ಫಾಸ್ಟ್ಯಾಗ್ ಸೃಷ್ಟಿಸಿದ ಗೊಂದಲ: ಟೋಲ್ ಪ್ಲಾಜಾಗಳಲ್ಲಿ ಗದ್ದಲ
ಬೆಂಗಳೂರು, ಫೆಬ್ರವರಿ 17: ದೇಶದಾದ್ಯಂತ ಸೋಮವಾರ ಮಧ್ಯರಾತ್ರಿಯಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳನ್ನು ಹಾದು ಹೋಗಲು ಎಲ್ಲ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯ ಎಂಬ ನಿಯಮ ಜಾರಿಯಾಗಿದೆ. ಇಲ್ಲದಿದ್ದರೆ ಎರಡು ಪಟ್ಟು ಹೆಚ್ಚು ಸುಂಕ ತೆರಬೇಕಾದ ಸ್ಥಿತಿ ಎದುರಾಗಿದೆ. ರಾಜ್ಯ ಅನೇಕ ಟೋಲ್ ಪ್ಲಾಜಾಗಳಲ್ಲಿ ಈ ನಿಯಮ ಭಾರಿ ಗದ್ದಲ, ಆಕ್ರೋಶಕ್ಕೆ ಕಾರಣವಾಗಿದೆ.
Recommended Video
ಫಾಸ್ಟ್ಯಾಗ್ ಹೊಂದಿಲ್ಲದ ಅನೇಕ ವಾಹನಗಳ ಸವಾರರು ಟೋಲ್ ಪ್ಲಾಜಾಗಳಲ್ಲಿ ಸಿಬ್ಬಂದಿಯೊಂದಿಗೆ ವಾಗ್ದಾದ ನಡೆಸಿದ್ದಾರೆ. ಫಾಸ್ಟ್ಯಾಗ್ ನಿಯಮದ ಬಗ್ಗೆ ಅರಿವಿಲ್ಲದ ಅನೇಕ ಚಾಲಕರು ದುಪ್ಪಟ್ಟು ಹಣ ತೆರಲು ಒಲ್ಲದೆ ಜಗಳವಾಡಿದ್ದಾರೆ. ಇನ್ನು ಅನೇಕರ ಬಳಿ ದುಪ್ಪಟ್ಟು ಸುಂಕ ನೀಡಲು ಹಣವಿಲ್ಲದೆ ಪರದಾಡಿದ್ದಾರೆ.
ಫೆ.15ರಿಂದ ಫಾಸ್ಟ್ಯಾಗ್ ಕಡ್ಡಾಯ, ಇಲ್ಲಾಂದ್ರೆ ದುಪ್ಪಟ್ಟು ದಂಡ
ಈ ಪರಿಸ್ಥಿತಿ ರಾಜ್ಯದ ಅನೇಕ ಟೋಲ್ ಪ್ಲಾಜಾಗಳಲ್ಲಿ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಿಯೀಜನೆಗೊಂಡಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಹರಸಾಹಸಪಡಬೇಕಾಯಿತು. ಮೊದಲೇ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ದುಪ್ಪಟ್ಟು ಟೋಲ್ ಮತ್ತೊಂದು ಬರೆ ಎಳೆದಂತೆ ಆಗಿದೆ. ಮುಖ್ಯವಾಗಿ ಟೋಲ್ ಪ್ಲಾಜಾಗಳ ಸಮೀಪದಲ್ಲಿನ ಊರುಗಳ ಸ್ಥಳೀಯರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಮುಂದೆ ಓದಿ.
ಚಾಲಕರು-ಸಿಬ್ಬಂದಿ ಜಗಳ
ಬೆಂಗಳೂರಿನ ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಸಾದಹಳ್ಳಿ, ತುಮಕೂರಿನ ಜಾಸ್ಗೇಟ್, ಕೋಲಾರದ ಹನುಮನಹಳ್ಳಿ, ಕೊಪ್ಪಳದ ಹಿಟ್ನಾಳ, ಕೆರೆಹಳ್ಳಿ, ವಿಜಯಪುರದ ಹಿಟ್ನಳ್ಳಿ, ನಂಜನಗೂಡು, ದಕ್ಷಿಣ ಕನ್ನಡದ ತಲಪಾಡಿ ಮುಂತಾದೆಡೆ ಕೂಡ ವಾಹನ ಚಾಲಕರು ಹಾಗೂ ಟೋಲ್ ಸಿಬ್ಬಂದಿ ಮಧ್ಯೆ ಗಲಾಟೆ ನಡೆದಿದೆ.
ದುಪ್ಪಟ್ಟು ನೀಡಲು ಹಣವಿಲ್ಲ
ಫಾಸ್ಟ್ಯಾಗ್ ಹೊಂದಿಲ್ಲದ ಅನೇಕ ಚಾಲಕರು ನೆಲಮಂಗಲದ ಬಳಿ ಟೋಲ್ ಬೂತ್ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದರು. ಇದರಿಂದ ಸಂಚಾರ ದಟ್ಟಣೆ ಉಂಟಾಯಿತು. ತಮಗೆ ಈ ನಿಯಮದ ಅರಿವಿಲ್ಲ. ಎರಡು ಪಟ್ಟು ಸುಂಕ ನೀಡಲು ತಮ್ಮ ಬಳಿ ಹಣವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2 ವರ್ಷಗಳಲ್ಲಿ ಹೆದ್ದಾರಿಗಳು ಟೋಲ್ ಪ್ಲಾಜಾ ಮುಕ್ತ: ಜಿಪಿಎಸ್ ವ್ಯವಸ್ಥೆಗೆ ಮುಂದಾದ ಸರ್ಕಾರ
ಫಾಸ್ಟ್ಯಾಗ್ ಇದ್ದವರಿಗೂ ಕಿರಿಕಿರಿ
ಟೋಲ್ಗೇಟ್ಗಳಲ್ಲಿಯೇ ಫಾಸ್ಟ್ಯಾಗ್ ನೀಡುವ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅದರ ಜತೆಗೆ ತಾಂತ್ರಿಕ ಸಮಸ್ಯೆಗಳೂ ಉಂಟಾದವು. ಅದರ ನಡುವೆ ಫಾಸ್ಟ್ಯಾಗ್ ಲೇನ್ನಲ್ಲಿಯೇ ಎಲ್ಲ ವಾಹನಗಳೂ ನುಗ್ಗಿದ್ದರಿಂದ ಫಾಸ್ಟ್ಯಾಗ್ ಇರುವ ವಾಹನಗಳೂ ಅಲ್ಲಿಂದ ಸಾಗಲು ತೊಂದರೆ ಅನುಭವಿಸಬೇಕಾಯಿತು.
ಸ್ಥಳೀಯರ ಅಸಮಾಧಾನ
ಪ್ರಯಾಣಿಕರನ್ನು ಸಾಗಿಸುತ್ತಿದ್ದ ಕೆಲವು ಟೆಂಪೋಗಳು, ಮಿನಿ ಬಸ್ಗಳು ದುಪ್ಪಟ್ಟು ಹಣ ತೆರಬೇಕಾದ ಕಾರಣದಿಂದ ಟೋಲ್ ಪ್ಲಾಜಾದಲ್ಲಿಯೇ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದ ವಾಪಸಾದ ಘಟನೆಗಳು ಕೂಡ ನಡೆದಿವೆ. ಕೆಲವು ಟೋಲ್ ಪ್ಲಾಜಾಗಳಲ್ಲಿ ಸ್ಥಳೀಯರು ತಾವೂ ಸುಂಕ ತೆರಬೇಕಾದ ನಿಯಮದ ವಿರುದ್ಧ ಪ್ರತಿಭಟಿಸಿದರು. ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಸ್ಥಳೀಯರು ತಮಗೆ ರಿಯಾಯಿತಿ ನೀಡುವಂತೆ ಆಗ್ರಹಿಸಿದರು.