ಮಳೆಯಿಂದ ಮನೆ ಕಳೆದುಕೊಂಡವರಿಗೆ 2 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಬೆಂಗಳೂರು, ಆಗಸ್ಟ್ 18: ಕೊಡಗು ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿ ಪ್ರವಾಹ ಮತ್ತು ಅತಿಯಾದ ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ಮುಖ್ಯಮಂತ್ರಿಗಳು 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹದ ವೈಮಾನಿಕ ಸಮೀಕ್ಷೆಗೆ ತೆರಳುವ ಮುನ್ನಾ ಮಾಡಿದ ಅಧಿಕಾರಿಗಳ ಸಭೆಯಲ್ಲಿ ವಿಷಯ ಚರ್ಚಿಸಿ ಪರಿಹಾರವನ್ನು ಘೋಷಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಕಾರ್ಯಾಚರಣೆ ಮೂಲಕ ಈವರೆಗೆ 3500 ಜನರನ್ನು ರಕ್ಷಿಸಲಾಗಿದೆ. ಜೋಡುಪಾಲದಲ್ಲಿ 347 ಜನರನ್ನು ರಕ್ಷಿಸಲಾಗಿದೆ. ಕೊಡಗು ಭಾಗದಲ್ಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 31 ಗಂಜಿ ಕೇಂದ್ರಗಳಲ್ಲಿ 2250 ಜನರು ಆಶ್ರಯ ಪಡೆದಿದ್ದಾರೆ ಎಂದು ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ.
ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ
ಪ್ರವಾಹದ ವೈಮಾನಿಕ ಸಮೀಕ್ಷೆ ನಡೆಸಿದ ಕುಮಾರಸ್ವಾಮಿ ಅವರು, ಜಿಲ್ಲೆಯ ಸುಮಾರು 800 ಮನೆಗಳು ಸಂಪೂರ್ಣ ಹಾನಿಗೊಳಲಾಗಿವೆ. ಅವುಗಳ ದಾಖಲೆಗಳೂ ಹಾಳಾಗಿವೆ ಅವರಿಗೆ ಪ್ರತಿ ನೀಡುವ ವ್ಯವಸ್ಥೆ ಮಾಡಲಾಗುವುದು, ಪರಿಹಾರವನ್ನೂ ವಿತರಿಸಲಾಗುವುದು ಎಂದರು.
ಸೇನಾ ವಿಮಾನದಲ್ಲಿ ಕೊಡಗು ಪ್ರವಾಹ ಸಮೀಕ್ಷೆಗೆ ಹೊರಟ ಎಚ್ಡಿಕೆ
ಗಂಜಿ ಕೇಂದ್ರಗಳಿಗೆ ಭೇಟಿ
ಮಡಿಕೇರಿಯಲ್ಲಿ ಅತಿವೃಷ್ಟಿಯ ಅಬ್ಬರಕ್ಕೆ ನೊಂದ ನಿರಾಶ್ರಿತರಿಗಾಗಿ ಆರಂಭಿಸಿರುವ ಗಂಜಿ ಕೇಂದ್ರಗಳಿಗೆ ಭೇಟಿ ಕೊಟ್ಟ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ನೊಂದವರಿಗೆ ಸಾಂತ್ವನ ಹೇಳಿದರು.
ಈಗಾಗಲೇ 200 ಕೋಟಿ ಬಿಡುಗಡೆ
ಈಗಾಗಲೇ ಮುಖ್ಯಮಂತ್ರಿಗಳು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಂರಕ್ಷಣೆ ಸೇರಿದಂತೆ ಇತರ ಕಾರ್ಯಗಳಿಗಾಗಿ 200 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಕೇಂದ್ರದ ನೆರವನ್ನೂ ಕೇಳಿದ್ದಾರೆ.
ಭೂಕಂಪನ ವದಂತಿ ನಂಬಬೇಡಿ
ಕೊಡಗು ಜಿಲ್ಲೆಯಲ್ಲಿ ಭೂಕಂಪನವಾಗಲಿದೆ ಎಂಬ ಸುದ್ದಿ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಅಥವಾ ಭೂ ವಿಜ್ಞಾನ ಇಲಾಖೆ ಯಾವುದೇ ಮುನ್ಸೂಚನೆ ನೀಡಿಲ್ಲ. ಆದ್ದರಿಂದ ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದಾಗಿ ಕೊಡಗು ಜಿಲ್ಲೆ ಜಿಲ್ಲಾಧಿಕಾರಿ ವಿನಂತಿಸಿದ್ದಾರೆ.
|
ನೆರವಿಗೆ ಮನವಿ
ಸಾರ್ವಜನಿಕರು, ಉದ್ಯಮಿಗಳು, ಸೇವಾ ಸಂಸ್ಥೆಗಳು ಕೊಡಗಿನ ಜನರಿಗೆ ಉದಾರವಾಗಿ ನೆರವು ನೀಡುವಂತೆಯೂ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ. ಚೆಕ್ ಅಥವಾ ಡಿಡಿ ರೂಪದಲ್ಲಿ ಹಣವನ್ನು Chief Minister's Calamity Relief Fund, Room No.235, Second floor, Vidhana Soudha, Bangalore 560001 ಈ ವಿಳಾಸಕ್ಕೆ ಕಳುಹಿಸಲು ಕೋರಿದೆ.