ಪ್ರಾಥಮಿಕ ಶಾಲೆಗಳಲ್ಲಿ 35 ಲಕ್ಷ ಮಕ್ಕಳು: ಅವರ ಭವಿಷ್ಯವೇನು?
ಬೆಂಗಳೂರು: ಶಾಲೆಗಳನ್ನು ಪ್ರಾರಂಭಿಸುವ ವಿಷಯ ಮತ್ತೆ ಮುನ್ನೆಲೆಗೆ ಬಂದಿದ್ದು, ಕೋವಿಡ್ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇರುವ ಇರುವ ಜಿಲ್ಲೆಗಳಲ್ಲಿ 5ರಿಂದ12ನೇ ತರಗತಿವರೆಗೆ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ. 1ರಿಂದ 5ನೇ ತರಗತಿವರೆಗಿನ ಶಾಲೆಗಳ ಆರಂಭ ಸಧ್ಯಕ್ಕೆ ಇಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಆದರೆ, ಪ್ರಾಥಮಿಕ ಶಾಲೆಯ ಮಕ್ಕಳ ಭವಿಷ್ಯ ಏನು ಎಂಬ ಪ್ರಶ್ನೆ ಎದುರಾಗಿದೆ.
ಆರೋಗ್ಯದ ದೃಷ್ಟಿಯಿಂದ ಚಿಕ್ಕ ಮಕ್ಕಗಳನ್ನು ಶಾಲೆಗೆ ಕರೆತರುವುದು ಬೇಡ ಎಂಬ ತಜ್ಞರ ಸಲಹೆ ಮೇರೆಗೆ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲು ಹಿಂದೇಟು ಹಾಕಲಾಗುತ್ತಿದೆ. ಕೋವಿಡ್ ಮೂರನೇ ಅಲೆಯ ಭೀತಿ ಇದ್ದು, ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡಲಿದೆ ಎಂಬ ಮುನ್ಸೂಚನೆಗಳು ಪೋಷಕರನ್ನು ಮತ್ತಷ್ಟು ಆತಂಕಕ್ಕೆ ಕಾರಣ ಮಾಡಿರಬಹುದು. ಆದರೆ, ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಸೇರಿ 35 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಈ ಬಹುಸಂಖ್ಯಾತ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಏನು ಮಾಡುತ್ತಿದೆ ಎಂಬುದು ಪ್ರಶ್ನೆಯಾಗಿದೆ.
ಶೈಕ್ಷಣಿಕ ದೃಷ್ಟಿಯಿಂದ ಪ್ರಾಥಮಿಕ ಶಾಲಾ ಹಂತ ಬಹಳ ಮಹತ್ವ ಹೊಂದಿವೆ. ಮಕ್ಕಳು ತಮ್ಮ ಪೋಷಕರು ಮತ್ತು ಮನೆಯಿಂದ ಹೊರಬಂದು ಹೊಸ ಜಗತ್ತಿನಲ್ಲಿ ಬದುಕುವಂತಹ ರೂಢಿಯನ್ನು ಮಾಡಿಕೊಳ್ಳುವುದು ಇದೇ ವಯಸ್ಸಿನಲ್ಲಿ. ಅಲ್ಲದೆ, ಅಕ್ಷರಾಭ್ಯಾಸ ಪ್ರಾರಂಭ ಮಾಡಿಸಬೇಕಾಗುತ್ತದೆ, ಬೌದ್ಧಿಕ ಬೆಳವಣಿಗೆಗೆ ಸ್ಪಷ್ಟ ಆಯಾಮಗಳನ್ನು ನೀಡಬೇಕಾಗುತ್ತದೆ. ಆದರೆ, ಕೋವಿಡ್ ಕಾರಣದಿಂದಾಗಿ ಮಕ್ಕಳು ಕಳೆದ ಒಂದೂವರೆ ವರ್ಷದಿಂದ ಮನೆಯಿಂದ ಹೊರಬರುವುದೇ ಅಪರೂಪವಾಗಿದೆ.
ಖಾಸಗಿ ಶಾಲೆಗಳು ಮಕ್ಕಳಿಗೆ ಪ್ರವೇಶ ನೀಡಿ ಆನ್ಲೈನ್ ಮೂಲಕ ಶಿಕ್ಷಣ ನೀಡುತ್ತಿವೆ. ಮನಸ್ಸಿಲ್ಲದ ಮನಸ್ಸಿನಿಂದ ಮಕ್ಕಳೂ ಸಹ ಲ್ಯಾಪ್ಟಾಪ್, ಮೊಬೈಲ್ ಮುಂದೆ ಕುಳಿತು ಪಾಠ ಕೇಳುತ್ತಿದ್ದಾರೆ. ಆದರೆ, ಅವರ ಶೈಕ್ಷಣಿಕ ದೃಷ್ಟಿಯಿಂದ ಇದು ಹೆಚ್ಚಿನ ಪರಿಣಾಮ ಉಂಟುಮಾಡದು. ಎಲ್ಲ ಮಕ್ಕಳು ಸಹವರ್ತಿಯಾಗಿ ತರಗತಿಗಳಲ್ಲಿ ಕುಳಿತು ಪಾಠ ಕೇಳಿದರೆ ಮಾತ್ರ ಅವರಿಗೆ ಮನನವಾಗಿ ಅದು ಬಹುಕಾಲ ಉಳಿಯಲು ಸಾಧ್ಯ. ಈಗ ನಡೆಯುತ್ತಿರುವುದು ಕಾಟಾಚಾರಕ್ಕೆ ಮಾತ್ರ ಎಂದು ಶಿಕ್ಷಣ ತಜ್ಞರು, ಪೋಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸೋಮವಾರ ನಡೆಯುವ ಭಾರತ ಬಂದ್ ಗೆ ಖಾಸಗಿ ಶಾಲಾ ಶಿಕ್ಷಕರು ಹಸಿರು ಬಟ್ಟೆ ಧರಿಸಿ ಬೆಂಬಲಿಸಲಿದ್ದಾರೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳಿದರು.#Bharathbandh #Karnataka #Privateschools pic.twitter.com/OT5CdkFv8h
— oneindiakannada (@OneindiaKannada) September 25, 2021
ಗ್ರಾಮೀಣ ಮಕ್ಕಳನ್ನು ಕೇಳುವವರಿಲ್ಲ:
ನಗರ ಪ್ರದೇಶಗಳ ಖಾಸಗಿ ಶಾಲೆಗಳು ಮಕ್ಕಳಿಗೆ ಸ್ವಲ್ಪಮಟ್ಟಿಗೆ ಆನ್ಲೈನ್ ತರಗತಿಗಳು ನಡೆಯುತ್ತಿವೆ. ಆದರೆ, ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದಿರುವ ಮಕ್ಕಳಿಗೆ ಯಾವುದೇ ಸೌಲಭ್ಯಗಳೂ ಸಿಗುತ್ತಿಲ್ಲ. ಕೋವಿಡ್ ಕಾರಣದಿಂದಾಗಿ ಬಹುತೇಕ ಗ್ರಾಮೀಣ ಪ್ರದೇಶದ ಜನರು ಮರಳಿ ತಮ್ಮ ಗ್ರಾಮಗಳತ್ತ ಮುಖ ಮಾಡಿದ್ದರಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಈ ಬಾರಿ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಪ್ರತಿನಿತ್ಯ ಆನ್ಲೈನ್ ತರಗತಿಗಳನ್ನು ಮಾಡಬೇಕು ಎಂಬುದರ ಬಗ್ಗೆ ಶಿಕ್ಷಣ ಇಲಾಖೆ ಯಾವುದೇ ಸ್ಪಷ್ಟ ನಿರ್ದೇಶನಗಳನ್ನು ನೀಡಿಲ್ಲ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಕ್ಷಕರೇ ಅಲ್ಲಲ್ಲಿ ಆನ್ಲೈನ್ ತರಗತಿ ನಡೆಸುತ್ತಿದ್ದಾರೆ. ಆನ್ಲೈನ್ ತರಗತಿ ನಡೆಸಿದ ವಿಡಿಯೊ ತುಣುಕುಗಳನ್ನು ಪೋಷಕರ ಮೊಬೈಲ್ಗಳಿಗೆ ಕಳುಹಿಸಿ, ಮಕ್ಕಳಿಗೆ ತೋರಿಸುವಂತೆ ಪ್ರೇರೇಪಿಸುತ್ತಿದ್ದಾರೆ. ವಾರಕ್ಕೆ ಒಂದು ಬಾರಿ ಮಕ್ಕಳನ್ನು ಶಾಲೆಗೆ ಕರೆಯಿಸಿ ಮನೆಪಾಠದ ವಿಷಯಗಳನ್ನು ಬರೆದು ಕಳುಹಿಸುತ್ತಿದ್ದಾರೆ. ಮೇಲಿನ ಅಧಿಕಾರಿಗಳ ಬೆದರಿಕೆ ನಂತರ ಇದನ್ನೂ ಇದೂ ಸ್ಥಗಿತ ಆಗುತ್ತಿದೆ.
ಶಾಲೆಗಳು ಕೇವಲ ಶಾಲೆಗಳಲ್ಲ:
ಪ್ರತಿಷ್ಠಿತ ಶಾಲೆಗಳಲ್ಲಿ ಓದುವಂತಹ ಮಕ್ಕಳ ಕುಟುಂಬದ ಆರ್ಥಿಕ ಸ್ಥಿತಿಗತಿ ಬಿನ್ನವಾಗಿರುತ್ತದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಓದುತ್ತಿರುವವರು, ಅದರಲ್ಲೂ ಬಡ ಕೂಲಿ ಕಾರ್ಮಿಕರ ಸ್ಥಿತಿಗತಿಯೇ ಬೇರೆ. ಹೀಗಾಗಿ ಅವರ ಪಾಲಿಗೆ ಶಾಲೆಗಳು ಕೇವಲ ಶಾಲೆಗಳಾಗಿರದೆ ಅವರ ಆರ್ಥಿಕ ಮತ್ತು ಸಾಂಸ್ಕೃತಿಕ ಅಗತ್ಯತೆಗಳನ್ನು ಪೂರೈಸುವ ಕೇಂದ್ರಗಳೂ ಆಗಿರುತ್ತವೆ. ಶಾಲೆಯಲ್ಲಿ ನೀಡುವಂತಹ ಮಧ್ಯಾಹ್ನದ ಬಿಸಿಯೂಟ ಅವರ ಮನೋಬಲ ಮತ್ತು ದೈಹಿಕ ಬಲ ಹೆಚ್ಚಿಸುತ್ತದೆ. ಸಾಂಸ್ಕೃತಿಕ ಚಟುವಟಿಕೆಗಳು ಅವರಿಗೆ ನಿಲುಕದ ಜಗತ್ತನ್ನು ಪರಿಚಯಿಸುತ್ತಿರುತ್ತದೆ. ಇಂತಹ ಮಕ್ಕಳು ಎಲ್ಲದರಿಂದ ವಂಚಿತರಾಗಿದ್ದಾರೆ. ಇದು ಬಾಲ ಕಾರ್ಮಿಕ ಪದ್ಧತಿ, ಜೀತ ಪದ್ಧತಿಗೆ ಕಾರಣ ಆಗಬಹುದು ಎಂಬ ಆತಂಕ ಎದುರಾಗಿದೆ.
ಶಾಲೆ ಆರಂಭವೇ ಮಾರ್ಗ:
"ಜಗತ್ತಿನ ಎಲ್ಲ ತಜ್ಞ ವೈದ್ಯರುಗಳು ಕೋವಿಡ್ ಮಕ್ಕಳ ಮೇಲೆ ಏನೇನೂ ಪರಿಣಾಮ ಉಂಟು ಮಾಡುವುದಿಲ್ಲ. ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿ. ಹಿರಿಯ ಪ್ರಾಥಮಿಕ ಮತ್ತು ಹೈಸ್ಕೂಲ್ ಹಾಗೂ ಅದಕ್ಕೂ ಹೆಚ್ಚಿನ ತರಗತಿಗಳಿಗೆ ಆನ್ಲೈನ್ ಮೂಲಕ ಬೋಧಿಸಿ ಎಂದು ಸಲಹೆ ನೀಡುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಪ್ರಾಥಮಿಕ ಶಾಲೆಗಳನ್ನು ಮುಚ್ಚಿ, ದೊಡ್ಡ ತರಗತಿಗಳನ್ನು ಆರಂಭಿಸುತ್ತಿರುವುದರ ಉದ್ದೇಶವೇ ಏನೆಂದು ಆರ್ಥವಾಗುತ್ತಿಲ್ಲ'' ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಪ್ರಶ್ನಿಸುತ್ತಾರೆ.
ಎರಡು ವರ್ಷಗಳಿಂದ ಶಾಲೆ ನಡೆಯದಿದ್ದರೆ ಮಕ್ಕಳಿಗೆ ಅಕ್ಷರ ಜ್ಞಾನವೇ ಇರುವುದಿಲ್ಲ. ವಯಸ್ಸಿನ ಆಧಾರದ ಮೇಲೆ 2019ರಲ್ಲಿ ಒಂದನೇ ತರಗತಿ ಓದುತ್ತಿದ್ದ ಮಗುವನ್ನು ಈಗ ಮೂರನೇ ತರಗತಿಯಲ್ಲಿ ಕೂಡಿಸಿ ಪಾಠ ಮಾಡಿದರೆ ಆ ಮಗುವಿಗೆ ಮಾನಸಿಕ ಒತ್ತಡ ಉಂಟಾಗಿ ಶಿಕ್ಷಣದಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹೀಗೆ ಪ್ರಾಥಮಿಕ ಶಾಲೆಗಳಲ್ಲಿ 35 ಲಕ್ಷಕ್ಕೂ ಅಧಿಕ ಮಕ್ಕಳಿದ್ದಾರೆ. ಮುಂದೆ ಇವರ ಭವಿಷ್ಯ ನೆನೆದರೆ ಭಯವಾಗುತ್ತದೆ. ಆದರೆ, ಸರ್ಕಾರಕ್ಕೆ ಮಾತ್ರ ಯಾವುದೇ ಕಾಳಜಿ ಕಾಣಿಸುತ್ತಿಲ್ಲ ಎಂದರು.
ಗ್ರಾಮೀಣ ಭಾಗದ ಬಡ ಕೂಲಿಕಾರ್ಮಿಕರ ಮಕ್ಕಳಿಗೆ ಶಾಲೆಯೇ ಎರಡನೇ ಮನೆ. ಬೆಳಗ್ಗೆ ಶಾಲೆಗೆ ಬಂದರೆ ಹಾಲು, ಮಧ್ಯಾಹ್ನದ ಬಿಸಿಯೂಟ, ಪಾಠ-ಆಟ ಹೀಗೆ ಸಂಜೆ ತಮ್ಮ ಪೋಷಕರು ಮನೆಗೆ ಮರಳಿ ಬರುವವರೆಗೂ ಶಾಲೆಯಲ್ಲಿ ಕಾಲ ಕಳೆಯುತ್ತಿದ್ದರು. ಆದರೀಗ ಮಕ್ಕಳು ಶೈಕ್ಷಣಿಕ ವಂಚಿತ ಆಗುವುದರ ಜೊತೆಗೆ ಅಪೌಷ್ಠಿಕತೆಯಿಂದ ನರಳುವಂತಾಗಿದೆ, ಕೆಲವು ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಕೂಲಿ ಕೆಲಸಕ್ಕೆ ಕರೆದೊಯ್ಯಲಾಗುತ್ತಿದೆ. ಹೀಗಾದರೆ ಮಕ್ಕಳ ಭವಿಷ್ಯ ಏನಾಗಲಿದೆ. ಸರ್ಕಾರ ಕೂಡಲೇ ಪ್ರಾಥಮಿಕ ಶಾಲೆಗಳನ್ನು ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಅವೈಜ್ಞಾನಿಕ ಚಿಂತನೆ:
"ಸಂತೆ, ಪಾರ್ಕ್, ಚಿತ್ರಮಂದಿರ, ಮದುವೆಗಳಿಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ನೀಡಿ ಪ್ರಾಥಮಿಕ ಶಾಲೆಗಳನ್ನು ಮಾತ್ರ ಮುಚ್ಚಿ ಎಂದು ಹೇಳಿರುವುದು ಸರ್ಕಾರದ ಅವೈಜ್ಞಾನಿಕ ನಿರ್ಧಾರ. ಶಾಲೆಗೆ ಬಂದರೆ ಮಾತ್ರ ಮಕ್ಕಳಿಗೆ ಕೋವಿಡ್ ಬರುತ್ತದೆ ಎಂದು ವೈದ್ಯಕೀಯ ಲೋಕದವರು ಎಲ್ಲೂ ಹೇಳಿಲ್ಲ. ಮಕ್ಕಳ ಆರೋಗ್ಯ ಶಿಕ್ಷಕರ ಜವಾಬ್ದಾರಿಯೂ ಹೌದು. ಮಕ್ಕಳು ಶಾಲೆಗೆ ಬಂದರೆ ನಮ್ಮ ಮಕ್ಕಳಂತೆಯೇ ನೋಡಿಕೊಳ್ಳಲು ಸಿದ್ಧರಿದ್ದೇವೆ. ಸರ್ಕಾರ ಕೂಡಲೇ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿ ಕ್ಷೀರಭಾಗ್ಯ ಮತ್ತು ಬಿಸಿಯೂಟದ ಯೋಜನೆಗಳನ್ನು ಜಾರಿ ಮಾಡಬೇಕು" ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಗಲಿ ಆಗ್ರಹಿದರು.
Recommended Video