ಗೆದ್ದೇ ಗೆಲ್ಲುತ್ತೇನೆ ಎನ್ನುವ ಅಚಲ ವಿಶ್ವಾಸದಲ್ಲಿ ಎಚ್ಡಿಕೆ: ಏನಿರಬಹುದು ಕಾರ್ಯತಂತ್ರ?
Recommended Video
ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ, ಅದೆಷ್ಟೋ ವರ್ಷ ವಯಸ್ಸು ಆಯುಸ್ಸು ಅಂತಾರಲ್ಲಾ.. ಹಾಗೇ.. ಇನ್ನೇನು ಕುಮಾರಸ್ವಾಮಿ ಸರಕಾರ ಬಿದ್ದೇ ಹೋಯಿತು ಎನ್ನುವಷ್ಟರಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶ, ಸಮ್ಮಿಶ್ರ ಸರಕಾರಕ್ಕೆ ಸಂಜೀವಿನಿಯಾಗಿ ಪರಿಣಮಿಸಿದೆ.
ಕುಮಾರಸ್ವಾಮಿ ಸರಕಾರಕ್ಕೆ ಬಹುಮತವಿಲ್ಲ, ಅವರು ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದ್ದ ಬಿಜೆಪಿಗೆ ತಿರುಗೇಟು ನೀಡುವಂತೆ, ಮಂಗಾರು ಅಧಿವೇಶನದ ಮೊದಲ ದಿನವೇ, ಮುಖ್ಯಮಂತ್ರಿಗಳು ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ.
ಏನೇ ಇದ್ದರೂ ಸದನದಲ್ಲೇ ಎದುರಿಸುತ್ತೇನೆ ಎಂದಿರುವ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದಾರೆ. ಅಷ್ಟೂ ಅಲ್ಲದೇ, ಸೋಮವಾರ ಅಥವಾ ಬುಧವಾರವೇ ವಿಶ್ವಾಸ ಮತ ಯಾಚಿಸುತ್ತೇನೆ ಸಮಯ ಕೊಡಿ ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದ್ದಾರೆ.
ಏನಿದೆಯೋ ಸದನದಲ್ಲಿಯೇ ಎದುರಿಸುತ್ತೇನೆ: ಕುಮಾರಸ್ವಾಮಿ
ಬಿಜೆಪಿ ಒತ್ತಾಯಿಸುವ ಮೊದಲೇ ಕುಮಾರಸ್ವಾಮಿಯವರ ಈ ನಿರ್ಣಯ ಬಿಜೆಪಿಯನ್ನು ದಂಗಾಗಿಸಿದೆ. ಕುಮಾರಸ್ವಾಮಿಯವರ ಈ ನಿರ್ಧಾರದಿಂದ ಶಾಕ್ ಆದ ಯಡಿಯೂರಪ್ಪ, ಸ್ವಲ್ಪಹೊತ್ತು ಕಲಾಪದಿಂದ ಹೊರಬಂದು, ವಿರೋಧ ಪಕ್ಷದ ನಾಯಕರ ಕೊಠಡಿಯಲ್ಲಿ ವಿರಮಿಸಿದ್ದಾರೆ.
ನಾನ್ಯಾಕೆ ರಾಜೀನಾಮೆ ನೀಡಲಿ, ಸರಕಾರಕ್ಕೆ ಏನೂ ಆಗುವುದಿಲ್ಲ
ನಾನ್ಯಾಕೆ ರಾಜೀನಾಮೆ ನೀಡಲಿ, ಸರಕಾರಕ್ಕೆ ಏನೂ ಆಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿಕೊಂಡು ಬರುತ್ತಲೇ ಇದ್ದರು. ಗುರುವಾರದಿಂದ ನಿರಾಳರಾದಂತೆ ಕಂಡು ಬರುತ್ತಿರುವ ಕುಮಾರಸ್ವಾಮಿ, ರಾಜೀನಾಮೆ ನೀಡಿರುವ ರಾಮಲಿಂಗ ರೆಡ್ಡಿ ಮತ್ತು ರೋಷನ್ ಬೇಗ್ ಅವರನ್ನು ತಾವು ಮತ್ತು ಗುಲಾಂನಬಿ ಆಜಾದ್ ಭೇಟಿಯಾದ ನಂತರ, ಅವರ ಬಾಡಿ ಲಾಂಗ್ವೇಜ್ ಇನ್ನಷ್ಟು ಬದಲಾಗಿರುವುದು ಸ್ಪಷ್ಟ.
ಬಿಜೆಪಿಯವರಿಗೆ ಅವರ ಶಾಸಕರ ಮೇಲೆ ನಂಬಿಕೆಯಿಲ್ಲ
ಬಿಜೆಪಿಯವರಿಗೆ ಅವರ ಶಾಸಕರ ಮೇಲೆ ನಂಬಿಕೆಯಿಲ್ಲ, ಹಾಗಾಗಿ ಅವರನ್ನು ರೆಸಾರ್ಟಿಗೆ ಕಳುಹಿಸುತ್ತಿದ್ದಾರೆ, ಏನೇನು ಮಾಡುತ್ತೇವೆ, ಯಾರ್ಯಾರು ನಮಗೆ ಬೆಂಬಲ ನೀಡುತ್ತಾರೆಂದು ಈಗಲೇ ಹೇಳಲು ಸಾಧ್ಯವೇ ಎಂದು ಸಿದ್ದರಾಮಯ್ಯ ಬೇರೆ ಹೇಳಿರುವುದು, ಎಲ್ಲೋ ರಿವರ್ಸ ಆಪರೇಷನ್ ಕಸರತ್ತು ಆರಂಭವಾಗಿದೆಯೇ ಎನ್ನುವ ಶಂಕೆ ಏಳಲಾರಂಭಿಸಿದೆ.
ಶಾಸಕರು ಬೆಂಗಳೂರು ಬಿಟ್ಟು ಕದಲುವಂತೆ ಇಲ್ಲ
ಬಿಜೆಪಿಗೂ ಈ ಸಂಶಯ ಕಾಡಲಾರಂಭಿಸಿದ್ದಕ್ಕೋ ಏನೋ, ಎಲ್ಲಾ ಶಾಸಕರು ಬೆಂಗಳೂರು ಬಿಟ್ಟು ಕದಲುವಂತೆ ಇಲ್ಲ ಎಂದು ಎಲ್ಲರನ್ನೂ ರೆಸಾರ್ಟಿಗೆ ಕಳುಹಿಸಲು ಸಜ್ಜಾಗಿದೆ. ಶನಿವಾರ ಮತ್ತು ಭಾನುವಾರ, ವಿಧಾನಸಭಾ ಕಲಾಪ ನಡೆಯದಿದ್ದರೂ, ಶಾಸಕರು ತಮ್ಮತಮ್ಮ ಕ್ಷೇತ್ರಕ್ಕೆ ಹೋಗುವ ಮತ್ತು ಕಾರ್ಯಕರ್ತರನ್ನು ಭೇಟಿಯಾಗುವ ಕಾರ್ಯಕ್ರಮವನ್ನು ರದ್ದುಮಾಡುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ.
ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡರ ಹೇಳಿಕೆ
ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡರ ನಿನ್ನೆಯಿಂದ ನೀಡುತ್ತಿರುವ ಹೇಳಿಕೆಗಳು, ಅವರ ಬಾಡಿ ಲಾಂಗ್ವೇಜ್, ಅವರಲ್ಲಿ ಕಾಣುತ್ತಿರುವ ನಿರಾಳತೆಯನ್ನು ನೋಡಿದರೆ, ಮ್ಯಾಜಿಕ್ ನಂಬರ್ ಅವರಿಗೆ ಈಗಾಗಲೇ ದಕ್ಕಿದೆಯಾ ಎಂದನಿಸದೇ ಇರದು. ಸೀಟಿಗೆ ಅಂಟಿಕೊಂಡಿಲ್ಲ, ಬಹುಮತ ಸಾಬೀತು ಪಡಿಸಲು ಸಿದ್ದ ಎನ್ನುವ ಅವರ ಖಚಿತ ವಿಶ್ವಾಸದ ಮಾತಿನ ಹಿಂದೆ, ಏನೋ ಲೆಕ್ಕಾಚಾರ ಇರದೇ ಇರದು.
ಹಿಂದೆಯಿದ್ದ ಹುಮ್ಮಸ್ಸು ಬಿಜೆಪಿಯಲ್ಲಿ ಕಮ್ಮಿಯಾಗುತ್ತಿದೆ
ಆದರೆ, ಯಾವಾಗ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆಗೆ ಮುಂದಾದರೂ, ಹಿಂದೆಯಿದ್ದ ಹುಮ್ಮಸ್ಸು ಬಿಜೆಪಿಯಲ್ಲಿ ಕಮ್ಮಿಯಾಗುತ್ತಿರುವಂತೆ ಕಾಣುತ್ತಿದೆ. ಕಾನ್ಫಿಡೆನ್ಸ್ ಇಲ್ಲದಿದ್ದರೆ, ನೋ ಕಾನ್ಫಿಡೆನ್ಸ್ ಮೋಷನ್ ಮೂವ್ ಮಾಡುತ್ತೀವಾ ಎನ್ನುವ ಸಿದ್ದರಾಮಯ್ಯನವರ ಖಡಕ್ ಉತ್ತರದಲ್ಲಿ ಏನು ರಣತಂತ್ರ ಅಡಿಗಿದೆಯೋ..