ಮುಖ್ಯಮಂತ್ರಿ ಬದಲಾವಣೆ ಸುಳ್ಳು: ಪ್ರತಿದಿನ ಎರಡು ಗಂಟೆ ಹೆಚ್ಚುವರಿ ಕೆಲಸ ಮಾಡುತ್ತೇನೆ- ಬೊಮ್ಮಾಯಿ
ಬೆಂಗಳೂರು, ಆಗಸ್ಟ್ 12: ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂಬ ಊಹಾಪೋಹವನ್ನು ತಳ್ಳಿಹಾಕಿದ್ದು, ಇದು ಆಧಾರರಹಿತ ಮತ್ತು ಸುಳ್ಳು ಎಂದು ಹೇಳಿದ್ದಾರೆ. ಈ ಬಗೆಯ ಚರ್ಚೆಗಳು ಬೇಡ ತಾನು ಪ್ರತಿದಿನ ಹೆಚ್ಚುವರಿ ಎರಡು ಗಂಟೆಗಳ ಕಾಲ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಯ ಮಾಜಿ ಶಾಸಕ ಬಿ. ಸುರೇಶ್ ಗೌಡ ಅವರು ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕರ್ನಾಟಕದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುವುದು. ಪಕ್ಷ ಚುನಾವಣೆಗಳನ್ನು ಗೆಲ್ಲಲು ಮುಖ್ಯಮಂತ್ರಿಯನ್ನು ಬದಲಾಯಿಸುವ ಬಗ್ಗೆ ಹೈಕಮಾಂಡ್ ಕರೆ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು. ಈ ತರಹದ ಮಾತುಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ತೆರೆ ಎಳೆದರು.
ಕಳೆದೆರಡು ದಿನಗಳಿಂದ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮೂರು ವರ್ಷಗಳಲ್ಲಿ ರಾಜ್ಯವು ಮೂರನೇ ಬಿಜೆಪಿ ಮುಖ್ಯಮಂತ್ರಿಯನ್ನು ಹೊಂದುವ ಸಾಧ್ಯತೆಯ ಬಗ್ಗೆ ಮಾತನಾಡಿ ಚರ್ಚೆ ಹುಟ್ಟುಹಾಕಿತ್ತು. ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಕೈಗೊಂಬೆ ಮುಖ್ಯಮಂತ್ರಿ ಎಂದು ಕರೆಯಿತು. ಇದು ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತು. ಇದಕ್ಕೆ ಪೂರಕವಾಗಿ ಬಿಜೆಪಿ ಹಲವು ನಾಯಕರೂ ಕೂಡ ಸಾಧ್ಯತೆ ಬಗ್ಗೆ ಮಾತನಾಡಿದ್ದರು. ಇನ್ನೂ ಹಲವು ಸರಸಾಗಟಾಗಿ ತಳ್ಳಿ ಹಾಕಿ ಕಾಂಗ್ರೆಸ್ ವರಿಷ್ಠರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದ ಬಿಎಸ್ವೈ
ಟೀಕೆಗಳು ಬರತೊಡಗಿದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿಜೆಪಿಯ ಹಲವು ಮುಖಂಡರು ಬೊಮ್ಮಾಯಿ ಅವರ ಬೆನ್ನಿಗೆ ನಿಂತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಹೇಳಿದ್ದರು. ಆಗಸ್ಟ್ 6 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋವಿಡ್ ಪಾಸಿಟಿವ್ ಬಂದು ಮನೆಯಲ್ಲಿ ಪ್ರತ್ಯೇಕವಾಗಿದ್ದರು. ನಂತರ ಗುರುವಾರ ಮೊದಲ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಬಳಿಕ ಮುಖ್ಯಮಂತ್ರಿ ಬದಲಾವಣೆಯ ಕುರಿತು ನಾಲ್ಕು ದಿನಗಳ ಊಹಾಪೋಹದ ನಂತರ ಮೌನ ಮುರಿದರು.
ನನಗೆ ಸತ್ಯ ಏನು ಅಂತ ಗೊತ್ತು
ನಾನು ಸ್ವಂತ ಬುದ್ಧಿವಂತಿಕೆ ಇರುವ ಮನುಷ್ಯ, ನನಗೆ ಸತ್ಯ ಏನು ಎಂಬುದು ಗೊತ್ತಿದೆ. ವಿರೋಧ ಪಕ್ಷದವರ ಮಾತಿಗೆ ಯಾವುದೇ ಆಧಾರವಿಲ್ಲ. ಇದು ರಾಜಕೀಯ ಪ್ರೇರಿತವಾದ ಹೇಳಿಕೆಗಳು. ಮುಂದಿನ ದಿನಗಳಲ್ಲಿ ಪ್ರತಿದಿನ ಇನ್ನೂ ಎರಡು ಗಂಟೆ ಹೆಚ್ಚುವರಿಯಾಗಿ ದುಡಿದು ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತೇನೆ. ನಾನು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಮತ್ತು ನಾವು ದೊಡ್ಡ ಪ್ರಮಾಣದಲ್ಲಿ ಚುನಾವಣೆಯಲ್ಲಿ ಜನರ ಬಳಿಗೆ ಹೋಗುತ್ತೇವೆ ಎಂದು ಹೇಳಿದರು.
ಕರ್ನಾಟಕದ ಜನ ಇದನ್ನು ನಂಬಲ್ಲ
ನನ್ನ ವಿಷಯದಲ್ಲಿ ಕಾಂಗ್ರೆಸ್ ಅಸ್ಥಿರತೆಯನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್ ನಾಯಕರು ಊಹಾಪೋಹಗಳ ಮೂಲಕ ನನ್ನ ಸರ್ಕಾರದ ಬಗ್ಗೆ ಜನರ ಮನಸ್ಸಿನಲ್ಲಿ ಅಸ್ಥಿರತೆಯನ್ನು ತರಬಹುದು ಎಂದು ಭಾವಿಸುತ್ತಾರೆ. ಆದರೆ ಕರ್ನಾಟಕದ ಜನರು ಅದನ್ನು ನಂಬುವುದಿಲ್ಲ. ವಾಸ್ತವವಾಗಿ ನನ್ನ ಬದಲಾವಣೆ ಬಗ್ಗೆ ಕಾಂಗ್ರೆಸ್ನಲ್ಲೇ ಎರಡು ಅಭಿಪ್ರಾಯಗಳಿವೆ ಎಂದು ಅವರು ಹೇಳಿದರು.
ಮಳೆ ಪರಿಹಾರಕ್ಕೆ ಕೇಂದ್ರಕ್ಕೆ ಪತ್ರ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಅವರದೇ ಬಿಜೆಪಿಯ ಸುರೇಶ್ ಗೌಡ ಅವರು ಮಾತನಾಡಿದ್ದಾರೆ ಎಂಬ ಹೇಳಿಕೆಗಳನ್ನು ತಳ್ಳಿಹಾಕಿದ ಮುಖ್ಯಮಂತ್ರಿ ಬೊಮ್ಮಾಯಿ, ಸುರೇಶ್ಗೌಡರ ಹೇಳಿಕೆಗಳಿಗೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು. ಏತನ್ಮಧ್ಯೆ, ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಉಂಟಾದ ಹಾನಿಯ ಕುರಿತು ಬೊಮ್ಮಾಯಿ ಅವರು ಸರ್ಕಾರದ ವರದಿಗಳನ್ನು ಸಿದ್ಧಪಡಿಸಿ ಮೌಲ್ಯಮಾಪನ ಮಾಡಲಾಗುತ್ತಿದೆ. ಎರಡು ಅಥವಾ ಮೂರು ದಿನಗಳಲ್ಲಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ಹಣ ಕೋರಿ ಕೇಂದ್ರಕ್ಕೆ ಪತ್ರ ಬರೆದು ಕಳುಹಿಸಲಾಗುವುದು ಎಂದು ಹೇಳಿದರು.