ಬಿಜೆಪಿ ಸಂಸದರ ದಿಢೀರ್ ಸಭೆ ಕರೆದ ಮುಖ್ಯಮಂತ್ರಿ ಯಡಿಯೂರಪ್ಪ!
ಬೆಂಗಳೂರು, ನ. 26: ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೈಕಮಾಂಡ್ನಿಂದ ಇನ್ನೂ ಯಾವುದೇ ಸಂದೇಶ ಬಂದಿಲ್ಲ. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಬೇಡಿಕೆ ಇಟ್ಟುಕೊಂಡು ಎರಡು ಬಾರಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಬಂದಿದ್ದಾರೆ. ಆದರೆ ಯಾವುದೇ ಉಪಯೋಗವಾಗಿಲ್ಲ.
ದೆಹಲಿಯಿಂದ ಹಿಂದಿರುಗಿದ ಬಳಿಕ ಮಾತನಾಡಿದ್ದು ಸಿಎಂ ಯಡಿಯೂರಪ್ಪ ಅವರು, ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಅಥವಾ ಪನಾರಚನೆಗೆ ಹೈಕಮಾಂಡ್ ಆದೇಶ ಕೊಡಲಿದೆ ಎಂದಿದ್ದರು. ಅದಾಗಿ ಒಂದು ವಾರವಾಗುತ್ತ ಬಂದರೂ ಹೈಕಮಾಂಡ್ ಏನೂ ಹೇಳುತ್ತಿಲ್ಲ. ಹೀಗಾಗಿ ಬಿಜೆಪಿ ಗೊಂದಲದ ಗೂಡಾಗಿದೆ. ರಾಜ್ಯ ಬಿಜೆಪಿ ನಾಯಕರು ದೆಹಲಿ ಹಾಗೂ ಹೈದರಾಬಾದ್ಗೆ ತೆರಳಿದ್ದಾರೆ.
ಸಂಪುಟ ವಿಸ್ತರಣೆ: ಯಡಿಯೂರಪ್ಪ ಎದುರು ಹೈಕಮಾಂಡ್ ಇಟ್ಟ 3 ಷರತ್ತುಗಳು!
ಈ ಮಧ್ಯಾ ನಾಳೆ ಸಂಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಬಿಜೆಪಿ ಸಂಸದರ ಮಹತ್ವದ ಸಭೆ ಕರೆದಿರುವುದು ತೀವ್ರ ಕುತೂಹಲ ಮೂಡಿಸಿದೆ. ಯಡಿಯೂರಪ್ಪ ಅವರು ಸಂಸದರ ಸಭೆ ಕರೆದಿದ್ದಾದರೂ ಯಾಕೆ? ಇಲ್ಲಿದೆ ಮಾಹಿತಿ.
ನಾಳೆ ಸಂಜೆ ನಡೆಯಲಿದೆ ಮಹತ್ವದ ಸಭೆ
ನಾಳೆ (ನ. 27) ಸಂಜೆ 4 ಗಂಟೆಗೆ ರಾಜ್ಯ ಬಿಜೆಪಿ ಸಂಸದರ ಸಭೆಯನ್ನು ಕರೆದಿದ್ದಾರೆ. ಯಡಿಯೂರಪ್ಪ ಅವರು ಹೀಗೆ ದಿಢೀರ್ ಅಂತಾ ಸಂಸದರ ಸಬೆ ಕರೆದಿರುವುದು ಬಿಜೆಪಿಯಲ್ಲಿ ಸಂಚಲವನ್ನುಂಟು ಮಾಡಿದೆ.
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಿಗದಿಯಾಗಿದ್ದು, ಸಭೆಗೆ ಆಗಮಿಸುವಂತೆ ಬಿಜೆಪಿ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರಿಗೆ ಆಹ್ವಾನ ನೀಡಲಾಗಿದೆ. ಮುಂಬರುವ ಗ್ರಾಮ ಪಂಚಾಯತ್, ವಿಧಾನಸಭಾ ಉಪಚುನಾವಣೆ, ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಸಂಸದರ ಸಭೆಯನ್ನು ಕರೆಯಲಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ಆಂತರಿಕವಾಗಿ ಆಗಿರುವ ಬೆಳವಣಿಗೆಗಳೇ ಬೇರೆ ಎನ್ನಲಾಗಿದೆ.
ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ!
ಒಂದೆಡೆ ನಾಳೆಯಿಂದ ಗ್ರಾಮ ಪಂಚಾಯತ್ ಚುನಾವಣೆಗಾಗಿ ರಾಜ್ಯದಲ್ಲಿ ಬಿಜೆಪಿ ಗ್ರಾಮ ಸ್ವರಾಜ್ ಯಾತ್ರೆ ಆರಂಭ ವಾಗುತ್ತಿದೆ. ಮತ್ತೊಂದೆಡೆ ನಾಳೆಯೇ ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಪಕ್ಷದ ಸಂಸದರ ಅನೌಪಚಾರಿಕ ಸಭೆಯನ್ನು ಯಡಿಯೂರಪ್ಪ ಅವರು ಕರೆದಿದ್ದಾರೆ.
ಬಿಜೆಪಿಯಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಸದರ ಸಭೆ ಮಹತ್ವ ಪಡೆದುಕೊಂಡಿದೆ. ಬದಲಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನೌಪಚಾರಿಕ ಸಭೆಯ ಮೂಲಕ ಸಂಸದರ ವಿಶ್ವಾಸ ಗಳಿಸುವ ಯತ್ನವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.
ದೆಹಲಿ, ಹೈದರಾಬಾದ್ನತ್ತ ನಾಯಕರು
ಇದೇ ಸಂದರ್ಭದಲ್ಲಿ ಕೆಲವು ಸಚಿವರು ದೆಹಲಿಗೆ ಮತ್ತೆ ಕೆಲವು ಸಚಿವರು ಹೈದರಾಬಾದ್ಗೆ ತೆರಳಿರುವುದು ಕುತೂಹಲ ಮೂಡಿಸಿದೆ. ಡಿಸಿಎಂ ಲಕ್ಷ್ಮಣ ಸವದಿ ಮತ್ತು ಸಚಿವ ಅಶೋಕ್ ಅವರು ದೆಹಲಿಗೆ ತೆರಳಿದ್ದಾರೆ. ಅದರ ಬೆನ್ನಲ್ಲೇ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೈದರಾಬಾದ್ಗೆ ತೆರಳಿದ್ದಾರೆ. ಜಿಹೆಚ್ಎಂಸಿ ಚುನಾವಣೆ ಕಾರಣ ಇಟ್ಟುಕೊಂಡು ಈಶ್ವರಪ್ಪ ಅವರು ಹೈದರಾಬಾದ್ಗೆ ತೆರಳಿರುವ ಈಶ್ವರಪ್ಪ ಅವರು ನಾಡಿದ್ದು (ನ. 28) ರಂದು ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
Recommended Video
ಅನೌಪಚಾರಿಕ ಚರ್ಚೆ
ಸಭೆಯ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಸಂಸದ ಡಾ. ಉಮೇಶ್ ಜಾಧವ್ ಅವರು, ನಾಳೆ ಸಿಎಂ ಯಡಿಯೂರಪ್ಪ ಸಂಸದರ ಸಭೆ ಕರೆದಿದ್ದಾರೆ. ಮುಖ್ಯಮಂತ್ರಿಗಳ ಕಚೇರಿಯಿಂದ ಸಭೆಗೆ ಆಹ್ವಾನಿಸಿದ್ದಾರೆ.
ನಾಳೆ ಸಂಜೆ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು, ಕೆಲವು ವಿಚಾರಗಳ ಬಗ್ಗೆ ಅನೌಪಚಾರಿಕೆ ಚರ್ಚೆ ನಡೆಯಲಿದೆ ಎಂದು ಮಹತ್ವದ ಹೇಳಿಕೆಯನ್ನು ಸಂಸದ ಡಾ. ಉಮೇಶ್ ಜಾಧವ್ ನೀಡಿದ್ದಾರೆ. ಹೈಕಮಾಂಡ್ ಕಠಿಣ ನಿರ್ಧಾರ ಕೈಗೊಳ್ಳುವ ಮೊದಲು ತಮ್ಮ ಬಲಪ್ರದರ್ಶನಕ್ಕೆ ಯಡಿಯೂರಪ್ಪ ಅವರು ಮುಂದಾಗಿದ್ದಾರ? ಎಂಬ ಚರ್ಚೆಗಳು ಇದೀಗ ರಾಜ್ಯದಲ್ಲಿ ನಡೆದಿವೆ.