ಚಾರ್ಮಾಡಿ ಘಾಟ್ ಗುಡ್ಡ ಕುಸಿತ: ರಾತ್ರಿಯಿಡೀ ರಸ್ತೆಯಲ್ಲೇ ಕಳೆದ ಪ್ರಯಾಣಿಕರು
Recommended Video
ಬೆಂಗಳೂರು, ಜೂನ್ 12: ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿದು ಬೆಂಗಳೂರು-ಮಂಗಳೂರು ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಸೋಮವಾರ ಸಂಜೆ ಆರು ಗಂಟೆ ಸುಮಾರಿಗೆ ಘಾಟ್ನ ಕೆಲವೆಡೆ ಗುಡ್ಡ ಕುಸಿತ ಉಂಟಾಗಿದೆ. ಇದರಿಂದ ವಾಹನಗಳು ನಡು ರಸ್ತೆಯಲ್ಲಿಯೇ ಸಿಲುಕಿಬಿದ್ದಿದ್ದು, ಪ್ರಯಾಣಿಕರು ತೀವ್ರ ಪರದಾಟ ಅನುಭವಿಸುತ್ತಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಭಾರಿ ಮಳೆ: ಮೈದುಂಬಿದ ಹೇಮಾವತಿ
ನೀರು, ಆಹಾರವಿಲ್ಲದೆ ದಟ್ಟ ಕಾಡಿನ ರಸ್ತೆ ನಡುವೆ ರಾತ್ರಿ ಕಳೆದಿದ್ದಾರೆ. ವೃದ್ಧರು ಮತ್ತು ಮಕ್ಕಳು ಇನ್ನಷ್ಟು ಸಂಕಷ್ಟಪಡುವಂತಾಗಿದೆ.
ಎರಡು ದಿನಗಳ ಬಳಿಕ ವಿರಾಮಕ್ಕೆ ಜಾರಲಿದೆ ಮುಂಗಾರು
ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಬೆಳ್ತಂಗಡಿಯಿಂದ ಔಷಧಗಳನ್ನು ಪೂರೈಸಲಾಗುತ್ತಿದೆ. ವಾಹನದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಸ್ಥಳೀಯರು ಹಣ್ಣು, ಬ್ರೆಡ್ ಮುಂತಾದವುಗಳನ್ನು ಪೂರೈಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಆದರೆ, ಎಲ್ಲರಿಗೂ ಆಹಾರ ಪೂರೈಕೆ ಸಾಧ್ಯವಾಗಿಲ್ಲ.
ತೆರವು ಕಾರ್ಯಾಚರಣೆಗೆ ಅಡ್ಡಿ
ಘಾಟ್ನ 2 ಮತ್ತು 3ನೇ ತಿರುವುಗಳಲ್ಲಿ ಮಣ್ಣು ಕುಸಿತ ಉಂಟಾಗಿದೆ. ಇದರಿಂದ ಬೃಹತ್ ಗಾತ್ರದ ಮರಗಳು ರಸ್ತೆ ಮೇಲೆ ಉರುಳಿವೆ. ಭಾರಿ ಮಳೆಯಿಂದಾಗಿ ರಸ್ತೆ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆಗೂ ತೊಂದರೆಯಾಗಿದೆ. ಸ್ಥಳಕ್ಕೆ ಜೆಸಿಬಿ ತರುವುದು ಸಹ ಕಷ್ಟವಾಗಿದೆ.
ಪ್ರಯಾಣಿಕರು ಕಂಗಾಲು
ಬೆಂಗಳೂರು, ಹಾಸನ, ಚಿಕ್ಕಮಗಳೂರು ಮತ್ತಿತರ ಭಾಗಗಳಿಂದ ಧರ್ಮಸ್ಥಳ, ಮಂಗಳೂರು, ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದವರು ಮುಂದೆ ಹೋಗಲಾಗದೆ ಹಿಂದಕ್ಕೆ ಮರಳಲಾರದೆ ಪರದಾಡುತ್ತಿದ್ದಾರೆ. ಖಾಸಗಿ ಬಸ್, ಸರ್ಕಾರಿ ಬಸ್ ಮತ್ತು ಸ್ವಂತ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದವರು ಊರು ಸೇರಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ.
ಹಲವಾರು ಗಂಟೆಗಳಿಂದ ಎರಡೂ ಕಡೆಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಸ್ಥಳೀಯರಿಂದ ಆಹಾರ ಪೂರೈಕೆ
ಕೆಲವು ಪ್ರಯಾಣಿಕರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಹೇಳಲಾಗಿದ್ದು, ಬಿಪಿ, ಶುಗರ್ ನಿಂದ ಬಳಲಿದ ವೃದ್ಧೆಗೆ ಬೆಳ್ತಂಗಡಿ ನಿವಾಸಿ ಗಳಿಂದ ಔಷಧಿ ಪೂರೈಕೆ ಮಾಡಲಾಗಿದೆ. ಬೆಳ್ತಂಗಡಿ ಮೆಡಿಕಲ್ ಶಾಪ್ ನಿಂದ ಔಷಧಿ ಒಯ್ದ ಕೆಲಯುವಕರ ತಂಡ ಅನಾರೋಗ್ಯದಿಂದ ಬಳಲಿದವರಿಗೆ ಔಷಧ ಪೂರೈಸಿದ್ದಾರೆ. ಇನ್ನುಕೆಲವರು ಪ್ರಯಾಣಿಕರಿಗೆ ಹಾಲು, ಬ್ರೆಡ್ ವಿತರಣೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸಂಚಾರ ಮಾರ್ಗ ಬದಲಾವಣೆ
ಬೆಂಗಳೂರು- ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗುವ ವಾಹನಗಳು ಕೊಟ್ಟಿಗೆಹಾರದಲ್ಲಿ ಮಾರ್ಗ ಬದಲಾವಣೆ ಮಾಡಬೇಕಿದೆ. ಮಂಗಳೂರಿನಿಂದ ಬರುವ ವಾಹನಗಳು ಧರ್ಮಸ್ಥಳ, ಉಜಿರೆಯಲ್ಲಿ ಮಾರ್ಗ ಬದಲಾವಣೆ ಮಾಡಬೇಕಿದೆ.
ಕಾರ್ಕಳ-ಕಳಸ-ಕೊಟ್ಟಿಗೆಹಾರದ ಮೂಲಕ ಅಥವಾ ಮೈಸೂರು, ಮಡಿಕೇರಿ ಮೂಲಕ ಮಂಗಳೂರಿಗೆ ತಲುಪುವ ಮಾರ್ಗ ಬಳಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಸ್ಥಳದಲ್ಲಿ ಸ್ಥಳೀಯರು ಮತ್ತು ಪೊಲೀಸರು ತೆರವು ಕಾರ್ಯಾಚರಣೆಗೆ ಪ್ರಯತ್ನ ನಡೆಸಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೈದುಂಬಿದ ಜಲಪಾತಗಳು
ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಭಾರಿ ಮಳೆ ಮುಂದುವರಿದಿದ್ದು, ಹೇಮಾವತಿ ನದಿ ಉಕ್ಕಿ ಹರಿಯುತ್ತಿದೆ. ಕಲ್ಹತ್ತಗಿರಿ, ಸಿರಿಮನೆ, ಹೆಬ್ಬೆ ಮುಂತಾದ ಜಲಪಾತಗಳು ಮೈದುಂಬಿಕೊಂಡಿವೆ.
ಮೂಡಿಗೆರೆ ತಾಲ್ಲೂಕಿನ ಹಂತೂರು ಎಂಬಲ್ಲಿ ಹೇಮಾವತಿ ನದಿ ನೀರು ಸೇತುವೆ ಮಟ್ಟಕ್ಕೆ ಹರಿಯುತ್ತಿದೆ. ಕಡೂರು, ತರೀಕೆರೆ, ಚಿಕ್ಕಮಗಳೂರು ಭಾಗಗಳಲ್ಲಿ ಮಳೆ ಅಬ್ಬರ ತುಸು ಕಡಿಮೆಯಾಗಿದೆ.