15 ಸಾವಿರಕ್ಕೆ ಕೈಯೊಡ್ಡಿ ಸಿಕ್ಕಿಬಿದ್ದ ಚಿಕ್ಕಮಗಳೂರು ಶ್ಯಾಮ
ಚಿಕ್ಕಮಗಳೂರು, ಆಗಸ್ಟ್ 24: ಜಿಲ್ಲೆಯ ಬೈಗೂರು ವ್ಯಾಪ್ತಿಯ ಕೆರೆಮಕ್ಕಿ ಅಂಗನವಾಡಿ ಕೇಂದ್ರದ ಕಾಮಗಾರಿಯ 1.25 ಲಕ್ಷದ ಬಿಲ್ ಮಾಡುವುದಕ್ಕೆ 15 ಸಾವಿರ ರುಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಜೂನಿಯರ್ ಎಂಜಿನಿಯರ್ ಶ್ಯಾಮ ಸಿ.ತಾಂಬೆ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
ಅಂಗನವಾಡಿ ಕಟ್ಟಡದ ಕಾಮಗಾರಿ ಗುತ್ತಿಗೆ ಪಡೆದಿದ್ದವರು ಕೆಲಸ ಪೂರ್ಣಗೊಳಿಸಿ, 1.25 ಲಕ್ಷ ಬಿಲ್ ಮಂಜೂರು ಮಾಡುವುದಕ್ಕೆ ಪಂಚಾಯತ್ ರಾಜ್ ಎಂಜಿನಿಯರ್ ವಿಭಾಗಕ್ಕೆ ಸಲ್ಲಿಸಿದ್ದರು. ಬಿಲ್ ಮಂಜೂರು ಆಗಬೇಕು ಅಂದರೆ ದುಡ್ಡು ಕೊಡಲೇ ಬೇಕು ಎಂದು ಎಂಜಿನಿಯರ್ ಪಟ್ಟು ಹಿಡಿದಿದ್ದರು. ಆಗ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಲಾಗಿತ್ತು.[ಡಿವೈಎಸ್ಪಿ ಕಲ್ಲಪ್ಪ ಬಗ್ಗೆ ಹೇಳಿಕೆ, ಶಾಸಕ ಬಾಲಕೃಷ್ಣ ಸ್ಪಷ್ಟನೆ]
ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಿಶೋರ್ ಎಂಬುವರ ಮೂಲಕ ಹಣ ಪಡೆಯುವಾಗ ಶ್ಯಾಮ ಸಿ.ತಾಂಬೆ ಸಿಕ್ಕಿಬಿದ್ದಿದ್ದಾರೆ. ಶ್ಯಾಮ ಹಾಗೂ ಕಿಶೋರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಅನಾರೋಗ್ಯದ ಕಾರಣಕ್ಕೆ ಶ್ಯಾಮ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.