ಡಿವೈನ್ ಟೈಡ್ಸ್: ಕನ್ನಡಿಗ ರಿಕಿ ಕೇಜ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನ
ಬೆಂಗಳೂರು, ಮೇ 2: ತಮ್ಮ ಸುಮಧುರ ಸಂಗೀತದ ಮೂಲಕ ಪ್ರಕೃತಿಯಿಂದ ದೈವೀಕತೆಯ ಅದ್ಭುತ ಕಲ್ಪನೆಯನ್ನು ಡಿವೈನ್ ಟೈಡ್ಸ್ ಆಲ್ಬಂನಲ್ಲಿ ರಿಕಿ ಕೇಜ್ ಅಭಿವ್ಯಕ್ತಗೊಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಡಿವೈನ್ ಟೈಡ್ಸ್ ಆಲ್ಬಂಗಾಗಿ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಪಡೆದಿರುವ ಕನ್ನಡಿಗ ರಿಕಿ ಕೇಜ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಡಿವೈನ್ ಟೈಡ್ಸ್ನಲ್ಲಿ ಪ್ರಕೃತಿಯ ಬಗ್ಗೆ ಬಿಂಬಿಸಿರುವುದು ಬಹಳ ಸತ್ಯ. ದೈವೀಕತೆ ಎಂದರೆ ಪ್ರಕೃತಿಯೊಂದಿಗೆ ಸಂಪರ್ಕ ಹೊಂದುವುದು. ಪ್ರಕೃತಿಯ ಸಂಪರ್ಕವಿಲ್ಲದಿದ್ದರೆ ದೈವೀಕತೆ ದೊರಕುವುದಿಲ್ಲ ಎಂದರು ಮುಖ್ಯ ಮಂತ್ರಿಗಳು ಅಭಿಪ್ರಾಯ ಪಟ್ಟರು.
ಅತ್ಯಂತ ಕಡು ಬಡವ, ಶಿಕ್ಷಣ ಇಲ್ಲದವನೂ ದೇವರನ್ನು ಸೃಷ್ಟಿಸಬಹುದು ಎನ್ನುವುದು ಅದ್ಭುತವಾದ ಕಲ್ಪನೆ ಎಂದರು.
Recommended Video
ಅಪ್ಪಟ ಕನ್ನಡಿಗರಾದ ರಿಕಿ ಕೇಜ್ ಅವರು ವಿಶ್ವಮಟ್ಟದ ಸಾಧನೆ ಮಾಡಿದ್ದು, ಕನ್ನಡಿಗರ ಹೆಮ್ಮೆಯಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ತಮ್ಮ ಛಾಪನ್ನು ಮೂಡಿಸಿರುವುದು ದೊಡ್ಡ ಸಂಗತಿ . ಗ್ರ್ಯಾಮಿ ಅವಾರ್ಡ್ ಕನ್ನಡದಲ್ಲಿ ಯಾವುದೇ ಸಂಗೀತ ಸಂಸ್ಥೆಗೂ ಈವರೆಗೂ ದೊರೆತಿರಲಿಲ್ಲ. ಈ ಪ್ರಶಸ್ತಿಗೆ ನಾಮನಿರ್ದೇಶಗೊಳ್ಳುವುದೇ ದೊಡ್ಡ ವಿಷಯ. ಲಹರಿ ಸಂಸ್ಥೆ ಇದರ ಭಾಗವಾಗಿರುವುದು ಶ್ಲಾಘನೀಯ. ಪ್ರಶಸ್ತಿ ಪಡೆದು ನಮ್ಮ ನಿರೀಕ್ಷೆಯನ್ನು ಎತ್ತರಕ್ಕೆ ಕೊಂಡೊಯ್ದಿದ್ದೀರಿ ಎಂದರು. ಇಡೀ ವಿಶ್ವದಲ್ಲಿ ಸಿಗದ ವಿಚಾರ, ತತ್ವಗಳು, ಭಾರತದಲ್ಲಿ ಇವೆ. ಬದಲಾವಣೆ ಒಳಗಿನಿಂದ ಬರಬೇಕೆನ್ನುವುದು ಅಪ್ಪಟ ಸತ್ಯ. ವೈಯಕ್ತಿಕವಾಗಿ ಹಾಗೂ ಸರ್ಕಾರದಲ್ಲಿ ಕೆಲಸ ಮಾಡಲು ನನಗೆ ಸ್ಫೂರ್ತಿಯಾಗಿದ್ದೀರಿ. ನೀವು ಹೇಳಿರುವ ಮಾತು ಯಶಸ್ವಿಯಾಗಿದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ನಾವು ಮಾಡಿ ತೋರಿಸುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.