಲಹೆಗಾರರು ಎಂದರೆ, ಬಿಎಸ್ವೈ ರಾಜಕೀಯ ಕಾರ್ಯದರ್ಶಿಗಳಾಗಿದ್ದ ಎಂ.ಪಿ. ರೇಣುಕಾಚಾರ್ಯ, ಡಿ.ಎನ್. ಜೀವರಾಜ್, ಎನ್.ಆರ್.ಸಂತೋಷ್ ಹುದ್ದೆ ರದ್ದುಗೊಳಿಸಲಾಗಿದೆ. ಶಿಕ್ಷಣ ಸುಧಾರಣಾ ಸಲಹೆಗಾರ ಪ್ರೊ.ಎಂ.ಆರ್. ದೊರೆಸ್ವಾಮಿ, ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್, ಯಡಿಯೂರಪ್ಪ ಕಾನೂನು ಸಲಹೆಗಾರರಾಗಿದ್ದ ಮೋಹನ್ ಲಿಂಬಿಕಾಯಿ ಪ್ರಮುಖರು.
ಎನ್.ಆರ್.ಸಂತೋಷ್ ಮತ್ತು ರೇಣುಕಾಚಾರ್ಯ ಅವರು ಯಡಿಯೂರಪ್ಪನವರ ಅತ್ಯಂತ ಆಪ್ತರು
ಇದಲ್ಲದೇ, ಯಡಿಯೂರಪ್ಪ ಮಾಧ್ಯಮ ಸಲಹೆಗಾರ ಎನ್. ಭೃಂಗೀಶ್, ಸಿಎಂ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ್, ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಜಿ.ಎಸ್. ಸುನೀಲ್, ಸಿಎಂ ನೀತಿ ನಿರೂಪಣೆ, ಕಾರ್ಯತಂತ್ರ ಸಲಹೆಗಾರ ಪ್ರಶಾಂತ್ ಅವರ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ ಎಂದು ಡಿಪಿಎಆರ್ನಿಂದ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ, ಎನ್.ಆರ್.ಸಂತೋಷ್ ಮತ್ತು ರೇಣುಕಾಚಾರ್ಯ ಅವರು ಯಡಿಯೂರಪ್ಪನವರ ಅತ್ಯಂತ ಆಪ್ತರು. ಸಂತೋಷ್ ಅವರಿಗಾಗಿಯೇ ವಿಶೇಷ ಹುದ್ದೆಯನ್ನು ಯಡಿಯೂರಪ್ಪ ರಚಿಸಿದ್ದರು. ಇನ್ನು, ರೇಣುಕಾಚಾರ್ಯ ಅವರಿಗೆ ಕ್ಯಾಬಿನೆಟ್ ಸ್ಥಾನಮಾನಕ್ಕೆ ಸಮನಾಗಿರುವ ರಾಜಕೀಯ ಕಾರ್ಯದರ್ಶಿ ಸ್ಥಾನವನ್ನು ಬಿಎಸ್ವೈ ನೀಡಿದ್ದರು. ನೂತನ ಸಂಪುಟದಲ್ಲಿ ಈ ಬಾರಿ ರೇಣುಕಾಚಾರ್ಯ ಅವರಿಗೆ ಸ್ಥಾನ ಸಿಗಲಿಲ್ಲ.
Recommended Video
ಯಡಿಯೂರಪ್ಪ ನೇಮಿಸಿದ್ದ ಸಲಹೆಗಾರರಿಗೆ ಬೊಮ್ಮಾಯಿ ಬಿಗ್ ಗೇಟ್ ಪಾಸ್
ಇದರ ಜೊತೆಗೆ, ಬಿಎಸ್ವೈ ಅವಧಿಯಲ್ಲಿ ನೇಮಕವಾಗಿದ್ದ ಸಿಎಂ ಸಲಹೆಗಾರರಾದ ಎಂ.ಲಕ್ಷ್ಮೀನಾರಾಯಣ, ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಎ.ಲೋಕೇಶ್, ವಿಶೇಷಾಧಿಕಾರಿ ಎಚ್.ಎಸ್.ಸತೀಶ್, ಟಿ.ಎಂ.ಸುರೇಶ್, ಹಡಗಲಿ ಅರುಣ್ ಕುಮಾರ್, ಕೆ.ಎಸ್.ಕಿರಣ್ ಕುಮಾರ್ ಸೇರಿದಂತೆ ಹತ್ತೊಂಬತ್ತು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಇದರಲ್ಲಿ, ಸಿಎಂ ಪರಿಹಾರ ನಿಧಿಯ ಲೆಕ್ಕಾಧಿಕಾರಿ, ತಾಂತ್ರಿಕ ಸಲಹೆಗಾರರು, ಮಾಧ್ಯಮ ಸಂಯೋಜನಾಧಿಕಾರಿಗಳೂ, ಮುಖ್ಯಮಂತ್ರಿಗಳ ಶಿಕ್ಷಣ ಸುಧಾರಣೆಗಳ ಸಲಹೆಗಾರರು, ಆಪ್ತ ಕಾರ್ಯದರ್ಶಿಗಳು, ಉಪ ಕಾರ್ಯದರ್ಶಿಗಳು, ಕಾನೂನು ಸಲಹೆಗಾರರ ಆಪ್ತ ಕಾರ್ಯದರ್ಶಿಗಳು, ಸಾಂಸ್ಕೃತಿಕ ಸಮನ್ವಯಾಧಿಕಾರಿಗಳು, ಮಾಧ್ಯಮ ಸಂಯೋಜನಾಧಿಕಾರಿಗಳು, ತಾಂತ್ರಿಕ ಸಲಹೆಗಾರರು ಸೇರಿದ್ದಾರೆ.