ಚಿಕ್ಕಮಗಳೂರಿನ ಹಿರಿಯ ಛಾಯಾಗ್ರಾಹಕ ದಯಾನಂದ್ ಇನ್ನಿಲ್ಲ
ಚಿಕ್ಕಮಗಳೂರು, ಜೂನ್ 18: ಚಿಕ್ಕಮಗಳೂರಿನ ಹಿರಿಯ ಛಾಯಾಗ್ರಾಹಕ ದಯಾನಂದ್ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಚಿಕ್ಕಮಗಳೂರಿನ ಹಿರಿಯ ಛಾಯಾಗ್ರಾಹಕ ಹಾಗೂ ವ್ಯಂಗ್ಯಚಿತ್ರಕಾರರಾಗಿದ್ದ ಅವರು, ಉದಯವಾಣಿ ಪತ್ರಿಕೆಯ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಹಲವಾರು ದಿನ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದ ದಯಾನಂದ್, ವ್ಯಂಗ್ಯ ಚಿತ್ರದಿಂದಲೇ ಪ್ರಸಿದ್ದಿ ಪಡೆದಿದ್ದರು. ದಯಾನಂದ್ ಅವರಿಗೆ 51 ವರ್ಷ ವಯಸ್ಸಾಗಿತ್ತು.
ಮೃತರ ಶರೀರವನ್ನು ಇಂದು ಸಂಜೆ ನಗರಕ್ಕೆ ತರಲಾಗುತ್ತಿದೆ. ಅಂತ್ಯ ಸಂಸ್ಕಾರ ಇಂದೇ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪತ್ರಿಕೋದ್ಯಮದಲ್ಲಿ ಎಲ್ಲರ ಒಡನಾಡಿಯಾಗಿ ಸ್ನೇಹಮಯಿಯಾಗಿ ಕೆಲಸ ಮಾಡುತ್ತಿದ್ದ ದಯಾನಂದ್ ಅವರು ಪತ್ರಿಕೋದ್ಯಮದಲ್ಲಿ ಉತ್ತಮ ಹೆಸರು ಗಳಿಸಿದ್ದರು. ವ್ಯಂಗಚಿತ್ರದಲ್ಲಿ ದೊಡ್ಡ ಹೆಸರು ಮಾಡಿದ್ದ ದಯಾನಂದ್ ಅವರ ಪ್ರತಿಭೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿವೆ. ಜಿಲ್ಲಾಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಅವರ ಸಾವು ಜಿಲ್ಲೆಯ ಪತ್ರಿಕೋದ್ಯಮ, ವ್ಯಂಗ್ಯ ಚಿತ್ರರಂಗ, ಛಾಯಾಚಿತ್ರ ಕ್ಷೇತ್ರಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ನಗರ ಸಭೆ ಸದಸ್ಯರಾದ ಹಿರೇಮಗಳೂರು ಪುಟ್ಟಸ್ವಾಮಿ ಅವರು ಹೇಳಿದರು.