ಚಿತ್ತಾರ ಕಲಾವಿದರ ಚಾವಡಿಯಲ್ಲಿ...!
ಬೆಂಗಳೂರು, ಫೆ.9 : ಮಲೆನಾಡಿನ ಬದುಕಿನೊಂದಿಗೆ ಹಾಸು ಹೊಕ್ಕಾಗಿರುವ ಹಸೆ ಅಥವಾ ಚಿತ್ತಾರ ಕಲೆ ಉದ್ಯಾನನಗರಿ ಬೆಂಗಳೂರಿಗೆ ಕಾಲಿಟ್ಟಿದೆ. ಮಲೆನಾಡಿನ ಪ್ರತಿ ಮನೆಯೂ ಚಿತ್ತಾರದ ಕಲೆಯಿಂದ ಅಲಂಕೃತಗೊಂಡಿರುತ್ತದೆ. ಚಿತ್ತಾರ ಲಕ್ಷ್ಮಕ್ಕ ಸದ್ಯದ ಕಲೆಯನ್ನು ಬೆಂಗಳೂರಿನಗೆ ತಲುಪಿಸಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗಡೆಮನೆ ಗ್ರಾಮದ ನಿವಾಸಿಯಾದ ಇವರು ಚಿತ್ತಾರ ಲಕ್ಷ್ಮಕ್ಕ ಎಂದೇ ಖ್ಯಾತಿ ಪಡೆದಿದ್ದಾರೆ. ತಮ್ಮ 12 ವಯಸ್ಸಿನಲ್ಲಿಯೇ ಚಿತ್ತಾರೆ ಕಲೆಯನ್ನು ಕಲಿತ ಚಿತ್ತಾರ ಲಕ್ಷ್ಮಕ್ಕ ಇದುವರೆಗೂ ಸಾವಿರಾರು ಚಿತ್ತಾರದ ಚಿತ್ರಗಳನ್ನು ಬಿಡಿಸಿದ್ದಾರೆ. ಮುಂದಿನ ಪೀಳಿಗೆಯ ಜನರಿಗೂ ಚಿತ್ತಾರ ಕಲೆ ಪರಿಚಯಿಸಬೇಕು ಎಂದು ಪಣತೊಟ್ಟಿದ್ದಾರೆ.
Center for Revival of Indigenous Art ಸಂಸ್ಥೆಯ ಗೀತಾ ಭಟ್ ಅವರು ಚಿತ್ತಾರ ಲಕ್ಷ್ಮಕ್ಕ ಅವರ ಕಲೆಯನ್ನು ಉದ್ಯಾನ ನಗರಿ ಬೆಂಗಳೂರು ಸೇರಿದಂತೆ ದೇಶ-ವಿದೇಶಗಳಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆ ಮೂಲಕ ಇಂದಿನ ಜನಾಂಗಕ್ಕೂ ಚಿತ್ತಾರ ಕಲೆಯನ್ನು ಪರಿಚಯಿಸಿದ್ದಾರೆ. ಜಯನಗರದ ಮನೆಯೊಂದಲ್ಲಿ ಚಿತ್ತಾರ ಬಿಡಿಸುವುದರಲ್ಲಿ ತಲ್ಲೀನರಾಗಿದ್ದ ಚಿತ್ತಾರ ಲಕ್ಷ್ಮಕ್ಕ ಒನ್ ಇಂಡಿಯಾ ಕನ್ನಡದೊಂದಿಗೆ ಚಿತ್ತಾರ ಕಲೆ, ತಮ್ಮ ಕನಸುಗಳ ಬಗ್ಗೆ ಮಾತನಾಡಿದ್ದಾರೆ.
ಚಿತ್ತಾರ ಕೇವಲ ಕಲೆಯಲ್ಲ ದೇವರು
ಚಿತ್ತಾರ ಮೂಲತಃ ದೇವರಿ ಜನಾಂಗದ ಕಲೆ. ಸೊರಬ, ಹೊಸನಗರ, ಸಿರ್ಸಿ, ಸಿದ್ದಾಪುರದಲ್ಲಿ ಈ ಜನಾಂಗದವರು ವಾಸಿಸುತ್ತಿದ್ದಾರೆ. ಕಲ್ಲಿನ ಪುಡಿ ಮತ್ತು ನೈಸರ್ಗಿಕ ಬಣ್ಣವನ್ನೇ ಬಳಸಿ ಚಿತ್ತಾರ ಬಿಡಿಸಲಾಗುತ್ತದೆ. ಇದು ಕಲೆಗಾರರ ಪಾಲಿಗೆ ಚಿತ್ರವಲ್ಲ ಮನೆಯ ದೇವರು ಎಂದು ಚಿತ್ತಾರವನ್ನು ಅವರು ಪೂಜಿಸುತ್ತಾರೆ.
ಯಾವಾಗ ಬರೆಯುತ್ತಾರೆ
ಮಲೆನಾಡಿನ ಬದುಕಿನೊಂದಿಗೆ ಚಿತ್ತಾರ ಕಲೆ ಹಾಸು ಹೊಕ್ಕಾಗಿದೆ. ಮದುವೆ, ಊರಿನ ಜಾತ್ರೆ, ಮಕ್ಕಳ ಚೌಲ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಚಿತ್ತಾರ ಕಲೆಯನ್ನು ಬರೆಯಲಾಗುತ್ತದೆ. ಮದುವೆಗಳಲ್ಲಿ ಚಿತ್ತಾರ ಬರೆಯುವುದಕ್ಕೆ ಒಂದು ಸಂಪ್ರದಾಯವಿದ್ದು, ಮದುವೆ ಇರುವ ಮನೆಯಲ್ಲಿ ಒಂದು ತಿಂಗಳುಗಟ್ಟಲೇ ಚಿತ್ತಾರ ಬರೆಯುಲಾಗುತ್ತದೆ.
ಚಿತ್ತಾರಕ್ಕೆ ಹಾಡಿನ ಮೋಡಿ
ಚಿತ್ತಾರ ಬಿಡಿಸುವುದು ಮಹಿಳೆಯರ ಗುಂಪಿನ ಕೆಲಸ. ತಮ್ಮ ಕೆಲಸಗಳ ನಡುವೆಯೇ ಹಾಡು ಹೇಳುತ್ತಾ, ಮಹಿಳೆಯರು ಚಿತ್ತಾರ ಬಿಡಿಸುವರು. ಗ್ರಾಮದ ಎಲ್ಲಾ ಮನೆಯ ಮಹಿಳೆಯರು ಈ ಚಿತ್ರ ಬಿಡಿಸಲು ಸಹಕಾರ ನೀಡುವರು ಎಂದು ಚಿತ್ತಾರ ಲಕ್ಷ್ಮಕ್ಕ ನೆನಪು ಮಾಡಿಕೊಂಡರು.
ಚಿತ್ತಾರದಲ್ಲಿ ಹಲವು ಬಗೆಗಳು
ಚಿತ್ತಾರ ಕಲೆಯಲ್ಲಿ ಹಲವು ವಿಧಗಳಿವೆ ತಿರುಗೆ ಮಣೆ, ತೇರು, 16 ಮೂಲೆ, 83 ಮೂಲೆ, ತುಳಸಿ ಗಿಡ, ಸೀತಾಮಾತೆ, ವಸ್ತ್ರ ಚಿತ್ತಾರ, ಬಾಗಿಲು ಚಿತ್ತಾರ ಸೇರಿದಂತೆ ಹಲವಾರು ವಿಧಗಳಿವೆ. ಅವುಗಳನ್ನು ಎಲ್ಲಿ ಬೆರೆಯಬೇಕು? ಯಾವ ಸಮಯದಲ್ಲಿ ಬರೆಯಬೇಕು ಎಂಬುದನ್ನು ಕಲಾವಿದರು ನಿರ್ಧರಿಸುತ್ತಾರೆ.
ಪ್ರಕೃತಿ ಸಹಜ ಬಣ್ಣ
ಚಿತ್ತಾರ ಕಲೆ ಬಿಡಿಸುವುದಕ್ಕೆ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಲಾಗುತ್ತದೆ. ಚಿತ್ತಾರ ಕಲೆಗೆ ಪ್ರಮುಖವಾಗಿ ಬಿಳಿ, ಕಪ್ಪು, ಹಳದಿ, ಕೆಂಪು ಬಣ್ಣಗಳನ್ನು ಬಳಸಲಾಗುತ್ತದೆ. ಚಿತ್ತಾರ ಬಿಡಿಸುವುದಕ್ಕೆ ಬಳಸುವ ಬ್ರಷ್ ಸಹ ನೈಸರ್ಗಿಕವಾದ ವಸ್ತುಗಳಿಂದ ತಯಾರಿಸಲಾಗುತ್ತದೆ ಎಂದು ಚಿತ್ತಾರ ಲಕ್ಷ್ಮಕ್ಕ ಮಾಹಿತಿ ನೀಡಿದರು.
ಬೆಂಗಳೂರಿಗೆ ಬಂದಿಗೆ ಚಿತ್ತಾರ
ಮಲೆನಾಡಿನಲ್ಲಿ ಹುಟ್ಟಿದ ಚಿತ್ತಾರ ಕಲೆ ಇಂದು ಬೆಂಗಳೂರಿಗೆ ಕಾಲಿಟ್ಟು ಹಲವು ದಿನಗಳು ಕಳೆದಿವೆ. ವಿಧಾನಸೌಧ, ರಾಜಭವನ, ಸಿಟಿ ರೈಲ್ವೆ ನಿಲ್ದಾಣದಲ್ಲಿ ನೀವು ಚಿತ್ತಾರ ಕಲೆಯನ್ನು ನೋಡಬಹುದು. ಕವಿ ಸಿದ್ಧಲಿಂಗಯ್ಯ ಅವರ ಮನೆಗೆ ಭೇಟಿ ನೀಡಿದರೆ ನಿಮಗೆ ಚಿತ್ತಾರ ಕಲೆಯ ಹಲವು ವಿಧಗಳ ಪರಿಚಯವಾಗುತ್ತದೆ.
ಚಿತ್ತಾರ ಲಕ್ಷ್ಮಕ್ಕ ಅವರ ಶ್ರಮ
ದೇಸಿ ಕಲೆಗಳ ಪುನಶ್ಚೇತನ ಕೇಂದ್ರ [Center for Revival of Indigenous Art]ಸಂಸ್ಥೆಯ ಗೀತಾ ಭಟ್ ಅವರ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ಚಿತ್ತಾರ ಕಲೆಯನ್ನು ಪ್ರಚಾರ ಮಾಡಲು ಚಿತ್ತಾರ ಲಕ್ಷ್ಮಕ್ಕ ಶ್ರಮಿಸುತ್ತಿದ್ದಾರೆ. ಈ ಪ್ರಯತ್ನಕ್ಕೆ ಆರಂಭಿಕ ಯಶಸ್ಸು ದೊರಕಿದ್ದು, ಚಿತ್ತಾರ ಕಲೆ ಬೆಂಗಳೂರಿಗರನ್ನು ನಿಧಾನವಾಗಿ ಸೆಳೆಯುತ್ತಿದೆ.
ಚಿತ್ತಾರ ಲಕ್ಷ್ಮಕ್ಕನಿಗೆ ಮಗನ ಬೆಂಬಲ
ಚಿತ್ತಾರ ಲಕ್ಷ್ಮಕ್ಕ ಅವರ ಕಲೆಯನ್ನು ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸಕ್ಕೆ ಗೀತಾ ಭಟ್ ಅವರ ಜೊತೆಗೆ ಚಿತ್ತಾರ ಲಕ್ಷ್ಮಕ್ಕ ಪುತ್ರ ಶಿವಕುಮಾರ್ ಸಹಾಯ ಮಾಡುತ್ತಿದ್ದಾರೆ. ಗೀತಾ ಭಟ್ ಅವರ ದೂರವಾಣಿ ಸಂಖ್ಯೆ :9886064822
ಭತ್ತದ ತೋರಣ
ಚಿತ್ತಾರ ಲಕ್ಷ್ಮಕ್ಕ ಚಿತ್ತಾರ ಕಲೆಯೊಂದಿಗೆ ಭತ್ತದ ತೋರಣ, ಜುಮಕಿ, ಕಳದ ಬುಟ್ಟಿ ಮುಂತಾದವುಗಳನ್ನು ಮಾಡುತ್ತಾರೆ. ಜಾನಪದ ಗೀತೆಗಳನ್ನು ಸೊಗಸಾಗಿ ಹಾಡುತ್ತಾರೆ. ಶಿವಕುಮಾರ್ ಅವರ ದೂರವಾಣಿ ಸಂಖ್ಯೆ :9480505002
ಚಿತ್ತಾರ ಲಕ್ಷ್ಮಕ್ಕ, ಶಿವಕುಮಾರ ಕಸಸೇನು?
ಚಿತ್ತಾರ ಲಕ್ಷ್ಮಕ್ಕ ಮತ್ತು ಶಿವಕುಮಾರ್ ಚಿತ್ತಾರ ಕಲೆಯನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕು ಎಂಬ ಕನಸು ಕಂಡಿದ್ದಾರೆ. ಅದಕ್ಕಾಗಿ ಶಾಲೆಯನ್ನು ತೆರೆದು ಮಕ್ಕಳಿಗೆ ತರಬೇತಿ ಕೊಡಲು ಬಯಸಿದ್ದಾರೆ.
ಪ್ರದರ್ಶನ ನಡೆದಿದೆ
ದೇಸಿ ಕಲೆಗಳ ಪುನಶ್ಚೇತನ ಕೇಂದ್ರ (ಸಿಎಫ್ಆರ್ಐಎ) ಸಹಯೋಗದಲ್ಲಿ ಕಲಾವಿದೆ ಚಿತ್ತಾರ ಲಕ್ಷ್ಮಕ್ಕ ನೇತೃತ್ವದ ತಂಡ ಕಲಾಕೃತಿಗಳನ್ನು ಹಲವಾರು ಬಾರಿ ಪ್ರದರ್ಶಿಸಿದೆ. ಸಫಾರ್ ಕಲಾ ಶಿಬಿರದ ಮೂಲಕ ಭಿತ್ತಿಚಿತ್ರಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಪ್ರದರ್ಶನಗಳನ್ನು ನಡೆಸಲಾಗುತ್ತದೆ.