ನನ್ನ ಸ್ಥಿತೀಲಿ ಬೇರೆ ಹೆಂಗಸಿದ್ದಿದ್ದರೆ ಎಷ್ಟು ರಾದ್ಧಾಂತ ಆಗ್ತಿತ್ತು?
ಪತ್ರಕರ್ತ-ಲೇಖಕ ರವಿ ಬೆಳಗೆರೆ ಬರೆದಿರುವ ನಟಿ ಲೀಲಾವತಿ ಅವರ ಆತ್ಮಕತೆ 'ರಾಜ್ ಲೀಲಾ ವಿನೋದ' ಪುಸ್ತಕದ ಆಯ್ದ ಭಾಗವನ್ನು ಪ್ರಕಾಶಕರ ಅನುಮತಿಯೊಂದಿಗೆ ಒನ್ಇಂಡಿಯಾ ಕನ್ನಡ ಪ್ರಕಟಿಸುತ್ತಿದೆ. ಡಿಸೆಂಬರ್ 25ರಂದು ಈ ಪುಸ್ತಕ ಬಿಡುಗಡೆ ಆಗುತ್ತಿದೆ.
ಪುಟ್ಟಣ್ಣ ಕಣಗಾಲ್ ಮತ್ತು ಕಲ್ಪನಾ, ಇಬ್ಬರೂ Great actors. ನಾಟಕದ ಹಿನ್ನೆಲೆ ಇಬ್ಬರಿಗೂ ಇತ್ತು. ಇಬ್ಬರೂ ಸತ್ತು ಹೋದರು. ಕಲ್ಪನಾ ಆ ಗುಡಗೇರಿ ಬಸವರಾಜ್ ಸಹವಾಸದಲ್ಲಿ ಪ್ರಾಣ ಕಳೆದುಕೊಂಡಳು. ಕೇವಲ ಆರತಿಗಾಗಿ ಹಂಬಲಿಸಿ ನೆಲ ಹಿಡಿದು, ಪುಟ್ಟಣ್ಣನವರು ಸಾವಿನ ಮನೆಗೆ ನಡೆದು ಹೋದರು.
ಪುಟ್ಟಣ್ಣನವರು ಹೃದಯಾಘಾತಕ್ಕೆ ಈಡಾಗಿ ಮಲಗಿದಾಗ ಅವರ ಕೈಲಿ ಕೆಲಸವಿರಲಿಲ್ಲ. ಆಗ ಆಸರೆಯಾಗಿ ಬಂದದ್ದು ನಟ ಶ್ರೀನಾಥ್. ಅವರಿಗೆ ಪುಟ್ಟಣ್ಣ ಅಂದರೆ ಪೂಜ್ಯ ಭಾವ. ಅವರು ಪಕ್ಕ ಕುಳಿತಾಗಲೇ ವಿಜಯ ನಾರಸಿಂಹ ಆ ಹಾಡು ಬರೆದು ತಂದರು. 'ನೀನೇ ಸಾಕಿದಾ ಗಿಣೀ...' ಅದನ್ನ ಒಪ್ಪಿಕೊಳ್ಳೋದು ಶ್ರೀನಾಥ್ಗೆ ಕಷ್ಟವಿತ್ತು. 'ಪುಟ್ಟಣ್ಣಾಜಿ, ಈ ಹಾಡು ಬೇಕಾ ಪುಟ್ಟಣ್ಣಾಜೀ?' ಅಂತ ಕೇಳಿದರು. ಪುಟ್ಟಣ್ಣ ಹಠ ಹಿಡಿದು ಬಿಟ್ಟರು. ತಮ್ಮ ನೋವಿಗೆ ಅದೊಂದು out let ಆಗಿತ್ತು ಅವರಿಗೆ. ಅವರು ಗಂಡಸರು. ಆದ್ದರಿಂದ ಅದು ಸಾಧ್ಯವಾಯಿತು. ಹೆಣ್ಣಾದ ನನಗೆ ಅಂಥ out let ಹೇಗೆ ಸಿಗಬಹುದು ಹೇಳಿ?[ಡಿಸೆಂಬರ್ 25ಕ್ಕೆ ರಾಜ್ ಲೀಲಾ ವಿನೋದ ಪುಸ್ತಕ ಬಿಡುಗಡೆ]
ನಾನಿಟ್ಟ ಕಣ್ಣೀರಿಗೆ ಸರಿಸಮನಾಗಿ ಬರೆಸಿ ಹಾಡಿದರೆ ಅದೆಷ್ಟು ಅಂಥ ಹಾಡುಗಳು ಹುಟ್ತಾ ಇದ್ದವೋ ರವೀಜಿ. ಆದರೆ ವರ್ಷ-ವರ್ಷ ಆ ನೋವನ್ನು ಎದೇಲಿಟ್ಟುಕೊಂಡು ಬದುಕಿದೀನಿ. ಸುರಿಸಿದ ಕಣ್ಣೀರಿಗೆ ಲೆಕ್ಕವೆಲ್ಲಿಯದು? ನನ್ನ ನೋವು ಯಾರಿಗೆ ಹೇಳಲು ಸಾಧ್ಯವಿತ್ತು? ಆ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಂಡಿರುವ ರೀತಿ ನೋಡಿ ರವಿ? ನನ್ನ ಪ್ರೀತಿ ಅದೆಷ್ಟು ತೀವ್ರವಾಗಿದೆ ಅಂತ ಅರ್ಥವಾಗೋದಿಲ್ವಾ? ಈ ಪತ್ರಗಳ ಕಥೆ ಹೇಳಿದೆನ್ನಲ್ಲ?
ಪತ್ರಗಳನ್ನು ವಕೀಲರಿಗೆ ಕೊಟ್ಟಿದ್ದೇನೆ
ಅವರ ಪಾಳೆಯದವರು ಮೇಲಿಂದ ಮೇಲೆ ಫೋನ್ ಮಾಡಿ ಹೆದರಿಸೋರು. ಆಗ ರಾಮಬಾಣದಂತೆ ನನಗೆ ಸಿಕ್ಕಿದ್ದೇ ಈ ಪತ್ರಗಳು. ಅವುಗಳನ್ನು ಒಬ್ಬ ವಕೀಲರಿಗೆ ಕೊಟ್ಟಿಟ್ಟಿದ್ದೇನೆ. ನನಗಾಗಲೀ, ನನ್ನ ಮಗನಿಗಾಗಲೀ ತೊಂದರೆಯಾದರೆ ಅದಕ್ಕೆ ನೀವೇ ಕಾರಣ ಅಂತ ಬರೆದಿಟ್ಟು ಸಾಯ್ತೇನೆ ಅಂತ ಅಂದಾಗಲೇ ಫೋನ್ ಬರೋದು ನಿಂತಿದ್ದು. ಹೆಂಗಸರಿಗೆ ಡಿಫೆನ್ಸೇ ಸಿಗೋದಲ್ವಾ? ಹೇಳಿ.
ಕಾಡಿಂದ ಬಂದ ಮೇಲೆ ನನ್ನಲ್ಲಿಗೆ ಬಂದೇ ಬರುತ್ತಾರೆಂಬ ಆಸೆ ಇತ್ತು
ನಾನು ಈ ತನಕ ಈ ಬಗ್ಗೆ ಎಲ್ಲೂ ಬಾಯಿ ಬಿಟ್ಟಿಲ್ಲ. ಯಾರೊಂದಿಗೂ ಬಾಯಿ ಬಿಟ್ಟಿಲ್ಲ. ಬ್ಲಾಕ್ಮೇಲ್ ಮಾಡುವ ಯೋಚನೆ ಕೂಡ ನನಗೆ ಬಂದಿಲ್ಲ. ನಾನು ಮಾಡಿದ್ದು ಒಂದೇ. ಅವರ ನಿರೀಕ್ಷೆ! ಇವತ್ತಲ್ಲ ನಾಳೆ ಬಂದಾರು. ಕಡೇಪಕ್ಷ ‘ಇವನು ನನ್ನ ಮಗ' ಅಂದು ವಿನೂನ ನೆತ್ತಿ ಸವರಿಯಾರು ಎಂಬ ನಿರೀಕ್ಷೆ. ಅವರು ಕಾಡಿನಿಂದ ಬಂದ ಮೇಲೆ ನನ್ನಲ್ಲಿಗೆ ಬಂದೇ ಬರುತ್ತಾರೆ ಎಂಬ ಆಸೆಯಿತ್ತು.
ರೇಡಿಯೋ ಸಂದರ್ಶನಕ್ಕಾಗಿ ಕಾದೆ
"ಅಪ್ಪಾಜಿ ತಮ್ಮ ಮನಸ್ಸಿನಲ್ಲಿ ಇರೋ ಯಾವುದನ್ನೋ ಇಂದು-ನಾಳೆ ಬಹಿರಂಗವಾಗಿ ಹೇಳಲಿದ್ದಾರೆ ಅಂತ ಕಾಣುತ್ತೆ" ಎಂದು ರಾಘವೇಂದ್ರ ರಾಜಕುಮಾರ್ ರೇಡಿಯೋ ಸಂದರ್ಶನದಲ್ಲಿ ಹೇಳಿದ. ಓಹ್... ದೊಡ್ಡೋರು ನನ್ನ ಮತ್ತು ವಿನೋದ್ನ ಬಗ್ಗೆ ಖಂಡಿತ ಈಗ ಹೇಳ್ತಾರೆ" ಅಂತ ಹುಚ್ಚಿಯಂತೆ ತುದಿಗಾಲಲ್ಲಿ ನಿಂತು ನಿರೀಕ್ಷಿಸಿದೆ. ಅಸಲು ಆ ಮಾತು ಅವರ ಬಾಯಿಂದ ಬರಲೇ ಇಲ್ಲ. ನಿರಾಸೆ ವಿಪರೀತ ನೋವು ಕೊಡುತ್ತೆ. ಅಂಥ ಎಷ್ಟೋ ನೋವುಗಳನ್ನು ಅನುಭವಿಸಿದ್ದೇನೆ. ಎಲ್ಲವನ್ನೂ ನುಂಗಿ ಸುಮ್ಮನಾಗಿದ್ದೇನೆ.
ಏನೆಲ್ಲ ರಾದ್ಧಾಂತಗಳಾಗಿರುತ್ತಿದ್ದವೋ?
ನನ್ನ ಸ್ಥಿತಿಯಲ್ಲಿ ಬೇರೊಬ್ಬ ಹೆಂಗಸಿದ್ದಿದ್ದರೆ ಏನೆಲ್ಲ ರಾದ್ಧಾಂತಗಳಾಗಿರುತ್ತಿದ್ದವೋ? ಇಷ್ಟು ಪತ್ರಗಳು, ಫೊಟೋಗಳು, ಘಟನೆಗಳು, ಅವಕ್ಕೆ ಸಾಕ್ಷ್ಯಗಳು ಇರುವಾಗ ಯಾರಾದರೂ ಸುಮ್ಮನಿರ್ತಾರಾ? ಆದರೆ ನಾನು ‘ಪಿಟ್' ಅಂತ ಒಂದು ಕೂಗೂ ಹಾಕಿಲ್ಲ. ಆದರೆ ನನ್ನ ನಿರೀಕ್ಷೆಗೆ, ಒಳ್ಳೆತನಕ್ಕೆ ಏನಾದರೂ ಫಲಿತಾಂಶ ಸಿಕ್ಕಿತಾ? ಸಿಕ್ಕಿದ್ದು ಬರೀ ವನವಾಸ. ನನ್ನಲ್ಲಿರೋ ಎವಿಡೆನ್ಸ್ ಹೊರ ಹಾಕಿದ್ದಿದ್ರೆ ಜನ ಸುಮ್ಮನಿರ್ತಿದ್ದರಾ? ದೊಡ್ಡೋರಿಗೆ ಕೇವಲ ಅಭಿಮಾನಿ ದೇವತೆಗಳಿಲ್ಲ. ಪರಮ ನೀಚ ಶತ್ರುಗಳೂ ಇದ್ದಾರೆ. ಅವರು ಸುಮ್ಮನೆ ಬಿಡ್ತಾರಾ? ಯೋಚನೆ ಮಾಡಿ.
ಅತ್ತು ನಶಿಸಿಹೋಗ್ತಾಳೆ
ಗಂಡಸು ಯಾವ ಅಡೆತಡೆಯೂ ಇಲ್ಲದೆ ರೋದಿಸುತ್ತಾನೆ. ತನ್ನ ದುಃಖ, ತನಗಾದ ಅನ್ಯಾಯ ಹೇಳಿಕೊಂಡು ಹಲುಬುತ್ತಾನೆ. (ಉದಾ: ನೀನೇ ಸಾಕಿದಾ ಗಿಣೀ..) ಆದರೆ ಮಾನಕ್ಕೆ ಅಂಜೋ ಹೆಣ್ಣು ಯಾವುದಕ್ಕೂ ಬಾಯಿ ಬಿಡಲ್ಲ. ಒಳಗೊಳಗೇ ಅತ್ತು ನಶಿಸಿ ಹೋಗ್ತಾಳೆ.
ಸರಿತಾ, ಗೀತಾ ಯಾಕೆ ಬರಲಿಲ್ಲ
ಅಂದ್ಹಾಗೆ ರವಿಯವರೇ, ಒಂದು ಚರ್ಚೆ ಇದೆ. ದೊಡ್ಡೋರು ಕಿಡ್ನ್ಯಾಪ್ ಆಗಿ ನೂರಾ ಎಂಟು ದಿನ ಕಾಡಿನಲ್ಲಿದ್ದಾಗ ಎಲ್ಲ ನಟರೂ ಬಂದರು. ಪಾರ್ವತಮ್ಮನಿಗೆ ಸಮಾಧಾನ ಹೇಳಿದರು. ಅಕ್ಕಪಕ್ಕದ ರಾಜ್ಯಗಳ ನಟರೂ ಬಂದರು. ರಜನೀಕಾಂತ್ ಬರಲಿಲ್ವೆ? ಕೋಕಿಲ ಮೋಹನ್ ಬಂದ. ಆದರೆ ಗಮನಿಸಿ ನೋಡಿ ಅಪ್ಪಿತಪ್ಪಿಯೂ ದೊಡ್ಡೋರಿಗೆ ಅಷ್ಟು ಹತ್ತಿರವಾಗಿದ್ದ, ಪರಮ ಆತ್ಮೀಯರೂ ಆಗಿದ್ದ ನಟಿ ಸರಿತಾ ಬರಲಿಲ್ಲ. ಆಕೆ ತಮಿಳು ನಟಿ. ಹಾಗೇನೇ ತಮಿಳಿನ ಗೀತಾ ಬರಲಿಲ್ಲ. ಯಾಕೆ? ದೊಡ್ಡೋರಿಗೆ ಅವರೊಂದಿಗೆ ಸ್ನೇಹವೊಂದೇ ಏನು, ‘ಗ್ರಂಥ ಸಾಂಗತ್ಯ'ವೂ ಇತ್ತು. ಬಾರದಿರುವುದಕ್ಕೆ ಕಾರಣ ಪಾರ್ವತಮ್ಮನವರಾ? ಒಳ್ಳೆ ಚಿತ್ರಗಳನ್ನು ಮಾಡಿ ಸಂತಸದ ತುತ್ತುದಿಯಲ್ಲಿದ್ದಾಗ ಅವರನ್ನು ಓಡಿಸಿಬಿಟ್ಟರಾ? ಗೊತ್ತಿದ್ದವರೇ ಹೇಳಬೇಕು.