ಶೀಘ್ರ ದೆಹಲಿಗೆ ತೆರಳಲಿದ್ದೇನೆ: ಮುಖ್ಯಮಂತ್ರಿ ಯಡಿಯೂರಪ್ಪ
ಬೆಂಗಳೂರು, ಸೆ. 08: ರಾಜ್ಯದಲ್ಲಿ ಡ್ರಗ್ ಮಾಫಿಯಾ ಮಟ್ಟ ಹಾಕುವ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇವತ್ತು ಬೆಳಗ್ಗೆಯೆ ನಟಿ ಸಂಜನಾ ಗುಲ್ರಾನಿ ಅವರ ಮನೆಯ ಮೇಲೆ ಸಿಸಿಬಿನ ರೇಡ್ ಆಗಿದೆ. ಜೊತೆಗೆ ರಾಜ್ಯದಲ್ಲಿನ ಮಳೆ ಹಾನಿ ಹಾಗೂ ಪ್ರವಾಹ ಸ್ಥಿತಿ ಅಧ್ಯಯನಕ್ಕೆ ಕೇಂದ್ರದ ತಂಡ ಬಂದಿದೆ. ಈ ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
Recommended Video
ರಾಜ್ಯದಲ್ಲಿ ಭಾರಿ ಮಳೆ ಹಾಗೂ ಪ್ರವಾಹ ಸ್ಥಿತಿಯಿಂದ ಹಾನಿ ಹಿನ್ನೆಲೆಯಲ್ಲಿ ಕೇಂದ್ರ ಅಧ್ಯಯನ ತಂಡ ನಿನ್ನೆ ನಮ್ಮನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. ಮೂರು ತಂಡವಾಗಿ ಅವರು ಅಧ್ಯಯನ ಮಾಡಿಕೊಂಡು ಬರುತ್ತಾರೆ. ವಾಸ್ತವ ಸ್ಥಿತಿ ತಿಳಿದುಕೊಳ್ಳುತ್ತಾರೆ. ರಾಜ್ಯದ ವಿವಿಧೆಡೆಯಲ್ಲಿ ಅಧ್ಯಯನ ಮಾಡಲಿದೆ. ಅಧ್ಯಯನ ತಂಡ ಹಿಂದಿರುಗಿದ ಬಳಿಕ ನಾನು ಸಹ ದೆಹಲಿಗೆ ಹೋಗಿ ವಾಸ್ತವ ಸ್ಥಿತಿ ಹೇಳುತ್ತೇನೆ. ಕೇಂದ್ರ ಸರ್ಕಾರದ ಗಮನಕ್ಕೆ ರಾಜ್ಯದ ಪರಿಸ್ಥಿತಿಯನ್ನು ತರುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ.
ಡ್ರಗ್ ವಿಚಾರದಲ್ಲಿ ಪ್ರಭಾವಿಗಳ ಬಂಧನ ವಿಚಾರ: ಡ್ರಗ್ ಮಾಫಿಯಾದೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಪ್ರಭಾವಿಗಳ ಬಂಧನ ಆಗುತ್ತಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಡ್ರಗ್ ಮಾಫಿಯಾಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತದೆ. ನಮ್ಮ ಶಕ್ತಿ ಮೀರಿ ಕ್ರಮ ತೆಗೆದುಕೊಳ್ಳಲು ನಾವು ಬದ್ಧವಾಗಿದ್ದೇವೆ. ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತೇವೆ. ಯಾವುದೇ ಒತ್ತಡಕ್ಕೂ ನಮ್ಮ ಸರ್ಕಾರ ಮಣಿಯುವುದಿಲ್ಲ ಎಂಬುದನ್ನು ನಾನು ಜನರಿಗೆ ಹೇಳಲು ಬಯಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.