ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಶಾಕ್: ಚಿತ್ರದುರ್ಗ, ಕೋಲಾರದಲ್ಲಿ ಎಸಿಬಿ ದಾಳಿ
ಕರ್ನಾಟಕ, ಫೆಬ್ರವರಿ 2: ರಾಜ್ಯಾದ್ಯಂತ ಮೂವತ್ತು ಕಡೆ ಮಂಗಳವಾರ (ಫೆ.2) ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಚಿತ್ರದುರ್ಗದಲ್ಲಿಯೂ ಅರಣ್ಯ ಇಲಾಖೆಯ ಅಧಿಕಾರಿ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಧಾರವಾಡ ಅರಣ್ಯ ಇಲಾಖೆಯ ಅಧಿಕಾರಿ ಶ್ರೀನಿವಾಸ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದು, ಶ್ರೀನಿವಾಸ್ ಅವರು ಧಾರವಾಡದಲ್ಲಿ ಎಸಿಎಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರೀನಿವಾಸ್ ಅವರಿಗೆ ಸೇರಿದ 2 ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ದಾಳಿ ಮಾಡಲಾಗಿದೆ.
ಚಿತ್ರದುರ್ಗದ ತೋಟದ ಮನೆ ಮೇಲೂ ದಾಳಿ ಮಾಡಲಾಗಿದೆ. ಅಲ್ಲದೆ ವಿದ್ಯಾನಗರದ ಬಸವೇಶ್ವರ ಮೆಡಿಕಲ್ ಕಾಲೇಜು ಬಳಿಯ ಮನೆಯ ಮೇಲೆ ಹಾಗೂ ಚಿತ್ರದುರ್ಗ ತಾಲೂಕಿನ ಮಾರಘಟ್ಟ ಗ್ರಾಮ ಬಳಿಯ ತೋಟದ ಮನೆ ಮೇಲೆ ದಾಳಿ ಮಾಡಲಾಗಿದೆ. ಆದಾಯ ಮೀರಿ ಗಳಿಕೆ ಹಿನ್ನೆಲೆ, ಎಸಿಬಿ ಅಧಿಕಾರಿಗಳ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಕೋಲಾರದಲ್ಲಿ ಎಸಿಬಿ ದಾಳಿ
ಇನ್ನು ಕೋಲಾರದಲ್ಲಿಯೂ ಮಂಗಳವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಲಾರ ಡಿಎಚ್ಒ ಡಾ.ವಿಜಯ್ ಕುಮಾರ್ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ.
ಕೋಲಾರ ಕಚೇರಿ, ಮುಳಬಾಗಿಲು ಮನೆ, ಅವರ ಖಾಸಗಿ ಆಸ್ಪತ್ರೆ, ಚಿಂತಾಮಣಿಯಲ್ಲಿರುವ ಮನೆ, ಬೆಂಗಳೂರಿನ ಪ್ಲಾಟ್ ಸೇರಿ ಒಟ್ಟು ಆರು ಕಡೆ ಏಕಕಾಲದಲ್ಲಿ ಎಸಿಬಿ ದಾಳಿ ನಡೆಸಿದೆ.
ಎಸಿಬಿ ಡಿವೈಎಸ್ಪಿ ಪುರುಷೋತ್ತಮ್ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆ ಮುಳಬಾಗಿಲು ಮನೆ, ನರ್ಸಿಂಗ್ ಹೋಂಗಳಲ್ಲಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ.
Recommended Video
ಕೋಲಾರ ಜಿಲ್ಲೆಯಲ್ಲಿ ಹಲವು ವರ್ಷಗಳಿಂದಲೂ ಠಿಕಾಣಿ ಹೂಡಿರುವ ಡಾ.ವಿಜಯಕುಮಾರ್, ಅನೇಕ ಹಗರಣದಲ್ಲಿ ಭಾಗಿರುವ ಆರೋಪ ಹಾಗೂ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪ ಅವರ ಮೇಲಿದೆ.