ಹಿಂಜರಿಕೆಯಿಂದ ಸಿಎಂ ಯಡಿಯೂರಪ್ಪ ದಾವೋಸ್ಗೆ ಹೋಗಿದ್ಯಾಕೆ?
ಬೆಂಗಳೂರು, ಜ. 25: ದಾವೋಸ್ಗೆ ಬಹಳ ಹಿಂಜರಿಕೆಯಿಂದಲೇ ಹೋಗಿದ್ದೇವು. ಆದರೆ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಹಿಂಜರಿಕೆ ಮಾಯವಾಗಿ, ಯುವಕರಿಗೆ ಮತ್ತು ರೈತರಿಗೆ ಮುಂದಿನ ದಿನ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ. ಸ್ವಿಜರ್ಲ್ಯಾಂಡ್ ನ ದಾವೋಸ್ನಲ್ಲಿ ನಡೆದ ಆರ್ಥಿಕ ಸಮಾವೇಶದ ಕುರಿತು ಗೃಹಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿ ರೂ. ಹಣ ರಾಜ್ಯಕ್ಕೆ ಹರಿದು ಬರಲಿದೆ. ಇದೇ ನವೆಂಬರ್ ತಿಂಗಳಿನಲ್ಲಿ ನಡೆಯಲಿರೋ ಹೂಡಿಕೆ ಸಮಾವೇಶಕ್ಕೆ ಉದ್ಯಮಿಗಳನ್ನ ಆಹ್ವಾನಿಸಲು ದಾವೋಸ್ ಭೇಟಿ ಸಹಕಾರಿಯಾಗಿದೆ. ಅದರಿಂದ 'ಇನ್ವೆಸ್ಟ್ ಕರ್ನಾಟಕ'ಕ್ಕೆ ಬಂಡವಾಳ ಹೂಡಿಕೆ ಹರಿದು ಬರಲಿದೆ. ಬೇರೆ ಯಾರು ಮಾಡದ ಒಪ್ಪಂದವನ್ನ ರಾಜ್ಯ ಸರ್ಕಾರ ಮಾಡಿಕೊಂಡಿದೆ ಎಂದು ಯಡಿಯೂರಪ್ಪ ದಾವೋಸ್ ಸಮಾವೇಶದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.
40ಕ್ಕೂ ಹೆಚ್ಚು ಹೂಡಿಕೆದಾರರ ಜೊತೆ ಮಾತುಕತೆ
ದಾವೋಸ್ ಸಮಾವೇಶದಲ್ಲಿ 40ಕ್ಕೂ ಹೆಚ್ಚು ಉದ್ಯಮಿಗಳು ಹಾಗೂ ಹೂಡಿಕೆದಾರರ ಜೊತೆ ಮಾತುಕತೆಯಾಗಿದೆ. ಲಕ್ಷ್ಮೀ ಮಿತ್ತಲ್, ನೆಸ್ಲೆ, ಸೇರಿದಂತೆ ಹಲವು ಕಂಪನಿಗಳ ಜೊತೆ ಒಡಂಬಡಿಕೆಯಾಗಿದೆ. ಕೆಲವು ಒಪ್ಪಂದಗಳಿಗೆ ಈಗಾಗಲೇ ಅನೌಪಚಾರಿಕ ಸಹಿಹಾಕಿದ್ದೇವೆ. ದೇಶಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಹೆಚ್ಚು ಹೂಡಿಕೆ ಆಗಲಿದೆ.
'ಇನ್ವೆಸ್ಟ್ ಕರ್ನಾಟಕ'ಕ್ಕೆ ದಾವೊಸ್ನಲ್ಲಿ ಚಾಲನೆ ನೀಡಿದ ಯಡಿಯೂರಪ್ಪ
ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿ ಗೆ ಇರುವ ಅವಕಾಶಗಳ ಬಗ್ಗೆ ಹೂಡಿಕೆದಾರರಿಗರ ಮನವರಿಕೆ ಮಾಡಿಕೊಟ್ಟಿದ್ದೇವೆ. ಕರ್ನಾಟಕದಲ್ಲಿ ಹೆಚ್ಚು ಜನರಿಗೆ ಉದ್ಯೋಗಗಳನ್ನ ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಅವಕಾಶವಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದೇವೆ. ಬೆಂಗಳೂರಿನಿಂದ ಹೊರಗೆ ಹೂಡಿಕೆ ಮಾಡುವವರಿಗೆ ವಿಶೇಷ ಸೌಲಭ್ಯ, ರಿಯಾಯತಿ ಕೊಡುವ ಬಗ್ಗೆಯೂ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಭೂ ಪರಿವರ್ತನೆಗೆ ಕಾನೂನು ಬದಲಾವಣೆ
ಕೈಗಾರಿಕಾ ಸಚಿವರಾದ ಜನದೀಶ್ ಶೆಟ್ಟರ್ ಅವರು ಅರಬ್ ನಾಯಕರ ಜೊತೆ ಚರ್ಚೆ ಮಾಡಿದ್ದಾರೆ. ಕೈಗಾರಿಕೆ ಸ್ಥಾಪನೆಗೆ ಭೂಮಿ ಖರೀದಿ ಬಗ್ಗೆ ಇರುವ ತೊಂದರೆಗಳನ್ನು ಹಲವು ಉದ್ಯಮಿಗಳು ಹೇಳಿಕೊಂಡಿದ್ದಾರೆ. ಹಾಗಾಗಿ ಭೂಪರಿವರ್ತನೆಗೆ ಇರುವ ಕಾನೂನಿಗೆ ಸಣ್ಣ ಬದಲಾವಣೆ ತರಲು ಉದ್ದೇಶಿಸಿದ್ದೇವೆ. 30 ದಿನಗಳಲ್ಲಿ ಭೂ ಪರಿವರ್ತನೆಗೆ ಅವಕಾಶವಾಗುವಂತೆ ಕಾನೂನು ಬದಲಾವಣೆ ಮಾಡಲಾಗುವುದು. ಮುಂದಿನ ಬಜೆಟ್ ಅಧಿವೇಶನದಲ್ಲಿಯೆ ಇದನ್ನು ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಕೃಷಿ ಭೂಮಿಯನ್ನ ಕೃಷಿಯೇತರ ಚಟುವಟಿಕೆಗೆ ಬಳಸಿಕೊಳ್ಳಲು 30 ದಿನಗಳ ಒಳಗಾಗಿ ಅನುಮತಿ ನೀಡಲಾಗುವುದು.
ಈಗ ಇರುವ ಕೈಗಾರಿಕಾ ನೀತಿಗಳನ್ನು ಸಹ ಸಡಿಸಗೊಳಿಸಲಾಗುವುದು. ರಾಜ್ಯದಲ್ಲಿ ವಿದ್ಯುತ್ ಕೊರೆತಯಿಲ್ಲ, ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಅದನ್ನು ಕೈಗಾರಿಕೆಗಳಿಗೆ ಕೊಡಲಾಗುವುದು ಎಂಬ ಭರವಸೆಯನ್ನು ಕೈಗಾರಿಕೋದ್ಯಮಗಳಿಗೆ ಕೊಟ್ಟುದ್ದೇವೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.
ಮಿತ್ತಲ್ ಜೊತೆ ಚರ್ಚೆ ಫಲಪ್ರದ
ದಾವೋಸ್ನಲ್ಲಿ ಅತ್ಯುತ್ತವಾಗಿ ನಾವು ಬಂಡವಾಳ ಹೂಡಿಕೆದಾರರನ್ನು ಸೆಳೆದಿದ್ದೇವೆ. ಸ್ವತಃ ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ಅವರೇ ನಮ್ಮ ಕರ್ನಾಟಕದ ಪೆವಲಿಯನ್ ಗೆ ಬಂದು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಜೊತೆಗೆ ತೆಲಂಗಾಣದ ಸಚಿವರೆ ನಮ್ಮ ಪೆವಲಿಯನ್ಗೆ ಬಂದು, ತಿಳಿದುಕೊಂಡು ಹೋಗಿದ್ದಾರೆ. ದಸ್ಸಾ ಸಿಸ್ಟಮ್ಸ್, ಅರ್ಸೆಲಾರ್ ಮಿತ್ತಲ್, ಭಾರತ್ ಫೋರ್ಜ್, ಲಾಕ್ ಹೀಡ್ ಮಾರ್ಟಿನ್, ಲುಲು ಗ್ರೂಪ್ ಮತ್ತು ನೊವೊ ನಾರ್ಡಿಸ್ಕ್ ಮೊದಲಾದ ಕಂಪೆನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
'World Economic Forum'ನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ...
ರಾಜ್ಯದಲ್ಲಿ ಸೌರ ವಿದ್ಯುತ್ ಉತ್ಪಾದನೆ ಹಾಗೂ ಉಕ್ಕು ಕಾರ್ಖಾನೆ ಸ್ಥಾಪನೆಗೆ ಲಕ್ಷ್ಮಿ ಮಿತ್ತಲ್ ಆಸಕ್ತಿ ತೋರಿಸಿದ್ದಾರೆ. 17 ವರ್ಷಗಳ ನಂತರ ಕರ್ನಾಟಕದ ಮುಖ್ಯಮಂತ್ರಿಗಳು, ಕೈಗಾರಿಕಾ ಸಚಿವರು ಹಾಗೂ ಅಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರಾಜ್ಯದ ಜಿಡಿಪಿ ಶೇಕಡಾ 9 ರಿಂದ ಶೇಕಡಾ 9.6 ರಷ್ಟು ಕಾಯ್ದುಕೊಂಡಿದ್ದೇವೆ ಎಂದು ಶೆಟ್ಟರ್ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ತುಟಿ ಬಿಚ್ಚದ ಯಡಿಯೂರಪ್ಪ
ಸುದ್ದಿಗೋಷ್ಠಿಯಲ್ಲಿ ಸಂಪುಟ ವಿಸ್ತರಣ ಬಗ್ಗೆ ಸಿಎಂ ಯಡಿಯೂರಪ್ಪ ಏನೂ ಮಾತನಾಡಲಿಲ್ಲ. ಕ್ಯಾಬಿನೆಟ್ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇನೆ. ಕುಮಾರಸ್ವಾಮಿ ಅವರ ಯಾವುದೇ ಪ್ರಶ್ನೆಗೂ ಉತ್ತರ ಕೊಡಬಾರದು ಅಂತ ನಿರ್ಧಾರ ಮಾಡಿದ್ದೆನೆ. ದಾವೋಸ್ ಸಮಾವೇಶ ಬಿಟ್ಟು ಬೇರಾವುದೇ ವಿಚಾರ ಮಾತಾಡಲ್ಲ. ಸಚಿವ ಸಂಪುಟ ವಿಸ್ತರಣೆ ಯಾವಾಗ? ಯಾವಾಗ ದೆಹಲಿಗೆ ತೆರಳುತ್ತಿರಿ? ಎಂಬ ಬಗ್ಗೆಯೂ ಉತ್ತರಿಸಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಹೇಳಿದ್ದಾರೆ.