ಕೃಷಿ ಬಜೆಟ್ ಬಳಿಕ ಇದೀಗ, 'ಮಕ್ಕಳ ಬಜೆಟ್' ಮಂಡನೆಗೆ ಬಿಎಸ್ವೈ ಸಿದ್ಧತೆ
ಬೆಂಗಳೂರು, ಫೆ. 11: ಒಂದು ಕಡೆ ಪುತ್ರ, ರಾಜ್ಯ ಬಿಜೆಪಿ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಅವರನ್ನು ರಾಜಕೀಯ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮತ್ತೊಂದೆಡೆ ತಮ್ಮ ಮಕ್ಕಳ ಬಜೆಟ್ ಮೂಲಕ ಇತಿಹಾಸ ಸೃಷ್ಟಿಗೆ ಮುಂದಾಗಿದ್ದಾರೆ.
ಹೌದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಕ್ಕಳ ಬಜೆಟ್ ಈ ಬಾರಿಯ ವಿಶೇಷವಾಗಲಿದೆ. ಈ ಹಿಂದೆ ಮೊದಲ ಸಲ ಬಿಜೆಪಿ ಸರ್ಕಾರ ಬಂದಾಗ ಕೃಷಿ ಬಜೆಟ್ ಮಂಡನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ, ಈ ಬಾರಿ ಮಕ್ಕಳ ಬಜೆಟ್ನಿಂದ ಇತಿಹಾಸ ಸೃಷ್ಟಿಸಲು ಮುಂದಾಗಿದ್ದಾರೆ.
ಪ್ರಧಾನಮಂತ್ರಿ ಕುಸುಮ್ ಯೋಜನೆ ವಿಸ್ತರಣೆ: ರೈತರಿಗೆ ಏನು ಲಾಭ?
ಕಳೆದ 2018ರ ವಿಧಾನಸಭೆ ಚುನಾವಣೆ ಬಳಿಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಅಧಿಕಾರ ಹಿಡಿಯಯವಲ್ಲಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹಿನ್ನಡೆಯಾಗಿತ್ತು. ಆ ಬಳಿಕ ಪುತ್ರ ಬಿ.ವೈ. ವಿಜಯೇಂದ್ರ ಅವರ ಪ್ರಯತ್ನದೊಂದಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಬಿಎಸ್ವೈ ರಚನೆ ಮಾಡಿದ್ದಾರೆ. ಜೊತೆಗೆ ಉಪ ಚುನಾವಣೆಯಲ್ಲಿ ವಿಜಯೇಂದ್ರ ಅವರ ಸಾಧನೆ ಬಿಜೆಪಿ ಹೈಕಮಾಂಡ್ ಗಮನಕ್ಕೂ ಬಂದಿದೆ. ಹಾಗಂತ ಯಡಿಯೂರಪ್ಪ ಅವರ 'ಮಕ್ಕಳ ಬಜೆಟ್' ಅಂದರೆ ಅವರ ಸ್ವಂತ ಮಕ್ಕಳ ಬಜೆಟ್ ಅಲ್ಲ!
ಯಡಿಯೂರಪ್ಪ ಅವರ 'ಕನಸಿನ ಮಕ್ಕಳ ಬಜೆಟ್'
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತಿದೆ. ಹೀಗಾಗಿ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಮಕ್ಕಳಿಗಾಗಿ ಈ ಬಾರಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಲು ಸಿಎಂ ಬಿಎಸ್ವೈ ತಯಾರಿ ನಡೆಸಿದ್ದಾರೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪ್ರತ್ಯೇಕ ಬಜೆಟ್ ಮಂಡನೆ ಮಾಡಲು ತೀರ್ಮಾನಿಸಲಾಗಿದ್ದು, ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವೆ ಕಳಿಸುವಂತೆ ಯಡಿಯೂರಪ್ಪ ಅವರು ಸೂಚಿಸಿದ್ದಾರೆ. ಮಕ್ಕಳ ಅಭಿವೃದ್ಧಿ, ಯೋಜನೆ ಮತ್ತು ಕಾರ್ಯಕ್ರಮ, ಹಂಚಿಕೆ ಮಾಡುವ ಅನುದಾನ, ವೆಚ್ಚ ವಿಶ್ಲೇಷಿಸುವುದು ಸರ್ಕಾರದ ಉದ್ದೇಶವಾಗಿದೆ.
ಎಲ್ಲಾ ಇಲಾಖೆಗಳ ತಮ್ಮ ಇಲಾಖೆ ವ್ಯಾಪ್ತಿಗೆ ಬರುವ ಮಕ್ಕಳ ಕೇಂದ್ರಿತ ಯೋಜನೆ, ಕಾರ್ಯಕ್ರಮಗಳ ವಿವರ, ಅನುದಾನ ಹಂಚಿಕೆ, ಖರ್ಚು, ಕಾರ್ಯನೀತಿಯನ್ನು ವಿವರಿಸಬೇಕು ಎಂದು ಸಿಎಂ ಯಡಿಯೂರಪ್ಪ ಈಗಾಗಲೇ ಆದೇಶ ಹೊರಡಿಸಿದ್ದಾರೆ.
UNICEF ನೆರವಿನೊಂದಿಗೆ ಮಕ್ಕಳ ಬಜೆಟ್
ಯುನಿಸೆಫ್ ಹಣಕಾಸು ನೆರವಿನಿಂದ ರಾಜ್ಯ ಸರ್ಕಾರದ ಪ್ರತ್ಯೇಕ ಮಕ್ಕಳ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 2020-21ನೇ ಆರ್ಥಿಕ ವರ್ಷದಿಂದ ಮೊದಲ ಬರಿ ಮಕ್ಕಳ ಆಯವ್ಯವ ಮಂಡನೆ ಮಾಡಲು ಸರ್ಕಾರ ನಿರ್ಣಯ ಮಾಡಿದೆ. ಯುನಿಸೆಫ್ ನೆರವಿನ ಯೋಜನೆಗಳನ್ನು ಕಾಲಮಿತಿಯಲ್ಲಿ ನಿರ್ವಹಣೆ ಮಾಡಬೇಕಾಗುತ್ತದೆ. ಮುಂದಿನ ಆಯವ್ಯಗಳ್ಲಿಯೂ ಮಕ್ಕಳ ಬಜೆಟ್ ಮುಂದುವರೆಯಲಿದೆ. ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಅಪೌಷ್ಟಿಕತೆ ಕುರಿತು ಯುನಿಸೆಫ್ ಕಳವಳ ವ್ಯಕ್ತಪಡಿಸಿತ್ತು. ಬಳಿಕ ರಾಜ್ಯ ಸರ್ಕಾರ ಮಕ್ಕಳ ಅಪೌಷ್ಟಿಕತೆ ಹೋಗಲಾಡಿಸಲು ಹಲವು ಯೋಜನೆಗಳನ್ನು ರೂಪಸಿತ್ತು. ಮುಖ್ಯವಾಗಿ ರಾಯಚೂರು ಜಿಲ್ಲೆಯಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದ ವರದಿ ಆಗಿತ್ತು.
ಹೀಗಾಗಿ ಎಲ್ಲ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿನ ಮಕ್ಕಳ ಯೋಜನೆಗಳ ಬಗ್ಗೆ ಸೂಕ್ತ ನಿಗಾವಹಿಸಲು ಸೂಚನೆ ಕೊಡಲಾಗಿದೆ.
ಮಕ್ಕಳ ಯೋಜನೆಗಳ ಮೇಲ್ವಿಚಾರಣೆ ಪಂಚಾಯ್ತಿಗಳಿಗೆ
ಜಿಲ್ಲಾ ಮತ್ತು ಗ್ರಾಮ ಪಂಚಾಯ್ತಿಗಳ ಹಂತದ ಸಂಸ್ಥೆಯಲ್ಲಿಯೆ ಮಕ್ಕಳ ಕುರಿತಾದ ಸರ್ಕಾರದ ಯೋಜನೆಗಳ ಮೇಲ್ವಿಚಾರಣೆ ಮತ್ತು ಅನುದಾನ ಹಂಚಿಕೆ ಹಾಗೂ ವೆಚ್ಚಗಳ ನಿರ್ವಹಣೆ ಕುರಿತಂತೆ ನಿಗಾವಹಿಸಲು ಬಜಟ್ನಲ್ಲಿ ಯೋಜನೆ ರೂಪಿಸಲಾಗುತ್ತಿದೆ.
ಸರ್ಕಾರದ ಎಲ್ಲ ಇಲಾಖೆಗಳು ತಮ್ಮ ಇಲಾಖೆಯಡಿ ಮಕ್ಕಳ ಕಾರ್ಯಕ್ರಮಗಳಿಗೆ ಹಂಚಿಕೆಯಾಗಿರುವ ಒಟ್ಟು ಅನುದಾನ, ವೆಚ್ಚಗಳು ಹಾಗೂ ಅನುಷ್ಠಾನದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಕೊಡಲು ಸೂಚನೆ ಕೊಡಲಾಗಿದೆ. ಶೇಕಡಾ 100ರಷ್ಟು ಮಕ್ಕಳ ಕೇಂದ್ರಿತ ಯೋಜನೆ, ಕಾರ್ಯಕ್ರಗಳು ಹಾಗೂ ಶೇಕಡಾ 100ಕ್ಕಿಂತ ಕಡಿಮೆ ಮಕ್ಕಳ ಕೇಂದ್ರಿತ ಯೋಜನೆ, ಕಾರ್ಯಕ್ರಮಗಳನ್ನು ವರ್ಗೀಕರಣ ಮಾಡಲು ಸೂಚನೆ ಕೊಡಲಾಗಿದೆ.
ಒಟ್ಟು ಬಜೆಟ್ನಲ್ಲಿ ಮಕ್ಕಳ ಅಭಿವೃದ್ಧಿಗೆ ಒದಗಿಸಲಾಗುತ್ತಿರುವ ಅನುದಾನದ ಪರಿಶೀಲನೆ ಮಾಡುವುದು ಹಾಗೂ ಮಕ್ಕಳ ಅಭ್ಯುದಯಕ್ಕೆ ಬೇಕಾದ ಯೋಜನೆಗಳನ್ನು ರೂಪಿಸುವುದು ಮಕ್ಕಳ ಬಜೆಟ್ ಮುಖ್ಯ ಉದ್ಧೇಶವಾಗಿದೆ.
ಹಿಂದೆ ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಿದ್ದ ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ ಅವರು 2011 ಫೆಬ್ರುವರಿ 24ರಂದು 40 ಪುಟಗಳ ಕೃಷಿ ಬಜೆಟ್ ಮಂಡನೆ ಮಾಡಿದ್ದರು. ಕೃಷಿ ಬಜೆಟ್ ಓದಿದ ಬಳಿಕ 87 ಪುಟಗಳ ಸಾಮಾನ್ಯ ಬಜೆಟ್ ಮಂಡನೆ ಮಾಡಿದ್ದರು. ಶೇ. 1ರ ಬಡ್ಡಿ ದರದಲ್ಲಿ ರೈತರಿಗೆ ಕೃಷಿ ಸಾಲ, 2011-2020ರ ದಶಕವನ್ನು ನೀರಾವರಿ ದಶಕವೆಂದು ಘೋಷಣೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಡಿಪ್ಲೋಮಾ ಕೋರ್ಸ್ ಆರಂಭ, ಸಾವಯವ ಮಿಶನ್ ಸ್ಥಾಪನೆ ಸೇರಿದಂತೆ ಹಲವು ಯೋಜನೆ ಘೋಷಣೆ ಮಾಡಿದ್ದರು. ಒಟ್ಟು 17,857 ಕೋಟಿ ರೂ.ಗಳ ಕೃಷಿ ಬಜೆಟ್ನ್ನ ಯಡಿಯೂರಪ್ಪ ಮಂಡಿಸಿದ್ದರು. 2011ರ ಸಾಮಾನ್ಯ ಬಜೆಟ್ನ ಒಟ್ಟು ಗಾತ್ರ ಒಟ್ಟು 85,319 ಕೋಟಿ ರೂ.ಗಳಷ್ಟಾಗಿತ್ತು. ಇದೀಗ ಮಕ್ಕಳಿಗಾಗಿ ಪ್ರತ್ಯೇಕ ಬಜೆಟ್ ಮಂಡನೆಗೆ ಮುಂದಾಗಿರುವ ಬಿ.ಎಸ್. ಯಡಿಯೂರಪ್ಪ ಅವರು ಮಕ್ಕಳಿಗೆ ವಿಶೇಷ ಯೋಜನೆಗಳನ್ನು ರೂಪಿಸಲಿದ್ದಾರೆ ಎಂಬ ಮಾಹಿತಿಯಿದೆ.