ದೇವಸ್ಥಾನ ತೆರವು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸೂಚನೆ!
ಬೆಂಗಳೂರು, ಸೆ. 17: ಉಚ್ಚಗಣಿಯ ಮಹದೇವಮ್ಮ ದೇವಸ್ಥಾನ ತೆರವು ಪ್ರಕರಣದೊಂದಿಗೆ ಮೊದಲ ಆಡಳಿತಾತ್ಮಕ ಸವಾಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಎದುರಾಗಿದೆ. ಒಂದೆಡೆ ಸ್ವಪಕ್ಷೀಯ ನಾಯಕರೇ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ವಿಪಕ್ಷಗಳು ಬಿಜೆಪಿಯ ಹಿಂದುತ್ವ ಅಜೆಂಡಾವನ್ನೇ ಪ್ರಶ್ನೆ ಮಾಡಿವೆ.
ಹೀಗಾಗಿ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆಯೊಂದಿಗೆ ಹೊಸ ಸಮಸ್ಯೆಯೂ ಬಿಜೆಪಿಗೆ ಎದುರಾದಂತಾಗಿದೆ. ಬಿಜೆಪಿ ಸರ್ಕಾರದ ನಿರ್ಧಾರದ ವಿರುದ್ಧ ಸ್ವಪಕ್ಷದಲ್ಲಿಯೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜೊತೆಗೆ ರಾಜ್ಯ ಸರ್ಕಾರ ಮಾಡಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ಪಟ್ಟಿಯಲ್ಲಿ ದೇವಸ್ಥಾನಗಳ ಸಂಖ್ಯೆಯೂ ದೊಡ್ಡದಿದೆ ಎನ್ನಲಾಗುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುವುದರಿಂದ ಆಗುವ ಪರಿಣಾಮಗಳ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ದೊಡ್ಡ ಚರ್ಚೆ ಶುರುವಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಸೂಚನೆ ಕೊಟ್ಟಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲಿ ಅವರು ಮಾತನಾಡಿದ್ದಾರೆ. ಸಿಎಂ ಬೊಮ್ಮಾಯಿ ಹೇಳಿಕೆಗೆ ಆರ್ಎಸ್ಎಸ್ ಖಡಕ್ ಸೂಚನೆ ಕಾರಣ ಎನ್ನಲಾಗಿದೆ.
ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಮಹತ್ವದ ಸೂಚನೆ!
ಮೈಸೂರು ಜಿಲ್ಲೆ ನಂಜನಗೂಡು ದೇವಸ್ಥಾನ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಮುಂದಿಟ್ಟುಕೊಂಡು ಅವಸರದಿಂದ ತುರ್ತು ಕ್ರಮ ಜರುಗಿಸಿ ದೇವಸ್ಥಾನಗಳನ್ನು ಒಡೆಯಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಧಾನಸೌಧದಲ್ಲಿ ದೇವಸ್ಥಾನ ತೆರವು ಕುರಿತು ಮಾತನಾಡಿ ಈ ವಿಷಯ ತಿಳಿಸಿದ್ದಾರೆ.
ಎರಡು ದಿನ ಕಾಯ್ದು ನೋಡಿ: ಸಿಎಂ ಬೊಮ್ಮಾಯಿ!
ಮೈಸೂರಿನ ದೇವಾಲಯಗಳ ತೆರವಿನ ಕುರಿತಂತೆ ಎಲ್ಲ ವಿವರಗಳನ್ನು ಸದನದಲ್ಲಿ ನೀಡುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾಕೆ ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.
ಇಡೀ ಕರ್ನಾಟಕದಲ್ಲಿ ಅವಸರದ ತೀರ್ಮಾನ ತೆಗೆದುಕೊಂಡು ದೇವಸ್ಥಾನಗಳನ್ನು ಒಡೆಯುವ ಕೆಲಸ ಮಾಡಬಾರದು. ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚಿಸಿ ಎರಡು ದಿನಗಳಲ್ಲಿ ನಿರ್ದಿಷ್ಟ ಸೂಚನೆ ನೀಡಲಾಗುವುದು. ಸದನ ನಡೆಯುತ್ತಿರುವುದರಿಂದ ಎಲ್ಲ ವಿವರಗಳನ್ನು ಸದನಕ್ಕೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
Recommended Video
ಸರ್ಕಾರಕ್ಕೆ ಖಡಕ್ ಸೂಚನೆ ರವಾನಿಸಿದ ಸಂಘ ಪರಿವಾರ?
ಉಚ್ಚಗಣಿಯ ಮಹದೇವಮ್ಮ ದೇವಸ್ಥಾನ ತೆರವು ಪ್ರಕರಣವನ್ನು ಸಂಘ ಪರಿವಾರ ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಖಡಕ್ ಸಂದೇಶವನ್ನು ಆರ್ಎಸ್ಎಸ್ ರವಾನಿಸಿದೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಸರ್ಕಾರದ ಆದೇಶವನ್ನು ಸಂಪೂರ್ಣವಾಗಿ ಹಿಂದಕ್ಕೆ ತೆಗೆದುಕೊಳ್ಳುವ ಆಶ್ವಾಸನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟಿದ್ದಾರೆ. ಈ ವಿಚಾರ ದೊಡ್ಡದಾಗುವ ಮೊದಲು ಸೂಕ್ತಕ್ರಮ ಕೈಗೊಳ್ಳಿ ಎಂಬ ಸೂಚನೆ ಸಂಘಪರಿವಾರದಿಂದ ಸರ್ಕಾರಕ್ಕೆ ಹೋಗಿದೆ. ಹೀಗಾಗಿ ಸರ್ಕಾರ ನಾಳೆಯೊಳಗೆ (ಗುರುವಾರ) ಮತ್ತೊಂದು ಆದೇಶ ಮಾಡಲಿದೆ ಎನ್ನಲಾಗಿದೆ. ಸುಪ್ರೀಂಕೋರ್ಟ್ ಆದೇಶ ಪಾಲನೆಯೊಂದಿಗೆ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಮೂಲ ಬಿಜೆಪಿಗರ ಆಕ್ಷೇಪ?
ರಾಜ್ಯ ಬಿಜೆಪಿ ಸರ್ಕಾರ ಹಿಂದುತ್ವದ ಅಜೆಂಡಾದಿಂದ ದೂರ ಸರಿಯುತ್ತದೆ ಎಂಬ ಆರೋಪವನ್ನು ಈ ಹಿಂದೆಯೇ ಬಿಜೆಪಿಯ ಕಟ್ಟರ್ ಶಾಸಕರು ಮಾಡಿದ್ದರು. ಅದಾದ ಬಳಿಕ ನಾಯಕತ್ವ ಬದಲಾವಣೆ ಆಗಿತ್ತು. ನಂತರ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹೊಸ ಸಚಿವ ಸಂಪುಟವೂ ಅಸ್ತಿತ್ವಕ್ಕೆ ಬಂದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಕೆಲವೇ ಕೆಲವು ಮಂದಿ ಮೂಲ ಬಿಜೆಪಿಗರಿಗೆ ಮಂತ್ರಿಸ್ಥಾನ ಸಿಕ್ಕಿದೆ. ಜೊತೆಗೆ ಈಗ ಬಿಜೆಪಿಯ ಮೂಲ ಮಂತ್ರ ಹಿಂದುತ್ವದ ಅಜೆಂಡಾಕ್ಕೆ ಪಟ್ಟು ಬೀಳುವಂತಹ ಆದೇಶವನ್ನು ರಾಜ್ಯ ಸರ್ಕಾರ ಮಾಡಿದೆ. ಹೀಗಾಗಿ ತತ್ಕ್ಷಣ ಆದೇಶವನ್ನು ಹಿಂದಕ್ಕೆ ಪಡೆದು, ಹೊಸ ಆದೇಶ ಹೊರಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ ಎನ್ನಲಾಗಿದೆ.