ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್ ನೀಡಲು ಸಿಎಂ ಸಮ್ಮತಿ
ಬೆಂಗಳೂರು, ಮೇ. 26: ಖಾಸಗಿ ಶಾಲಾ ಶಿಕ್ಷಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್, ಆದ್ಯತೆ ಮೇರೆಗೆ ಲಸಿಕೆ ಸೇರಿದಂತೆ ಬೇಡಿಕೆಗಳನ್ನುಈಡೇರಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರತಿನಿಧಿಗಳ ನಿಯೋಗ ನೀಡಿದ ಮನವಿ ಸ್ವೀಕರಿಸಿ ಈ ಭರವಸೆ ನೀಡಿದ್ದಾರೆ.
ಖಾಸಗಿ ಶಾಲಾ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಕೆಲವರು ನರೇಗಾ ಅಡಿಯಲ್ಲಿ ಕೂಲಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ತರಕಾರಿ ಮಾಡುವಂತಾಗಿದೆ. ಇಂಥ ಸಂಕಷ್ಟ ಸ್ಥಿತಿಯಲ್ಲಿ ಖಾಸಗಿ ಶಿಕ್ಷಕರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವಂತೆ ಕ್ಯಾಮ್ಸ್ ಸೇರಿದಂತೆ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದ್ದವು. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿರಲಿಲ್ಲ. ಇದು ಶಿಕ್ಷಕ ಸಮುದಾಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿದ ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ರಾಜ್ಯ ಮಟ್ಟದ ಜಂಟಿ ಸಮಿತಿ ಅಧ್ಯಕ್ಷ ಪುಟ್ಟಣ್ಣ ನೇತೃತ್ವದಲ್ಲಿ ಏಳು ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು, ಈ ಕುರಿತು ಅಧ್ಯಯನ ನಡೆಸಿ ಸಂಜೆಯೊಳಗೆ ತೀರ್ಮಾನ ಪ್ರಕಟಿಸಬೇಕು. ಶಿಕ್ಷಣ ಇಲಾಖೆಯಲ್ಲಿ ಇರುವ ಸಂಪನ್ಮೂಲಗಳನ್ನು ಬಳಸಿಕೊಂಡು ಖಾಸಗಿ ಶಿಕ್ಷಕರಿಗೆ ಸೌಲಭ್ಯ ಕೊಡುವ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದರು. ಈ ವೇಳೆ ಖಾಸಗಿ ಶಿಕ್ಷಕರ ಸಂಸ್ಥೆಗಳು ಹಾಗೂ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಧಾನ ಪರಿಷತ್ ಸದಸ್ಯ ಅರುಣ್ ಶಾಪೂರ್, ಪುಟ್ಟಣ್ಣ, ವೈ.ಎ. ನಾರಾಯಣಸ್ವಾಮಿ, ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ಮನವರಿಕೆ ಮಾಡಿಕೊಟ್ಟರು.
ಈ ಕುರಿತು ಒನ್ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ವಿಧಾನ ಪರಿಷತ್ ಸದಸ್ಯ ಅರುಣ್ ಶಾಪೂರ್, ನಮ್ಮ ಎಲ್ಲಾ ಬೇಡಿಕೆಗೆ ಸ್ಪಂದಿಸುವುದಾಗಿ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಸ್ಥಳದಲ್ಲಿಯೇ ಪರಿಶೀಲನೆ ನಡೆಸಿ ವರದಿ ನೀಡಿ ಎಂದು ಮುಖ್ಯಮಂತ್ರಿಗಳು ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ನಮ್ಮನ್ನು ಕರೆದುಕೊಂಡು ಸಿಎಂ ಬಳಿ ಕರೆದುಕೊಂಡು ಹೋಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ನಮ್ಮ ಎಲ್ಲಾ ಭರವಸೆ ಈಡೇರಿಸುವ ನಂಬಿಕೆ ಇದೆ. ಉತ್ತರ ಕರ್ನಾಟಕದಲ್ಲಿ ಖಾಸಗಿ ಶಿಕ್ಷಕರ ಪರಿಸ್ಥಿತಿ ತೀರಾ ಚಿಂತಾಜನಕವಾಗಿದೆ. ಏಳು ಬೇಡಿಕೆಗಳ ಮನವಿಯನ್ನು ಸಲ್ಲಿಸಿದ್ದೀವಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪುಟ್ಟಣ ಮಾತನಾಡಿ, ಖಾಸಗಿ ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಶಿಕ್ಷಕರು ಒಂದೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿದೆ. ಕೆಲವರು ನರೇಗಾದಡಿ ಕೆಲಸ ಮಾಡಿ ಬದುಕುವಂತಾಗಿದೆ. ಶಿಕ್ಷಕರಿಗೆ ಮೊದಲು ಲಸಿಕೆ ನೀಡಬೇಕು. ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಖಾಸಗಿ ಶಿಕ್ಷಕರು ದೊಡ್ಡ ಸಂಖ್ಯೆಯಲ್ಲಿರುವುದರಿಂದ ಸರ್ಕಾರ ಕೂಡ ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ವಿಚಾರ ಪ್ರಸ್ತಾಪವಾಯಿತು. ರಾಜ್ಯದಲ್ಲಿ ಶಿಕ್ಷಣ ಸಂಬಂಧ ಅನೇಕ ಯೋಜನೆಗಳು ಜಾರಿಯಾಗಿಲ್ಲ. ಶಿಕ್ಷಣ ಇಲಾಖೆಯಲ್ಲಿಯೇ ಉಳಿದಿರುವ ಹಣವನ್ನು ಬಳಸಿಕೊಳ್ಳುವ ಬಗ್ಗೆಯೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಇದಕ್ಕೆ ಸಕ್ರಿಯವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಸಿಎಂಗೆ ಸಲ್ಲಿಸಿರುವ ಬೇಡಿಕೆಗಳ ವಿವರ :
ಖಾಸಗಿ ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಮೊದಲು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಶಾಲೆಗಳು ಪೂರ್ಣ ಪ್ರಮಾಣದಲ್ಲಿ ತೆಗೆಯುವ ವರೆಗೂ ಶಾಲಾ ಸಂಸ್ಥೆಗಳ ಹಾಗೂ ಶಿಕ್ಷಕರ ಸಾಲವನ್ನು ಮರುಪಾವತಿ ಮಾಡಲು ಕಾಲವಕಾಶ ನೀಡಲು ಆದೇಶ ಮಾಡಬೇಕು.
ಆನ್ ಲೈನ್ ಹಾಗೂ ವಿದ್ಯಾಗಮ ಹಿನ್ನೆಲೆಯಲ್ಲಿ ಅನೇಕ ಮಕ್ಕಳು ಕಲಿಕೆಯಿಂದ ದೂರ ಉಳಿದಿದ್ದಾರೆ. ಇನ್ನೂ ಬಹುತೇಕ ಪಾಲಕ- ಪೋಷಕರು ಶಾಲಾ ಶುಲ್ಕ ಪಾವತಿ ಮಾಡಿರುವುದಿಲ್ಲ. ಮಕ್ಕಳನ್ನು ಶಾಲೆಗೆ ಸೇರಿಸದೇ ಕಡ್ಡಾಯ ಶಿಕ್ಷಣ ಹಕ್ಕು ಉಲ್ಲಂಘನೆ ಮಾಡಿರುತ್ತಾರೆ. ಹೀಗಾಗಿ ಎಲ್ಲಾ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸುವಂತೆ ಸರ್ಕಾರ ಆದೇಶ ಮಾಡಬೇಕು. ಶಾಲೆಗೆ ದಾಖಲಾಗದೇ ಹಾಗೇ ಉಳಿದಿರುವ ಮಕ್ಕಳನ್ನು ಪಾಸ್ ಮಾಡಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಕುತ್ತಿರುವ ಒತ್ತಡ ಹಾಕಬಾರದು. ಶಾಲೆಗೆ ದಾಖಲಾಗದ ಮಕ್ಕಳನ್ನು ಉತ್ತೀರ್ಣ ಮಾಡುವುದರಿಂದ ಶಾಲಾ ಶುಲ್ಕ ಪಾವತಿಸಿ ಕಲಿತಿರುವ ಮಕ್ಕಳಿಗೆ ತಾರತಮ್ಯ ಮಾಡಿದಂತಾಗುತ್ತದೆ. ಈ ಕುರಿತು ಸ್ಪಷ್ಟ ಆದೇಶವನ್ನು ಮಾಡಬೇಕು.
ಶಾಲಾ ಶುಲ್ಕದ ಬಗ್ಗೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಈಗಾಗಲೇ ಅನೇಕ ತೀರ್ಪುಗಳನ್ನು ನೀಡಿವೆ. ತೀರ್ಪುಗಳ ಅನ್ವಯದಂತೆ ಶಾಲಾ ಸಂಸ್ಥೆಗಳು ಶುಲ್ಕವನ್ನು ಹೆಚ್ಚಿಸದೇ ಇರುವ ಶುಲ್ಕವನ್ನು ಮುಂದುವರೆಸಬಾರದು. ಪೋಷಕರಿಗೆ ಹೊರಯಾಗದೇ , ಶಾಲಾ ಸಂಸ್ಥೆಗಳಿಗೂ ಸಮಸ್ಯೆಯಾಗದೇ ಶುಲ್ಕ ನಿಗದಿಗೆ ಅವಕಾಶ ಕೊಡಬೇಕು. ಕೊರೊನಾ ಸಂಕಷ್ಟಕ್ಕೆ ಒಳಗಾದ ಕುಟುಂಬಗಳ ಸಾಕ್ಷಿ ಹಾಗೂ ಮನವಿ ಸ್ವೀಕರಿಸಿ ಶುಲ್ಕ ಕಡಿಮೆ ಮಾಡುವ ತೀರ್ಮಾನವನ್ನು ಆಯಾ ಆಡಳಿತ ಸಂಸ್ಥೆಗಳಿಗೆ ವಹಿಸಿ ಸಕಾರಾತ್ಮಕವಾಗಿ ಸ್ಪಂದಿಸುವ ಬಗ್ಗೆ ಸುತ್ತೋಲೆ ಹೊರಡಿಸಬೇಕು.
Recommended Video
ಆರ್ಟಿಇ ಶುಲ್ಕ ಮರು ಪಾವತಿ ಮಾಡದೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳಿಗೆ ತೊಂದರೆ ನೀಡುತ್ತಿದ್ದಾರೆ. ಶೈಕ್ಷಣಿಕ ವರ್ಷ ಮುಗಿದರೂ ಇನ್ನೂ ಆರ್ಟಿಇ ಶುಲ್ಕ ಮರು ಪಾವತಿ ಮಾಡಿಲ್ಲ. ಸರ್ಕಾರ ಬಾಕಿ ಇರುವ 600 ಕೋಟಿ ರೂ. ಆರ್ಟಿಇ ಶುಲ್ಕವನ್ನು ಮರುಪಾವತಿ ಮಾಡಬೇಕು ಎಂಬ ಮಹತ್ವದ ಬೇಡಿಕೆಗಳನ್ನು ಸಿಎಂ ಅವರಿಗೆ ಸಲ್ಲಿಸಲಾಗಿದೆ.