ಯೋಗ್ಯತೆ ಇಲ್ಲದ ಸರಕಾರ: ಸಿಎಂ ಬಿಎಸ್ವೈಗೆ ಕುಮಾರಸ್ವಾಮಿ ನೀಡಿದ ಎಚ್ಚರಿಕೆ
ಬೆಂಗಳೂರು, ಏಪ್ರಿಲ್ 22: ಮುಖ್ಯಮಂತ್ರಿ ಯಡಿಯೂರಪ್ಪ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಗುರುವಾರ ಮಧ್ಯಾಹ್ನ ತೆಗೆದುಕೊಂಡ ಮಾರ್ಗಸೂಚಿಯಲ್ಲಿನ ಪರಿಷ್ಕರಣೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
"ನೀವು ರಾಜಕೀಯ ಜೀವನದ ಕೊನೆಯ ಕಾಲದಲ್ಲಿ ಇದ್ದೀರಿ, ನೀವು ಮಾಡಿದ ಪಾಪದ ಕೆಲಸವನ್ನು ಸರಿಪಡಿಸಲು ಈಗಲಾದರೂ ಮನಸ್ಸು ಮಾಡಿ. ಯಾರನ್ನೋ ಮೆಚ್ಚಿಸಲು ಬಡವರ ಹೊಟ್ಟೆಗೆ ಹೊಡೆಯಬೇಡಿ"ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು.
ಸ್ಪಷ್ಟತೆಯಿಲ್ಲದ ಪರಿಷ್ಕೃತ ದಿಢೀರ್ ಮಾರ್ಗಸೂಚಿ: ಶೇ.90 ಲಾಕ್ಡೌನ್ನತ್ತ ರಾಜ್ಯ
"ರಾಜ್ಯಪಾಲರ ಜೊತೆಗಿನ ಸಭೆಯಲ್ಲೇ ನಾನು ಲಾಕ್ ಡೌನ್ ಮಾಡುವುದೇ ಪರಿಹಾರ ಎಂದು ಹೇಳಿದ್ದೆ. ಆದರೆ, ಸರಕಾರ ಸಹಮತಿ ಸೂಚಿಸಲಿಲ್ಲ. ಪ್ರಧಾನಿಗಳು ತಮ್ಮ ಭಾಷಣದಲ್ಲಿ ಲಾಕ್ ಡೌನ್ ಕೊನೆಯ ಅಸ್ತ್ರ ಎಂದು ಹೇಳಿದ ಕೂಡಲೇ ಬೇರೆ ಮಾರ್ಗಸೂಚಿಯನ್ನು ಹೊರಡಿಸಿದ ಸರಕಾರ, ಈಗ ಮಾಡುತ್ತಿರುವುದೇನು"ಎಂದು ಎಚ್ಡಿಕೆ ಆಕ್ರೋಶ ವ್ಯಕ್ತ ಪಡಿಸಿದರು.
"ವೈನ್ ಸ್ಟೋರ್ ತೆರೆಯಲು ಅನುಮತಿ ನೀಡುವ ಸರಕಾರ, ಸಣ್ಣಪುಟ್ಟ ಅಂಗಡಿಯನ್ನು ಏಕಾಏಕಿ ಬಂದ್ ಮಾಡಿಸಿದೆ. ಈ ರೀತಿಯ ಕ್ರಮ ತೆಗೆದುಕೊಳ್ಳುವ ಮುನ್ನ ಇದಕ್ಕೆ ಬದಲಿ ಪರಿಹಾರವನ್ನು ಸಿದ್ದಪಡಿಸಿಕೊಂಡಿದೆಯಾ, ಅವರ ಕಣ್ಣೀರು ನಿಮ್ಮನ್ನು ಸುಮ್ಮನೆ ಬಿಡುತ್ತಾ"ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
"ಕೊರೊನಾ ನಿರ್ವಹಣೆಗೆ ಬಿಬಿಎಂಪಿಗೆ 305 ಮತ್ತು ರಾಜ್ಯದ ಇತರ ಪ್ರದೇಶಗಳಿಗೆ 260 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವರು ಹೇಳುತ್ತಾರೆ. ಇದು ಯಾವ ಮೂಲೆಗೂ ಸಾಲುವುದಿಲ್ಲ. ಪರಿಣತರು ನೀಡುವ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಯಾವಾಗ"ಎಂದು ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದರು.
ಕೊರೊನಾ ಚಿಂತಾಜನಕ ಸ್ಥಿತಿಯಲ್ಲಿ ರಾಜ್ಯ: ಸರಕಾರಕ್ಕೆ ಎಚ್ಡಿಕೆ 7 ಪ್ರಶ್ನೆಗಳು
"ಈ ಸರಕಾರಕ್ಕೆ ಯಾವುದೇ ಮುಂದಾಲೋಚನೆ ಅನ್ನುವುದಿಲ್ಲ, ಬಡವರ ಬಗ್ಗೆ ಕನಿಕರವಿಲ್ಲ. ಗೊತ್ತು ಗುರಿಯಿಲ್ಲದ ನಿರ್ಧಾರವನ್ನು ತೆಗೆದುಕೊಳ್ಳುವ ಸರಕಾರ, ಇಂದು ತೆಗೆದುಕೊಂಡ ಕ್ರಮ ಮಾತ್ರ ಜನವಿರೋಧಿ"ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದರು.