ಶಿರಾಡಿ ಘಾಟ್ ಬಂದ್: ಚಾರ್ಮಾಡಿ ಘಾಟ್ನಲ್ಲಿ ಭಾರಿ ಟ್ರಾಫಿಕ್ ಜಾಮ್
ಚಿಕ್ಕಮಗಳೂರು, ಆಗಸ್ಟ್ 18: ಕೊಡಗು, ಉಡುಪಿ, ಮಂಗಳೂರು ಭಾಗದಲ್ಲಿ ಕಳೆದೊಂದು ತಿಂಗಳಿನಿಂದ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿದಿದೆ, ಮಾರ್ಗಗಳು ಬಂದ್ ಆಗಿವೆ. ಹಾಸನಜಿಲ್ಲೆಯ ಸಕಲೇಶಪುರದ ಬಳಿ ಇರುವ ಶಿರಾಡಿ ಘಾಟ್ ಹಾಗೂ ಮಡಿಕೇರಿ ಮಾರ್ಗ ಬಂದ್ ಆಗಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ಮೂಲಕ ವಾಹನ ಸಂಚರಿಸುತ್ತಿವೆ.
ಚಿಕ್ಕಮಗಳೂರು, ಮಂಗಳೂರು, ಧರ್ಮಸ್ಥಳ ಹಾಗೂ ಬೆಂಗಳೂರನ್ನು ಸಂಪರ್ಕಿಸುವ ಮಾರ್ಗ ಇದಾಗಿದೆ. ಚಾರ್ಮಡಿಘಾಟ್ನಲ್ಲಿ ನೂರಾರು ವಾಹನಗಳು ಮಂದಗತಿಯಲ್ಲಿ ಸಾಗುತ್ತಿವೆ, ಮಳೆ ಹಾಗೂ ದಟ್ಟ ಮಂಜಿನ ನಡುವೆ ವಾಹನ ಸವಾರರು ಪರದಾಡುವಂತಾಗಿದೆ.
ಆಗಸ್ಟ್ 20ರವರೆಗೆ ಶಿರಾಡಿ ಘಾಟ್ ಸಂಚಾರ ಸಂಪೂರ್ಣ ಬಂದ್
ದಿನನಿತ್ಯ ಹದಿನಾರು, ಹದಿನೆಂಟು ಚಕ್ರದ ಕಂಟೇನರ್ಗಳು ಹಾಗೂ ಲಾರಿಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ, ಭಾರಿ ವಾಹನಗಳ ಸಂಚಾರದಿಂದ ದಿನನಿತ್ಯ 2 ಕಿ.ಮೀನಷ್ಟು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಭಾರಿ ವಾಹನಗಳನ್ನು ಬಿಡದಂತೆ ಸ್ಥಳೀಯರಿಂದ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಶಿರಾಡಿ ಘಾಟ್ ಹಾಗೂ ಮಡಿಕೇರಿ ಮಾರ್ಗ ಸರಿ ಆಗುವವರೆಗೂ ಭಾರಿ ವಾಹನಗಳನ್ನು ಬಿಡದಂತೆ ಒತ್ತಾಯಿಸಲಾಗುತ್ತಿದೆ. ಒಂದು ವೇಳೆ ಚಾರ್ಮಾಡಿ ಘಾಟ್ ಬಂದ್ ಆದರೆ ಚಿಕ್ಕಮಗಳೂರು, ಮಂಗಳೂರು, ಧರ್ಮಸ್ಥಳಮಾರ್ಗವಾಗಿ ಬೆಂಗಳೂರಿಗೆ ತೆರಳಲು ಬೇರೆ ಮಾರ್ಗವಿಲ್ಲ,
ಆಗಸ್ಟ್ 19ರಂದು ಭಾನುವಾರ 11 ಗಂಟೆಗೆ ಚಿಕ್ಕಮಗಳೂರಿಗೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಭೇಟಿ ನೀಡಲಿದ್ದು, ಮಲೆನಾಡಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ,ಜಿಲ್ಲೆಯಲ್ಲಿ 88 ಕೋಟಿಗೂ ಅಧಿಕ ನಷ್ಟವಾಗಿದೆ, ಬೆಟ್ಟ-ಗುಡ್ಡ, ಭೂಕುಸಿತ ಉಂಟಾಗಿ ಸಾವು-ನೋವು ಸಂಭವಿಸಿವೆ, 2 ದಶಕದ ಬಳಿಕ ಸುರಿದ ಮಳೆಗೆ ಮಲೆನಾಡು ಜಲಾವೃತವಾಗಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮಲೆನಾಡಿಗೆ ಆಗಮಿಸಲಿದ್ದಾರೆ.