ಪಠ್ಯ ಪುಸ್ತಕದಲ್ಲಿ ಟಿಪ್ಪು ಅಧ್ಯಾಯಕ್ಕೆ ಕತ್ತರಿ; ಏನಿದು ವಿವಾದ?
ಬೆಂಗಳೂರು, ಅಕ್ಟೋಬರ್ 30 : ಅಧಿಕಾರಕ್ಕೆ ಬರುತ್ತಲೇ ಟಿಪ್ಪು ಜಯಂತಿ ರದ್ದುಗೊಳಿಸಿದ್ದ ಕರ್ನಾಟಕದ ಬಿಜೆಪಿ ಸರ್ಕಾರ ಮತ್ತೆ ಟಿಪ್ಪು ವಿಚಾರದಲ್ಲಿಯೇ ಸುದ್ದಿಯಲ್ಲಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೀಡಿದ ಹೇಳಿಕೆ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಬುಧವಾರ ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಬಿ. ಎಸ್. ಯಡಿಯೂರಪ್ಪ ಪಾಲ್ಗೊಂಡಿದ್ದರು. "ಶಾಲಾ ಪಠ್ಯಗಳಿಂದ ಟಿಪ್ಪು ಸುಲ್ತಾನ್ ಕುರಿತ ಇತಿಹಾಸ ಅಧ್ಯಾಯವನ್ನು ತೆಗೆದು ಹಾಕುವ ಬಗ್ಗೆ ಪರಿಶೀಲಿಸಲಾಗುವುದು" ಎಂದು ಹೇಳಿದರು.
ಸಾವಿರಾರು ಜನರ ಕೊಂದ ಟಿಪ್ಪು ಕಥೆ ಮಕ್ಕಳಿಗೇಕೆ?; ಪ್ರಹ್ಲಾದ್ ಜೋಶಿ ಸಮರ್ಥನೆ
"ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡುವುದಿಲ್ಲ. ಈ ಸಂಬಂಧವಾಗಿ ಹಿಂದಿನ ಸರ್ಕಾರದ ಎಲ್ಲಾ ಆದೇಶಗಳನ್ನು ವಾಪಸ್ ಪಡೆಯಲಾಗುತ್ತದೆ" ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿರಾಜಪೇಟೆ ಬಿಜೆಪಿ ಶಾಸಕ ಕೆ. ಜಿ. ಬೋಪಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಶಾಲಾ ಪಠ್ಯದಿಂದ ಟಿಪ್ಪುವಿನ ಕುರಿತಾದ ಪಾಠಗಳನ್ನು ತೆಗೆದು ಹಾಕಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಶಿಕ್ಷಣ ಸಚಿವ ಸುರೇಶ್ ಕುಮಾರ್ಗೆ ಪತ್ರ ಬರೆದಿದ್ದರು.
ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ತೆಗೆದುಹಾಕಲು ಮುಂದಾದ ಬಿಜೆಪಿ ಸರ್ಕಾರ
ಟಿಪ್ಪು ಸುಲ್ತಾನ್ ಕುರಿತಾದ ವಿಷಯಗಳನ್ನು ಪಠ್ಯದಲ್ಲಿ ಉಳಿಸಿಕೊಳ್ಳುವ ಅಥವ ತೆಗೆದುಹಾಕುವ ಕುರಿತು ವರದಿ ಸಲ್ಲಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವ ಬಗ್ಗೆ ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿರುವಾಗಲೇ ಯಡಿಯೂರಪ್ಪ ನೀಡಿರುವ ಹೇಳಿಕೆ ಪ್ರತಿಪಕ್ಷಗಳನ್ನು ಕೆರಳಿಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಪ್ಪು ಜಯಂತಿ ರದ್ದು: ಹೊಸ ಸರ್ಕಾರದ ಕ್ರಮಕ್ಕೆ ಯಾರು, ಏನಂದ್ರು?
"ಟಿಪ್ಪು ಸುಲ್ತಾನ್ ಪಠ್ಯ ಕೈ ಬಿಟ್ಟರೆ ಇತಿಹಾಸವನ್ನು ತಿರುಚಿದಂತೆ ಆಗುತ್ತದೆ. ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದ್ದು ಸುಳ್ಳಾ, ನಿಜವೇ?" ಎಂದು ಸರ್ಕಾರವನ್ನು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ಶಾಲಾ ಪಠ್ಯದಿಂದ ಟಿಪ್ಪು ಕುರಿತ ವಿಷಯವನ್ನು ತೆಗೆಯಲು ಮುಂದಾಗಿರುವುದು ತಪ್ಪು ನಿರ್ಧಾರ" ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, "ಟಿಪ್ಪು ಅಧ್ಯಾಯವನ್ನು ಪಠ್ಯದಿಂದ ತೆಗೆಯಬಾರದು. ಟಿಪ್ಪುವಿನ ಬಗ್ಗೆ ತಮಗೆ ಬೇಕಾದ ತೀರ್ಮಾನ ತೆಗೆದುಕೊಳ್ಳಲು ಅವರೇನು ಸರ್ವಾಧಿಕಾರಿಯೇ?. ಅಜ್ಞಾನಿಗಳು ಮಾತ್ರ ಹೀಗೆ ಹೇಳಲು ಸಾಧ್ಯ" ಎಂದರು.
ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದರು. "ಟಿಪ್ಪು ಪಠ್ಯವನ್ನು ತೆಗೆದುಹಾಕುವ ಯಡಿಯೂರಪ್ಪನವರ ನಿರ್ಧಾರಕ್ಕೆ ನನ್ನ ಅಭಿನಂದನೆ. ನಮ್ಮ ಮುಂದಿನ ಪೀಳಿಗೆಗೆ ಟಿಪ್ಪುವಿನ ಮೋಸದ ಇತಿಹಾಸ ಹೇಳಿಕೊಡಬಾರದು" ಎಂದು ಹೇಳಿದರು.