ಸಿದ್ದರಾಮಯ್ಯ ಹುಲಿಯಾ ಆದರೆ ಸಿಎಂ ಯಡಿಯೂರಪ್ಪ ರಾಜಾಹುಲಿ
ಬೆಂಗಳೂರು, ಜ. 27: ಮಾಜಿ ಸಿಎಂ ಸಿದ್ದರಾಮಯ್ಯ 'ಹುಲಿಯಾ' ಆದರೆ ಸಿಎಂ ಯಡಿಯೂರಪ್ಪ 'ರಾಜಾಹುಲಿ' ಎಂದು ಕಂದಾಯ ಸಚಿವ ಆರ್. ಅಶೋಕ್ ಸಮರ್ಥನೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಡಿದ್ದ ಟ್ವೀಟ್ಗೆ ಆರ್. ಅಶೋಕ್ ಅವರು ಬೆಂಗಳೂರಿನಲ್ಲಿ ತಿರುಗೇಟು ಕೊಟ್ಟಿದ್ದಾರೆ. ಹುಲಿಯಾಗಿಂತ ರಾಜಾಹುಲಿ ದೊಡ್ಡದು. ರಾಜಾಹುಲಿಗೆ ಸರ್ಕಾರ ಹೇಗೆ ನಡೆಸಬೇಕು ಎಂಬುದು ಗೊತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅದನ್ನು ಸಿಎಂ ಯಡಿಯೂರಪ್ಪ ಅವರಿಗೆ ಹೇಳಿಕೊಡುವ ಅಗತ್ಯ ಇಲ್ಲ ಎಂದಿದ್ದಾರೆ.
ರಾಜ್ಯದ ಖಜಾನೆ ಖಾಲಿಯಾಗುತ್ತಿದೆ, ಅಧಿಕಾರಿಗಳು ಬಜೆಟ್ ಮಾಡುವುದು ಹೇಗೆ ಎಂದು ತಲೆಮೇಲೆ ಕೈಯಿಟ್ಟು ಕೂತಿದ್ದಾರೆ. ಯಡಿಯೂರಪ್ಪ ಅವರೇ, ಕೈಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ರಾಜ್ಯದ ಹಿತವನ್ನು ಬಲಿಕೊಡಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಗೆದ್ದವರಿಗೆ ಮಾತ್ರ ಮಂತ್ರಿ ಪದವಿ ಎಂದ ಆರ್. ಅಶೋಕ್
ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಈ ಹಿಂದೆಯೇ ಮಾತುಕೊಟ್ಟಂತೆ ಉಪಚುನಾವಣೆಯಲ್ಲಿ ಗೆದ್ದಿರುವ 11 ಜನರಿಗೆ ಮಾತ್ರ ಸಚಿವ ಸ್ಥಾನ ಸಿಗುತ್ತದೆ. ಚುನಾವಣೆಯಲ್ಲಿ ಸೋತವರಿಗೆ ಸಧ್ಯಕ್ಕೆ ಸಚಿವ ಸ್ಥಾನ ಸಿಗುವುದಿಲ್ಲ. ಈ ಸಂಬಂಧ ಯಡಿಯೂರಪ್ಪ ಅವರು ಸಹ ಸೋತವರೊಂದಿಗೆ ಮಾತುಕತೆ ನಡೆಸಿ, ಅವರನ್ನೂ ಒಪ್ಪಿಸಿದ್ದಾರೆ.
'ಸೋತವರಿಗೇಕೆ ಮಂತ್ರಿಸ್ಥಾನ' ಚರ್ಚೆಯ ಹಿಂದೆ ಎಂಟಿಬಿ ಹಣಿಯುವ ತಂತ್ರ?
ಗೆದ್ದ ಮೇಲೆ ಅವರಿಗೆ ಮಂತ್ರಿಸ್ಥಾನ ಕೊಡಬೇಕು ಅಂತ ಸುಪ್ರೀಂಕೋರ್ಟ್ ಕೂಡ ತನ್ನ ಆದೇಶದಲ್ಲಿ ಹೇಳಿದೆ. ಹಾಗಾಗಿ ಸೋತವರಿಗೆ ಮಂತ್ರಿ ಸ್ಥಾನ ಕೊಡುವ ಪ್ರಸ್ತಾವನೆ ಸರ್ಕಾರದ ಮುಂದೆ ಈಗ ಇಲ್ಲ. ಸಂಪುಟ ವಿಸ್ತರಣೆ ಸಧ್ಯದಲ್ಲಿ ಆಗಲಿದೆ. ಆದರೆ ಇನ್ನೂ ದಿನ ನಿಗದಿ ಮಾಡಿಲ್ಲ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸಿಎಂ ಯಡಿಯೂರಪ್ಪ ಅವರೊಂದಿಗೆ ಸಂಪುಟ ವಿಸ್ತರಣೆ ಬಗ್ಗೆ ಈಗಾಗಲೇ ಮಾತನಾಡಿದ್ದಾರೆ ಎಂದು ಆರ್. ಅಶೋಕ್ ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಅತಂತ್ರ
ಕಾಂಗ್ರೆಸ್ ಪಕ್ಷದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಧ್ಯದಲ್ಲೇ ಗೇಟ್ಪಾಸ್ ಸಿಗಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಇದೇ ಸಂದರ್ಭದಲ್ಲಿ ಭವಿಷ್ಯ ನುಡಿದಿದ್ದಾರೆ. ಬಿಜೆಪಿಗೆ ಹೋಗಿದ್ದ ಪಕ್ಷಾಂತರಿಗಳು ಅಂತಂತ್ರರಾಗಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಅಶೋಕ್ ತಿರುಗೇಟು ಕೊಟ್ಟಿದ್ದಾರೆ. ಅತಂತ್ರರಾಗಿರೋದು ಸಿದ್ದರಾಮಯ್ಯನವರು. ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಅವರಿಗೆ ಗೇಟ್ಪಾಸ್ ಕೊಡುತ್ತಾರೆ. ಅದಕ್ಕಾಗಿನೆ ಸಿದ್ದರಾಮಯ್ಯ ಈಗ ಮತ್ತೆ ಲಾಯರ್ ಗಿರಿ ಮಾಡಲು ಹೊರಟಿದ್ದಾರೆ.
ಸಿಎಂ ಸ್ಥಾನದಿಂದ ಯಡಿಯೂರಪ್ಪ ಇಳಿಸಲು ಶಾ-ಮೋದಿ ತಂತ್ರ?
ಸಿದ್ದರಾಮಯ್ಯ ಮೊದಲು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲಿ. ಅವರು ರಾಜಕೀಯ ಬಿಟ್ಟು ವಕೀಲಿಕೆ ಆರಂಭಿಸಲು ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಪ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ್ದ ನಳಿನಿಯವರನ್ನು ಬೆಂಬಲಿಸುತ್ತಿದ್ದಾರೆ. ಇದನ್ನು ನೋಡಿದ್ರೆ ಅವರು ಹಿಂದೆ ಪಿಎಫ್ಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದ ರೀತಿಯಲ್ಲೇ ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರ ಪರ ವಕಾಲತ್ತು ವಹಿಸಿಕೊಳ್ಳಲು ಸಿದ್ದರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ನಾವು ಸಂವಿಧಾನ ಉಳಿಸುತ್ತೇವೆ
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂವಿಧಾನ ಉಳಿಸುವಂತೆ ಕರೆ ಕೊಟ್ಟಿದ್ದಾರೆ. ಮೊದಲು ಅವರು ಕಾಂಗ್ರೆಸ್ ಉಳಿಸಿಕೊಳ್ಳಲಿ. ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡಿಕೊಳ್ಳಲಿ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಪಕ್ಷ ಕಾಂಗ್ರೆಸ್. ಅದರ ವಿರುದ್ದ ಹೋರಾಡಿದ್ದವರು, ಎರಡನೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದವರು ಆರ್ಎಸ್ಎಸ್ ಸಂಘಟನೆ. ಆರ್ಎಸ್ಎಸ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ ಎಂದಿದ್ದಾರೆ.
ಸಂಪುಟ ವಿಸ್ತರಣೆ ಆಗಲಿದೆ, ಪುನರ್ ರಚನೆ ಆಗಲ್ಲ
ಸರ್ಕಾರ ಉಳಿಸಲು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ದ ಎಂದು ಕಾನೂನು ಸಚಿವ ಮಾಧುಸ್ವಾಮಿ ನೀಡಿರುವ ಹೇಳಿಕೆ ಅವರ ವೈಯಕ್ತಿಕ ನಿರ್ಧಾರ. ಆದರೆ ಈ ಬಾರಿ ಸಚಿವ ಸಂಪುಟ ವಿಸ್ತರಣೆ ಮಾತ್ರವೇ ಹೊರತು ಪುನಾರಚನೆ ಇಲ್ಲ. ಉಪ ಚುನಾವಣೆಯಲ್ಲಿ ಗೆದ್ದಿರುವ 11 ಜನರಿಗೆ ಸಚಿವ ಸ್ಥಾನ ಕೊಡುವುದು ನಿಶ್ಚಿತ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.