ಚಾರ್ಮಾಡಿ ಘಾಟಿನಲ್ಲಿ ಕಾಡ್ಗಿಚ್ಚಿಗೆ ಶೋಲಾ ಅರಣ್ಯ ನಾಶ
Recommended Video
ಚಿಕ್ಕಮಗಳೂರು, ಮಾರ್ಚ್ 01: ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಕಾಡ್ಗಿಚ್ಚಿಗೆ ಶೋಲಾ ಅರಣ್ಯ ಆಹುತಿಯಾಗುತ್ತಿದೆ. ಕಳೆದ ಹಲವು ದಿನಗಳಿಂದ ಕಾಡಿನ ಬೆಂಕಿ ನಂದಿಸಲು ಹರಸಾಹಸ ಪಡಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಹತೋಟಿಗೆ ಬಾರದ ಕಾಡ್ಗಿಚ್ಚು, ವ್ಯಾಪಿಸುತ್ತಲೇ ಇದೆ.
ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಈಗಾಗಲೇ ನೂರಾರು ಎಕರೆ ಅರಣ್ಯ ಪ್ರದೇಶದ ಸಂಪೂರ್ಣ ಭಸ್ಮವಾಗಿದೆ. ಕಾಡ್ಗಿಚ್ಚಿನ ದಟ್ಟವಾದ ಹೊಗೆ ಆವರಿಸಿದ್ದು, ಪ್ರವಾಸಿಗರು ಮತ್ತು ಸ್ಥಳೀಯರು ಪರದಾಡುತ್ತಿದ್ದಾರೆ.
ಶಿರಾಡಿ ಘಾಟ್ ಬಂದ್ ಹಿನ್ನಲೆಯಲ್ಲಿ ಚಾರ್ಮಾಡಿ ಘಾಟ್ ಮೂಲಕ ಸಂಚಾರ ದಟ್ಟಣೆ ಅಧಿಕವಾಗಿದೆ. ಕಳೆದ ಎರಡು ದಿನದಿಂದ ಸೋಮನ ಕಾಡು, ಮಲಯಮಾರುತ ಸುತ್ತ ಮುತ್ತ ಕಾಡ್ಗಿಚ್ಚು ಕಾಣಿಸಿಕೊಂಡಿದೆ.
ಕಳೆದ ವಾರ ಬಾಳೆಹೊನ್ನೂರಿನ ಕಡವಂತಿ ಗ್ರಾಮದ ಬೆರಣಗೋಡು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆ ಸುಟ್ಟು ಕರಕಲಾಗಿತ್ತು.
ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಮಹಾತ್ಮ ಗಾಂಧಿ ಪಾರ್ಕ್(ರತ್ನಗಿರಿ ಬೋರೆ) ನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದೆ. ಉದ್ಯಾನವನದಲ್ಲಿ ಶ್ರೀಗಂಧದ ಮರ ಸೇರಿದಂತೆ ಔಷಧಿ ಸಸ್ಯ, ಹೂವಿನ ಗಿಡಗಳು ಬೆಂಕಿಗಾಹುತಿಯಾಗಿವೆ.
ಲಕ್ಷಾಂತರ ಮೌಲ್ಯದ ಅಪಾರ ಸಸ್ಯ ಸಂಪತ್ತು ಬೆಂಕಿಗಾಹುತಿಯಾಗಿದ್ದು, 10 ಎಕರೆ ವಿಸ್ತೀರ್ಣದ ಮಹಾತ್ಮ ಗಾಂಧಿ ಪಾರ್ಕ್ ನಲ್ಲಿ ಅಗ್ನಿ ಶಾಮಕದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.