ಉಪಕದನ: ಮಠಗಳಗೆ ಎಡತಾಕುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಅ.21: ಹಾನಗಲ್ ಮತ್ತು ಸಿಂದಗಿ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತದಾರಷ್ಟೇ ಅಲ್ಲದೆ ವಿವಿಧ ಮಠ ಮಾನ್ಯಗಳಿಗೂ ಎಡತಾಕುತ್ತಿದ್ದಾರೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹಾದಿಯಲ್ಲಿ ಮಠಾಧೀಶರು ಮತ್ತ ಅವರ ಸಮುದಾಯಗಳ ಭಕ್ತರನ್ನು ಮೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ.
ಉಪಚುನಾವಣೆ ಎಲ್ಲರಿಗೂ ಪ್ರತಿಷ್ಠೆಯ ಕಣವಾಗಿದೆ. ಪರಸ್ಪರ ನಿಂದನೆ, ಬೈದಾಟ, ಆರೋಪ ,ಟೀಕೆಗಳಲ್ಲಿ ಎಲ್ಲ ನಾಯಕರೂ ತೊಡಗಿದ್ದಾರೆ. ಚುನಾವಣೆಯಲ್ಲಿ ವಿವಿಧ ಅಸ್ತ್ರಗಳನ್ನು ಪ್ರಯೋಗದ ನಂತರ ಈಗ ನಾಯಕರು ಮಠಗಳಿಗೆ ಭೇಟಿ ನೀಡುವ ಮೂಲಕ ಮಠಾಸ್ತ್ರವನ್ನೂ ಬಿಡಗತೊಡಗಿದ್ದಾರೆ. ಇದು ಮತದಾರರ ಮೇಲೆ ಏನು ಪರಿಣಾಮ ಉಂಟುಮಾಡುತ್ತದೆ ನೋಡಬೇಕು.
ಬುಧವಾರ ಬೆಳಗ್ಗೆ ಬೆಳಗಾವಿಯಿಂದ ಬೆಂಗಳೂರಿಗೆ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರದಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನದ ನಂತರ ತವರು ಜಿಲ್ಲೆ ಹಾವೇರಿಯತ್ತ ಪ್ರಯಾಣ ಬೆಳೆಸಿದರು. ಮಧ್ಯಾಹ್ನದ ನಂತರ ಯಾವುದೇ ಚುನಾವಣಾ ಪ್ರಚಾರ ಕಾರ್ಯ ಮಾಡದೆ ಕೇವಲ ಮಠಗಳ ಭೇಟಿ ಮಾತ್ರ ಹಮ್ಮಿಕೊಂಡಿದ್ದರು.
ಹಾನಗಲ್ ತಾಲ್ಲೂಕಿನ ಮಾರನಬೀಡ ಗ್ರಾಮದ ಚನ್ನಬಸವೇಶ್ವರ ಗದ್ದುಗೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ಇಲ್ಲಿನ ಅನ್ನ ದಾಸೋಹ ಸಭಾಂಗಣಕ್ಕೂ ತೆರಳಿ ಅಲ್ಲಿನ ಭಕ್ತರೊಂದಿಗೆ ಕೆಲ ಕಾಲ ಸಂವಾದ ನಡೆಸಿದರು. ಸಚಿವ ಶಂಕರಪಾಟೀಲ ಮುನೇನಕೊಪ್ಪ ಮುಖ್ಯಮಂತ್ರಿ ಜೊತೆಗಿದ್ದರು.
ಬಳಿಕ ಮುಖ್ಯಮಂತ್ರಿಗಳು ಹಾನಗಲ್ ತಾಲ್ಲೂಕಿನ ನರೇಗಲ್ ಗ್ರಾಮದ ವಿರಕ್ತಮಠದಲ್ಲಿ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಕತೃ ಗದ್ದಿಗೆಗೆ ಪೂಜೆ ಸಲ್ಲಿಸಿದರು. ಇಲ್ಲಿ ನೆರೆದಿದ್ದ ಅಪಾರ ಭಕ್ತರೊಂದಿಗೂ ಮುಖ್ಯಮಂತ್ರಿ ಮಾತನಾಡಿದ ಪಕ್ಷದ ಅಭ್ಯರ್ಥಿ ಆಗಿರುವ ಶಿವರಾಜ ಸಜ್ಜನರ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.
ದೂರವಾಣಿ ಮೂಲಕ ಮಠಾಧೀಶರೊಂದಿಗೆ ಮಾತುಕತೆ
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆಯಿದು. ಅದೂ ಸಹ ತವರು ಜಿಲ್ಲೆಯಲ್ಲಿ. ಶತಾಯ ಗತಾಯ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಬಿದ್ದಿದ್ದಾರೆ. ಕಾಂಗ್ರೆಸ್ ನಾಯಕರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ, ಇಲ್ಲಿ ಬಿಜೆಪಿಯ ಶಿವರಾಜ ಸಜ್ಜನರ ಗೆಲುವು ಅಷ್ಟು ಸುಲಭ ಅಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ಇದೆ ಎಂಬ ವರದಿ ಆಂತರಿಕ ಸಮೀಕ್ಷೆಯ ಮೂಲಕ ಬಂದಿದೆ ಎನ್ನಲಾಗಿದೆ.
ಹೀಗಾಗಿ ಬೊಮ್ಮಾಯಿ ಅವರು, ಹಾನಗಲ್ ವ್ಯಾಪ್ತಿಯಲ್ಲಿರುವ ಎಲ್ಲ ದೊಡ್ಡ ಮಠಗಳು ಮತ್ತು ಚಿಕ್ಕ ಮಠಗಳ ಮಠಾಧೀಶರೊಂದಿಗೆ ಬಸವರಾಜ ಬೊಮ್ಮಾಯಿ ವೈಯಕ್ತಿಕವಾಗಿ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ನನ್ನ ಸ್ವಂತ ಜಿಲ್ಲೆಯಲ್ಲಿ ಸೋಲು ನೋಡಬಾರದು. ಪಕ್ಷದ ಅಭ್ಯರ್ಥಿ ಜಯಗಳಿಸಲು ತಮ್ಮೆಲ್ಲರ ಸಹಕಾರ ಬೇಕು ಎಂದು ಮಠಾಧೀಶರನ್ನು ಕೋರಿದ್ದಾರೆ ಎಂದು ಹೇಳಲಾಗುತ್ತಿದೆ.
ಚುನಾವಣೆ ಬಂದಾಗ ರಾಜಕೀಯ ನಾಯಕರು ಮಠಮಾನ್ಯಗಳಿಗೆ ಭೇಟಿ ನೀಡುವುದು ಸರ್ವೇ ಸಾಮಾನ್ಯ. ಹೀಗೆ ಮಠಾಧೀಶರ ವಿಶ್ವಾಸ ಇಲ್ಲದೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಕಷ್ಟ ಎಂಬುದನ್ನು ರಾಜಕೀಯ ನಾಯಕರು ಅರಿತುಕೊಂಡಿದ್ದಾರೆ. ಇದಕ್ಕೆ ಯಾವುದೇ ಪಕ್ಷದವರೂ ಹೊರತಲ್ಲ. ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರದಲ್ಲಿ ಇದ್ದಾಗ ಮಠ-ಮಾನ್ಯಗಳಿಗೆ ಕೊಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡಿ ಅವರ ವಿಶೇಷ ಆಶೀರ್ವಾದ ಪಡೆಯುತ್ತಿದ್ದರು. ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂಧ ತೆಗೆಯದಂತೆ ಬಿಜೆಪಿ ಹೈಕಮಾಂಡ್ಗೆ ಮಠಾಧೀಶರುಗಳು ಬಹಿರಂಗ ಎಚ್ಚರಿಕೆಯನ್ನೂ ನೀಡಿದ್ದರು. ಈಗ ಯಡಿಯೂರಪ್ಪನವರಂತೆಯೇ ಬಸವರಾಜಜ ಬೊಮ್ಮಾಯಿ ಸಹ ಸಮುದಾಯದ ಪ್ರೀತಿ ಗಳಿಸಲು ಹೊರಟಂತೆ ಕಾಣಿಸುತ್ತಿದೆ.
ಕಾಂಗ್ರೆಸ್ ಸಹ ಹೊರತಲ್ಲ
ಇನ್ನು ಕಾಂಗ್ರೆಸ್ ಸಹ ಇದಕ್ಕೆ ಹೊರತಾಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಿವಿಧ ಜಾತಿಗಳ ಮುಖಂಡರ ಸಭೆ ನಡೆಸಿದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿವಿಧ ಸಮುದಾಯಗಳ ಮಠಗಳು ಹಾಗು ಗುರುಪೀಠಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ.
ಹಾವೇರಿ ತಾಲೂಕಿನ ನರಸೀಪುರದ ಶ್ರೀ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಯವರನ್ನು ಬುಧವಾರ ರಾತ್ರಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಶಾಸಕಿ ಸೌಮ್ಯಾರೆಡ್ಡಿ, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು.
Recommended Video