ಚಿಕ್ಕಮಗಳೂರು : ಇಂದಿರಾ ಕ್ಯಾಂಟೀನ್ಗೆ ಕೊನೆಗೂ ಉದ್ಘಾಟನೆ ಭಾಗ್ಯ!
ಚಿಕ್ಕಮಗಳೂರು, ಜುಲೈ 03 : ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ತಿಂಗಳಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ. ಜಿಲ್ಲೆಗೆ 8 ಇಂದಿರಾ ಕ್ಯಾಂಟೀನ್ ಮಂಜೂರಾಗಿದೆ. ಆದರೆ, ವಿವಿಧ ಕಾರಣಗಳಿಂದ ಇನ್ನೂ ಕ್ಯಾಂಟೀನ್ ಆರಂಭವಾಗಿಲ್ಲ.
ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಜುಲೈ ಅಂತ್ಯದಲ್ಲಿ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಯಾಗಲಿದೆ. ಎನ್.ಆರ್.ಪುರ ಮತ್ತು ಶೃಂಗೇರಿಯಲ್ಲಿ ಮೊದಲು ಕ್ಯಾಂಟೀನ್ ಆರಂಭವಾಗಲಿದೆ' ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಕನಸಿನ ಕೂಸು ಇಂದಿರಾ ಕ್ಯಾಂಟೀನ್ ಬಗ್ಗೆ ಎಚ್ಡಿಕೆ ನಿರ್ಲಕ್ಷ್ಯ?
ಜಿಲ್ಲೆಗೆ ಒಟ್ಟು 8 ಇಂದಿರಾ ಕ್ಯಾಂಟೀನ್ ಮಂಜೂರಾಗಿದೆ. ಚಿಕ್ಕಮಗಳೂರು ಪಟ್ಟಣದಲ್ಲಿ 2, ತರೀಕೆರೆ, ಕಡೂರು, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ ಮತ್ತು ಶೃಂಗೇರಿ ಪಟ್ಟಣದಲ್ಲಿ ತಲಾ 1 ಇಂದಿರಾ ಕ್ಯಾಂಟೀನ್ ಸ್ಥಾಪನೆಯಾಗಲಿದೆ.
ಚಿಕ್ಕಮಗಳೂರು, ಕೊಪ್ಪ, ಕಡೂರು ಮತ್ತು ಎನ್.ಆರ್.ಪುರದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಮೂಡಿಗೆರೆ, ಶೃಂಗೇರಿ ಮತ್ತು ತರೀಕೆರೆಯಲ್ಲಿ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ಗೆ ಹಣ ನೀಡದ ಸರ್ಕಾರ, ಇಕ್ಕಟ್ಟಿನಲ್ಲಿ ಬಿಬಿಎಂಪಿ
ಇಂದಿರಾ ಕ್ಯಾಂಟೀನ್ಗಳಿಗೆ ಆಹಾರ ಪೂರೈಕೆ ಮಾಡುವ ಟೆಂಡರ್ ಅನ್ನು ಅಂತಿಮಗೊಳಿಸಲಾಗಿದೆ. ತರೀಕೆರೆಯಲ್ಲಿ 500, ಕಡೂರಿನಲ್ಲಿ 300, ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ಮೂಡಿಗೆರೆಯಲ್ಲಿ 200 ಜನರಿಗೆ ಉಟ ಮತ್ತು ಉಪಹಾರವನ್ನು ಕ್ಯಾಂಟೀನ್ನಲ್ಲಿ ನೀಡಲಾಗುತ್ತದೆ.
ಜಿಲ್ಲೆಗೆ ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಇಂದಿರಾ ಕ್ಯಾಂಟೀನ್ ಮಂಜೂರಾಗಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿ, ಕಾಮಗಾರಿಗೆ ಬೇಕಾದ ವಸ್ತುಗಳ ಸರಬರಾಜಿನಲ್ಲಿ ವಿಳಂಬವಾದ ಕಾರಣ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ತಡವಾಗಿದೆ.