ಅಚ್ಚರಿ: ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕ್ರಿಶ್ಚಿಯನ್ನರ ಹಣ!
ಬೆಂಗಳೂರು, ಫೆ. 07: ಸದಾ ದೇಶ-ಧರ್ಮ-ರಾಷ್ಟ್ರೀಯತೆಗಾಗಿ ಹೋರಾಟ ಮಾಡುವ ಬಿಜೆಪಿ, ಇದೀಗ ಕ್ರಿಶ್ಚಿಯನ್ ಸಮುದಾಯದವರಿಂದ ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಪಡೆಯುವ ಮೂಲಕ ಅಚ್ಚರಿ ಮೂಡಿಸಿದೆ. ಯಾವಾಗಲೂ ಹಿಂದೂ ಧರ್ಮದ ಪರವಾಗಿ ಧ್ವನಿ ಎತ್ತುವ ಹಾಗೂ ಬಹುತೇಕ ಶ್ರೀರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಹೋರಾಟದಿಂದಲೇ ಅಧಿಕಾರಕ್ಕೆ ಬಂದಿರುವ ಬಿಜೆಪಿಯ ಈ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇಡೀ ದೇಶಾದ್ಯಂತ ಈಗಾಗಲೇ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಹಿನ್ನೆಲೆಯಲ್ಲಿ ದೇಣಿಗೆ ಸಂಗ್ರಹ ನಡೆಯುತ್ತಿದೆ. ಪಕ್ಷಾತೀತವಾಗಿ ದೇಣಿಗೆ ಸಂಗ್ರಹಿಸಲು ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟ್ ಮುಂದಾಗಿದೆ. ಆದರೆ ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ಬಿಜೆಪಿ, ಧರ್ಮಾತೀತವಾಗಿ ದೇಣಿಗೆ ಸಂಗ್ರಹಕ್ಕೆ ಮುಂದಾಗಿರುವುದು ಕುತೂಹಲ ಮೂಡಿಸಿದೆ.
ಕೇವಲ 15 ದಿನಗಳಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹರಿದು ಬಂದ ದೇಣಿಗೆ ಮೊತ್ತದ ಲೆಕ್ಕ ಹೀಗಿದೆ
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ತನ್ನ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳಬಾರದು ಎಂದು ಮೂಲ ಬಿಜೆಪಿ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದು ಆಗ್ರಹಿಸಿದ್ದರು. ಜೊತೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತನ್ನ ಸಿದ್ದಾಂತವನ್ನು ಬಿಟ್ಟು ಕೊಡುತ್ತಿದೆ ಎಂದೂ ಆರೋಪಿಸಿದ್ದರು. ಇದೇ ಸಂದರ್ಭದಲ್ಲಿ ಕ್ರಶ್ಚಿಯನ್ ಸಮುದಾಯದವರಿಂದ ರಾಮ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಮುಂದಾಗಿರುವುದು ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಹಂತದ ಚರ್ಚೆ ಹುಟ್ಟು ಹಾಕಿದೆ. ಜೊತೆಗೆ ಬಿಜೆಪಿ ಹಾರ್ಡ್ಕೋರ್ ಕಾರ್ಯಕರ್ತರಲ್ಲಿ ಹೊಂದಲ ಮೂಡಿಸುವ ಸಾಧ್ಯತೆಗಳಿವೆ.
ಮಂದಿರ ನಿರ್ಮಾಣಕ್ಕೆ ಕ್ರಶ್ಚಿಯನ್ನರ ಹಣ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ರಾಜ್ಯದ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು (ಫೆ.07) ಬೆಳಗ್ಗೆ ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ವಿಶೇಷ ಸಬೆ ಆಯೋಜಿಸಿದ್ದರು. ಸಭೆಯಲ್ಲಿ ಕ್ರೈಸ್ತ ಸಮುದಾಯದಯದವರು ಶ್ರೀರಾಮ ಮಂದಿನ ನಿರ್ಮಾಣಕ್ಕೆ ಧನ ಸಹಾಯ ಮಾಡುವ ಭರವಸೆಯನ್ನು ಕೊಟ್ಟಿದ್ದಾರೆ. ವಿಶೇಷವಾಗಿ ಉದ್ಯಮಿಗಳು, ಶಿಕ್ಷಣ ತಜ್ಞರು, ಅನಿವಾಸಿ ಭಾರತೀಯರು, ಸಿಇಒಗಳು, ಮಾರ್ಕೆಟಿಂಗ್ ತಜ್ಞರು, ಸಮಾಜ ಸೇವಕರು, ಸಮುದಾಯದ ಮುಖಂಡರು ಧನ ಸಹಾಯ ಮಾಡಲು ಮುಂದಾಗಿದ್ದಾರೆ.
ಅಲ್ಪಸಂಖ್ಯಾತರ ವಿರೋಧಿ ಪಕ್ಷ
ಭಾರತೀಯ ಜನತಾ ಪಕ್ಷವು ಅಲ್ಪಸಂಖ್ಯಾತರ ವಿರುದ್ಧವಿರುವ ಪಕ್ಷ ಎಂಬುದು ಅಕ್ಷರಶಃ ಸುಳ್ಳು. ಅನೇಕ ವರ್ಷಗಳಿಂದ ಇಂಥ ಅಪಪ್ರಚಾರವನ್ನು ನಡೆಸಿಕೊಂಡು ಬರಲಾಗಿದೆ. ಬಿಜೆಪಿಯು ದೇಶದ ಸರ್ವರನ್ನೂ ಒಳಗೊಂಡಿರುವ ಪಕ್ಷ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಎಂಬುದು ಬಿಜೆಪಿಯ ಮಂತ್ರವಾಗಿದೆ. ಎಲ್ಲರನ್ನೂ ಒಳಗೊಂಡು ದೇಶವನ್ನು ಮುನ್ನಡೆಸುವುದು ಪಕ್ಷದ ಗುರಿಯಾಗಿದೆ. ಕೇಂದ್ರದಲ್ಲಿರಬಹುದು ಅಥವಾ ರಾಜ್ಯದಲ್ಲಿರಬಹುದು ಈ ತತ್ವದಡಿಯಲ್ಲೇ ಆಡಳಿತ ನಡೆಯುತ್ತಿದೆ ಎಂದು ಡಿಸಿಎಂ ಭರವಸೆ ನೀಡಿದರು.
ನಾವೆಲ್ಲರೂ ಒಂದೇ: ಕೊಲಾಸೋ
ಕ್ರೈಸ್ತ ಸಮುದಾಯದವರ ಪರವಾಗಿ ಮಾತನಾಡಿದ ಉದ್ಯಮಿ ರೊನಾಲ್ಡ್ ಕೊಲಾಸೋ ಅವರು, ಕ್ರೈಸ್ತ ಸಮುದಾಯ ದೇಣಿಗೆ ನೀಡುತ್ತಿರುವುದು ಇದೇ ಮೊದಲಲ್ಲ. ಹಿಂದಿನಿಂದಲೂ ರಾಜ್ಯ-ದೇಶದ ಪ್ರತಿ ಆಗುಹೋಗುಗಳಿಗೆ ಈ ಸಮುದಾಯ ಸ್ಪಂದಿಸುತ್ತಲೇ ಬಂದಿದೆ. ಶಿಕ್ಷಣ, ಧಾರ್ಮಿಕ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತ ಸೇವೆಯಲ್ಲಿ ನಿರತವಾಗಿದೆ ಎಂದರು.
ವೈಯಕ್ತಿಕವಾಗಿ ನನ್ನ ಮಟ್ಟಿಗೆ ಹೇಳುವುದಾದರೆ 36 ದೇವಾಲಯಗಳಿಗೆ ಆರ್ಥಿಕ ನೆರವು ನೀಡಿದ್ದೇನೆ. ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಕೈಜೋಡಿಸಿದ್ದೇನೆ. ದೇಗುಲ ಮಾತ್ರವಲ್ಲದೆ ಚರ್ಚು, ಮಸೀದಿ ನಿರ್ಮಾಣಕ್ಕೂ ಕೈಲಾದ ನೆರವು ನೀಡಿದ್ದೇನೆ. ಇದೆಲ್ಲವನ್ನು ಮಾಡಿದ್ದು ಪರಸ್ಪರ ಸೌಹಾರ್ದತೆಗಾಗಿ ಮತ್ತೂ ನಾವೆಲ್ಲೂ ಒಂದು ಎಂಬ ಕಾರಣಕ್ಕಾಗಿ. ರಾಜ್ಯದಲ್ಲಿ ಕ್ರೈಸ್ತ ಅಭಿವೃದಿ ನಿಗಮ ಸ್ಥಾಪನೆಯಾಗಿದ್ದು, ಅದಕ್ಕೆ 200 ಕೋಟಿ ರೂ. ಅನುದಾನ ನೀಡಲಾಗಿದೆ. ಇದು ನಿಜಕ್ಕೂ ಸಂತಸದ ವಿಷಯ ಎಂದು ಕೊಲಾಸೋ ಹೇಳಿದರು.
Recommended Video
ಕ್ರೈಸ್ತ ಸಮುದಾಯದ ಗಣ್ಯರು ಭಾಗಿ
ಬೆಂಗಳೂರಿನಲ್ಲಿರುವ ಮಾಲ್ಡೀವ್ಸ್ ರಾಯಭಾರ ಕಚೇರಿಯ ಕಾನ್ಸುಲ್ ಜನರಲ್ ಡಾ.ಜೋಸೆಫ್ ವಿ.ಜಿ., ಉದ್ಯಮಿಗಳಾದ ಜೋಸೆಫ್ ಫ್ರಾನ್ಸಿಸ್, ಸಿ.ಜೆ.ಬಾಬು, ಸಿಲ್ವಿಯಾನ್ ನರೋನ, ಕ್ಲ್ಯಾಡ್ಯುಯಸ್ ಪೆರಾರಿಯ, ಡಾ.ಥಾಮಸ್ ಟಿ. ಜಾನ್, ಚಾರ್ಲ್ಸ್ ಗೋಮೆಸ್, ರೋಶನ್ ಡಿಸಿಲ್ವ, ನಿಗೆಲ್ ಫರ್ನಾಂಡೀಸ್, ಸಂತೋಷ್ ಸೀಕ್ವೆರಿಯಾ, ಕ್ಲಾರೆನ್ಸ್ ಪೆರಾರಿಯಾ, ಪ್ರಮೋದ್ ಡಿಸೋಜ, ಎಂ.ಎಕ್ಸ್,ರಾಜು, ಡಾ.ಕೆ.ಸಿ.ಸ್ಯಾಮ್ಯುಯಲ್, ಅರುಣ್ ಫರ್ನಾಂಡೀಸ್, ಡಾ.ಸಂತೋಷ್ ಕೋಶಿ, ಸಮುದಾಯದ ಹಿರಿಯ ಮುಖಂಡ ಪಿ.ಕೆ. ಚೆರಿಯನ್, ಸಿ.ಜಿ.ವರ್ಗೀಸ್, ಮನೋಜ್ ರಾಜ್, ಐವಾನ್ ಡಿʼಕೋಸ್ಟಾ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು.