ಶೂನ್ಯ ಫಲಿತಾಂಶ ಪಡೆದ 35 ಶಾಲೆಗಳ ಮಂಜೂರಾತಿ ರದ್ದು: ಆದೇಶ
ಬೆಂಗಳೂರು, ಮೇ 26: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶ ಪಡೆದ ರಾಜ್ಯದ ಆರು ಅನುದಾನಿತ ಹಾಗೂ 35 ಅನುದಾನ ರಹಿತ ಶಾಲೆಗಳ ವಿರುದ್ಧ ಖಡಕ್ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.
ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಶಾಲೆಗಳ ವೇತನಾನುದಾನ ಮಂಜೂರಾತಿ ರದ್ದು ಹಾಗೂ 35 ಅನುದಾನರಹಿತ ಶಾಲೆಗಳ ಅನುಮತಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದ್ದು, ಈ ಸಾಲಿನಿಂದಲೇ ಈ ಆದೇಶ ಅನ್ವಯಯವಾಗಲಿದೆ.
ಶಾಲಾ ಬೋಧನ ಅವಧಿಯಲ್ಲಿ ಶಿಕ್ಷಕರಿಗೆ ಮೊಬೈಲ್ ನಿಷೇಧ
ಶಿಕ್ಷಣ ಇಲಾಖೆಯ ಹಲವು ಯೋಜನೆಗಳ ಮಧ್ಯೆಯೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದ ಹಲವು ಜಿಲ್ಲೆಗಳು ನಿರೀಕ್ಷೆಯಂತೆ ಸಾಧನೆ ಮಾಡಲಾಗುತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕಠಿಣ ನಿರ್ಧಾರ ಕೈಗೊಂಡಿದೆ.
ಬೆಂಗಳೂರಿನ ಯಶವಂತಪುರದಲ್ಲಿರುವ ಶ್ರೀ ವೀಣಾಶಾರದಾ ಪ್ರೌಢಶಾಲೆ, ಬೆಂಗಳೂರು ಉತ್ತರದ ಮಾಗಡಿ ರಸ್ತೆಯಲ್ಲಿರುವ ಬಾಪೂಜಿ ವಸತಿ ಪ್ರೌಢಶಾಲೆ, ಶ್ರೀರಾಮಪುರದ ಕಾರ್ಪೊರೇಷನ್ ಬಾಲಕರ ಪ್ರೌಢಶಾಲೆ, ಹುಬ್ಬಳ್ಳಿ ನಗರದ ಧಾರವಾಡದ ಕರ್ನಾಟಕ ತಮಿಳ್ ಮಾಧ್ಯಮ ಪ್ರೌಢಶಾಲೆ, ಬೆಳಗಾವಿಯ ರಂಗುಬಾಯಿ ಭೋಸಲೆ ಬಾಲಕರಿಯರ ಪ್ರೌಢಶಾಲೆ ಹಾಗೂ ಬೀದರ್ನ ಮೈಲೂರಿನಲ್ಲಿರುವ ರಾಮಜಿ ಸಕ್ಪಾಲ್ ಪ್ರೌಢಶಾಲೆಗಳು ಶೂನ್ಯ ಫಲಿತಾಂಶ ಪಡೆದಿರುವುದರಿಂದ ಇವುಗಳ ವೇತನಾದಾನ ರದ್ದು ಮಾಡುವಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಆದೇಶ ಹೊರಡಿಸಿದ್ದಾರೆ.