ಈ ವರ್ಷದ ಬಜೆಟ್ ಹೇಗಿರಲಿದೆ? ಸುಳಿವು ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ!
ಬೆಂಗಳೂರು, ಮಾ. 07: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಾಳೆ ಮಾರ್ಚ್ 8ರಂದು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಅಧಿವೇಶನದ ಮೊದಲ ಎರಡು ದಿನಗಳ ವಿಶೇಷ ಕಲಾಪ ಈಗಾಗಲೇ ಕಾಂಗ್ರೆಸ್ ಪ್ರತಿಭಟನೆಗೆ ಬಲಿಯಾಗಿದೆ. ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತು ಚರ್ಚೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಆ ವಿಷಯದ ಮೇಲೆ ಯಾವುದೇ ಚರ್ಚೆ ನಡೆದಿಲ್ಲ.
ನಾಳೆಯಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಕೊರೊನಾ ವೈರಸ್ನಿಂದಾಗಿ ಆರ್ಥಿಕ ಚಟುವಟಿಕೆಗಳು ಕುಂಠಿತಗೊಂಡು, ತೀವ್ರ ಆರ್ಥಿಕ ಕೊರತೆಯನ್ನು ಹಣಕಾಸು ಇಲಾಖೆ ಎದುರಿಸುತ್ತಿದೆ. ಇದೇ ಸಂದರ್ಭದಲ್ಲಿ ಆರ್ಥಿಕ ಸಮತೋಲನ ಕಾಯ್ದುಕೊಂಡು ಬಜೆಟ್ ಮಂಡನೆ ಮಾಡಬೇಕಾದ ಸವಾಲು ಸಿಎಂ ಯಡಿಯೂರಪ್ಪ ಅವರ ಮುಂದಿದೆ.
ಬಜೆಟ್ 2021; ಉತ್ತರ ಕನ್ನಡ ಜಿಲ್ಲೆಯ ನಿರೀಕ್ಷೆಗಳು
ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ಖಾಸಗಿ ಹೊಟೆಲ್ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಔತಣಕೂಟ ಏರ್ಪಡಿಸಿದ್ದರು. ಅಲ್ಲಿ ಅನೌಪಚಾರಿಕವಾಗಿ ಮಾತನಾಡಿರುವ ಯಡಿಯೂರಪ್ಪ ಅವರು ಈ ಸಾಲಿನ ಬಜೆಟ್ ಪ್ರಮುಖ ಅಂಶಗಳ ಸುಳಿವು ನೀಡಿದ್ದಾರೆ.
ಬಜೆಟ್; ಮಂಡ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುತ್ತಾರಾ ಸಿಎಂ?
ಹೊಸ ತೆರಿಗೆ, ಇಂಧನದ ಮೇಲಿನ ಸೆಸ್ ಕಡಿಮೆ ಮಾಡುವುದು, ಮತ್ತಷ್ಟು ಸಾಲ ಮಾಡುವ ಸಾಧ್ಯತೆಗಳು ಅವರ ಮಾತಿನಿಂದ ತಿಳಿದು ಬಂದಿವೆ. ಒಟ್ಟಾರೆ ಈ ಬಾರಿಯ ಬಜೆಟ್ ಹೇಗಿರಲಿದೆ ಎಂಬುದರ ಮುನ್ನೋಟ ಇಲ್ಲಿದೆ.
ಯಾರಿಗೂ ಹೊರೆಯಾಗದ ಬಜೆಟ್ ಮಂಡನೆ
ಕೋವಿಡ್ ನಿಂದಾಗಿ ಆರ್ಥಿಕ ಕೊರತೆಯಾಗಿದೆ. ಆದರೂ ಇತ್ತೀಚೆಗೆ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ. ಲಾಕ್ಡೌನ್ನಿಂದಾಗಿ ಜನ ಸಾಮಾನ್ಯರ ಆರ್ಥಿಕ ಪರಿಸ್ಥಿತಿ ಸರ್ಕಾರಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಎಲ್ಲ ವರ್ಗಗಳಿಗೂ ಅನುಕೂಲಕರವಾದ ಬಜೆಟ್ ಮಂಡನೆ ಮಾಡುತ್ತೇನೆ. ಯಾವ ವರ್ಗಗಳಿಗೂ ಹೊರೆಯಾಗದ ಬಜೆಟ್ ಇದಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2021-22ನೇ ಸಾಲಿನ ಬಜೆಟ್ ಕುರಿತು ಮಾಹಿತಿ ನೀಡಿದ್ದಾರೆ.
ಜನರ ಮೇಲೆ ಮತ್ತಷ್ಟು ಸಾಲದ ಹೊರೆ ಗ್ಯಾರಂಟಿ
ಪ್ರಸಕ್ತ ಸಾಲಿನಲ್ಲಿ ಕೊರೊನಾ ಆರ್ಥಿಕ ಸಂಕಷ್ಟದಿಂದ ಆರ್ಥಿಕ ಶಿಸ್ತು ಮೀರಿ ಸಾಲ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ, ಹೀಗಾಗಿ ಉತ್ತಮ ಬಜೆಟ್ ಮಂಡನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.
ಈವರೆಗೆ ಒಟ್ಟು ಜಿಡಿಪಿಯ ಶೇಕಡಾ 3ರಷ್ಟು ಅಥವಾ ಅದಕ್ಕಿಂತ ಕಡಿಮೆ ಸಾಲ ಮಾಡಲು ಕೇಂದ್ರ ಸರ್ಕಾರದ ಅನುಮತಿಯಿತ್ತು. ಆದರೆ ಕೊರೊನಾ ವೈರಸ್ ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ ಒಟ್ಟು ಜಿಡಿಪಿಯ ಶೇಕಡಾ 5 ರಷ್ಟು ಸಾಲ ಮಾಡಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಹೀಗಾಗಿ ಕಳೆದ ಫೆಬ್ರುವರಿ ತಿಂಗಳ ಅಂತ್ಯಕ್ಕೆ ಬರೊಬ್ಬರಿ 60 ಸಾವಿರ ಕೋಟಿ ರೂ. ಸಾಲವನ್ನು ರಾಜ್ಯ ಸರ್ಕಾರ ಮಾಡಿತ್ತು. ಇದೀಗ ಮತ್ತಷ್ಟು ಸಾಲದ ಹೊರೆ ರಾಜ್ಯದ ಮೇಲೆ ಬೇಳಲಿದೆ ಎಂಬುದನ್ನು ಬಜೆಟ್ ಮಂಡನೆಗೂ ಮೊದಲೇ ಸಿಎಂ ಯಡಿಯೂರಪ್ಪ ಬಹಿರಂಗಪಡಿಸಿದ್ದಾರೆ.
ಈ ವರ್ಷದ ಅಂತ್ಯಕ್ಕೆ ಒಟ್ಟಾರೆ ರಾಜ್ಯದ ಸಾಲ 4.19 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಬಜೆಟ್ ಮಂಡನೆ ಬಳಿಕ ವಿಪಕ್ಷಗಳು ಅದರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಾಲ ಮಾಡಿ ತುಪ್ಪ ತಿನ್ನಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ ಎಂಬ ಆರೋಪ ಮಾಡುವುದು ನಿರೀಕ್ಷಿತ.
ಮಹಿಳೆಯರಿಗಾಗಿ ಹೊಸ ಯೋಜನೆಗಳ ನಿರೀಕ್ಷೆ
ಈ ಸಲದ ಬಜೆಟ್ನಲ್ಲಿ ಮಹಿಳಾ ಪರ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸುಳಿವು ನೀಡಿದ್ದಾರೆ. ಹೀಗಾಗಿ ಅವರೇ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮೀ ಯೋಜನೆ ಸೇರಿದಂತೆ ಮತ್ತಷ್ಟು ಯೋಜನೆಗಳು ಮಹಿಳೆಯರಿಗಾಗಿ ನಿರೀಕ್ಷೆ ಮಾಡಬಹುದಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ಸೇರಿದಂತೆ ಹಲವು ಯೋಜನೆಗಳನ್ನು ಯಡಿಯೂರಪ್ಪ ಅವರು ಬಜೆಟ್ನಲ್ಲಿ ಇರಲಿವೆ ಎಂಬ ಮುನ್ಸೂಚನೆ ಸಿಕ್ಕಿದೆ.
ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ಇಳಿಸ್ತಾರ?
ಇದೇ ಸಂದರ್ಭದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ಯಾವುದೇ ಹೊಸ ತೆರಿಗೆಗಳನ್ನು ಜನ-ಸಾಮಾನ್ಯರ ಮೇಲೆ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಜೆಟ್ ಬಳಿಕ ಯಾವುದೇ ದಿನಬಳಕೆ ವಸ್ತು ಸೇರಿದಂತೆ ಯಾವುದೇ ವಸ್ತುಗಳ ಬೆಲೆ ಏರಿಕೆ ಆಗುವ ಸಾಧ್ಯತೆಗಳಿಲ್ಲ ಎನ್ನಬಹುದು.
ಆದರೆ ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೆಸ್ ಇಳಿಸಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಜೆಟ್ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಆಗುವುದಿಲ್ಲ. ಬದಲಿಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೆ ಹೆಚ್ಚು ಎಂಬ ಮಾಹಿತಿಯಿದೆ.
ಪ್ರತ್ಯೇಕ ಕೃಷಿ ಬಜೆಟ್ ಇಲ್ಲ, ಆದರೆ..
ಮೊದಲ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರತ್ಯೇಕ ಕೃಷಿ ಬಜೆಟ್ನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮಂಡಿಸಿದ್ದರು. ಆ ಮೂಲಕ ದೇಶದಲ್ಲಿಯೇ ಮೊದಲ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಮಾಡಿದ ಹೆಗ್ಗಳಿಕೆ ಯಡಿಯೂರಪ್ಪ ಅವರದ್ದಾಗಿತ್ತು. ಆದರೆ ಪ್ರತ್ಯೇಕ ಪುಸ್ತಕ ಮಾಡಿದ್ದಾರಷ್ಟೇ, ರೈತರಿಗೆ ಹೆಚ್ಚಿನ ಯೋಜನೆಗಳನ್ನೇನು ಯಡಿಯೂರಪ್ಪ ಕೊಟ್ಟಿಲ್ಲ ಎಂಬ ಆರೋಪವನ್ನು ವಿಪಕ್ಷ ನಾಯಕರು ಆಗ ಮಾಡಿದ್ದರು.
ಹೀಗಾಗಿ ಈ ಬಾರಿ ಪ್ರತ್ಯೇಕ ಕೃಷಿ ಬಜೆಟ್ ಇರುವುದಿಲ್ಲ ಎಂದು ಈ ಮೊದಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ ರೈತ ಪರವಾದ ಬಜೆಟ್ ಮಂಡನೆ ಮಾಡುತ್ತೇನೆ ಎಂದಿದ್ದಾರೆ. ಹೀಗಾಗಿ ರೈತರಿಗೆ ನೀರಾವರಿ ಸೇರಿದಂತೆ ಇತರ ಸಾಲಗಳ ಬಡ್ಡಿದರದಲ್ಲಿ ಕಡಿತ ಮಾಡುವ ಸಾಧ್ಯತೆಗಳಿವೆ.
ಒಟ್ಟಾರೆ ಆರ್ಥಿಕ ಶಿಸ್ತು ಮೀರಿದರೂ ಜನರಿಗೆ ಹೊರೆಯಾಗದ ಬಜೆಟ್ ಮಂಡನೆ ಮಾಡುವ ಸುಳಿವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟಿದ್ದಾರೆ.