ಕೊಡಗಿನಲ್ಲಿ ಯುಗಾದಿಗೆ ಚಿನ್ನದ ಉಳುಮೆ
ಉತ್ತರ ಕೊಡಗಿನ ಬಯಲು ಸೀಮೆ ಪ್ರದೇಶವಾದ ತೊರೆನೂರು ಮತ್ತು ಶಿರಂಗಾಲ ಗ್ರಾಮದಲ್ಲಿ ನೂತನ ಸಂವತ್ಸರ ಅಂಗವಾಗಿ ರೈತರು ಜನಪದ ಸಂಸ್ಕೃತಿಯ ಪ್ರತೀಕವಾದ ಹೊನ್ನಾರು ಉತ್ಸವವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸುತ್ತಾರೆ.
ಪ್ರತೀಕವಾದ ಹೊನ್ನಾರು ಉತ್ಸವ (ಚಿನ್ನದ ಉಳುಮೆ)ವನ್ನು ಸಂಭ್ರಮ ಸಡಗರದೊಂದಿಗೆ ಆಚರಿಸುತ್ತಾರೆ.
ಯುಗಾದಿ ಹಬ್ಬವು ಗ್ರಾಮೀಣ ಪ್ರದೇಶದ ರೈತರ ಪಾಲಿಗೆ ಹೊಸ ಸಂವತ್ಸರವಾಗಿರುವುದರಿಂದ ಹಬ್ಬದ ಮೂರನೇ ದಿನಕ್ಕೆ ರೈತಾಪಿ ವರ್ಗವು ಹೊಸ ಪಂಚಾಂಗದ ಪ್ರಕಾರ ಹೊನ್ನಾರು ಉತ್ಸವವನ್ನು ಸಾಂಪ್ರಾದಾಯಿಕವಾಗಿ ಆಚರಿಸುವುದು ರೂಢಿ.[ಹೊಸ ಸಂವತ್ಸರದ ಆಗಮನ- ಕವಿಗಳಿಗೆ ನಮನ]
ಉತ್ಸವದ ದಿನ ಮುಂಜಾನೆ ರೈತರು ತಮಗೆ ಸೇರಿದ ಎತ್ತು ಹಾಗೂ ದನಕರುಗಳನ್ನು ನದಿಯ ನೀರಿನಿಂದ ತೊಳೆಯುತ್ತಾರೆ. ಅವುಗಳ ಗವುಸು ಹಾಗೂ ಕೊಂಬಿಗೆ ಹಣಸು ವಸ್ತ್ರಾಂಲಕಾರದಿಂದ ಸಿಂಗರಿಸುತ್ತಾರೆ. ಬಳಿಕ ವಿಶೇಷ ಪೂಜೆ ಸಲ್ಲಿಸಿ, ತಾವು ಹೊಸ ಉಡುಗೆ-ತೊಡಿಗೆ ತೊಟ್ಟು ತಮ್ಮ ಕೃಷಿ ಪರಿಕರಗಳಾದ ನೇಗಿಲು, ನೊಗ, ಎತ್ತಿನಗಾಡಿಯೊಂದಿಗೆ ಹತ್ಯಾರುಗಳನ್ನು ಒಪ್ಪವಾಗಿ ಜೋಡಿಸಿ ಪೂಜೆ ಸಲ್ಲಿಸುತ್ತಾರೆ.
ಮನೆಗಳಲ್ಲಿ ಉತ್ಸವದ ಅಂಗವಾಗಿ ಹೋಳಿಗೆ, ಪಾಯಸ ಮತ್ತಿತರ ಭಕ್ಷ್ಯ ಭೋಜನವನ್ನು ತಯಾರಿಸಿ ತಮ್ಮ ಜಾನುವಾರುಗಳಿಗೆ ತಿನ್ನಿಸಿ, ತಾವು ಸೇವಿಸಿ ಸಂಭ್ರಮಿಸುತ್ತಾರೆ.
ಅಂದು ಹೊಸ ಪಂಚಾಂಗದಂತೆ ಗ್ರಾಮದ ಹಿರಿಯ ವ್ಯಕ್ತಿ ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ಹೊನ್ನಾರು (ಚಿನ್ನದ ಉಳುಮೆ) ಹೂಡಿ ವರ್ಷಧಾರೆ ಉಳುಮೆಗೆ ಚಾಲನೆ ನೀಡುತ್ತಾರೆ. ಬಳಿಕ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಹೊರಟ ಹೊನ್ನಾರುಗಳು ಗ್ರಾಮದ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ನಂತರ ಉಳುಮೆ ಆರಂಭಿಸಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಕೃತಿಯನ್ನು ಪೂಜಿಸಲಾಗುತ್ತದೆ. ಆ ನಂತರ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ಉಳುಮೆ ಆರಂಭಿಸುತ್ತಾರೆ.[ಕವಿಯೊಲ್ಮೆಯ ಕೋ ಧನ್ಯ ಯುಗಾದಿ : ಕುವೆಂಪು]
ಉತ್ತರ ಕೊಡಗಿನ ಶಿರಂಗಾಲ, ತೊರೆನೂರು, ಮಣಜೂರು, ಕೂಡಿಗೆ, ಮದಾಲಪುರ, ಹುಲುಸೆ, ಭುವನಗಿರಿ, ಮೊದಲಾದ ಗ್ರಾಮಗಳಲ್ಲಿ ಜನಪದ ಸಂಸ್ಕೃತಿಯ ಹೊನ್ನಾರು ಉತ್ಸವವನ್ನು ಹಿಂದಿನ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ. ಎತ್ತುಗಳ ಬದಲಿಗೆ ಯಂತ್ರವನ್ನು ಬಳಸುವ ಇಂದಿನ ಆಧುನಿಕ ಯುಗದಲ್ಲಿಯೂ ರೈತರು ಹಬ್ಬವನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿ ಸಂಪ್ರದಾಯದ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಅಷ್ಟೇ ಅಲ್ಲ ಹಿಂದಿನವರು ಭತ್ತದ ಕೃಷಿಗೆ ಎಷ್ಟೊಂದು ಒತ್ತು ನೀಡಿದ್ದರು ಎಂಬುದನ್ನು ಈ ಆಚರಣೆಗಳು ಸಾರುತ್ತವೆ.