ಜಮೀರ್ ಅಹ್ಮದ್ ಬಯಸಿದ ಈ 'ಮಹತ್ವಾಕಾಂಕ್ಷೆ' ಪಟ್ಟಕ್ಕೆ ಕಾಲ ಸನ್ನಿಹಿತ?
2005ರಲ್ಲಿ ದರಿದ್ರ ನಾಯಾರಣ ರ್ಯಾಲಿಯ ಮೂಲಕ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು, ಚಾಮರಾಜಪೇಟೆಯ ಗಲ್ಲಿಗಲ್ಲಿಯಲ್ಲಿ ಸುತ್ತಾಡಿ, ಜಮೀರ್ ಅಹ್ಮದ್ ಖಾನ್ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದರು. ಕಾಂಗ್ರೆಸ್ ವಿರುದ್ದ ಗೌಡ್ರ ಪ್ರತಿಷ್ಠೆಯೆಂದೇ ಬಿಂಬಿಸಲಾಗಿದ್ದ ಈ ಚುನಾವಣೆಯಲ್ಲಿ ಗೌಡ್ರ ತಮ್ಮ ಖದರ್ ಅನ್ನು ತೋರಿದ್ದರು.
ಜೆಡಿಎಸ್ ಮತ್ತು ಗೌಡ್ರ ಕುಟುಂಬಕ್ಕೆ ಅತ್ಯಂತ ನಿಯತ್ತಿನ ಯೋಧನಂತೆ ಇದ್ದ, ಜಮೀರ್, ಬದಲಾದ ಪರಿಸ್ಥಿತಿಯಲ್ಲಿ, ಎಲ್ಲಿಂದ ರಾಜಕೀಯದ ಏಳಿಗೆ ಕಂಡರೋ, ಅದೇ ಏಣಿಯಿಂದ ಕೆಳಗಿಳಿದು, ಕಾಂಗ್ರೆಸ್ಸಿಗೆ ಸೇರಿದ್ದು ಇತಿಹಾಸ.
ನಿನ್ನೆ ಅಬ್ಬರಿಸಿದ್ದ ಜಮೀರ್ ಭಾಯ್, ಇಂದು ಫುಲ್ ಥಂಡಾ: ಹಿಂದೂ, ಮುಸ್ಲಿಂ ಒಂದೇ ತಾಯಿಯ ಮಕ್ಕಳು!
ಗೌಡ್ರ ಮೇಲೆ ಏನು ನಿಯತ್ತನ್ನು ತೋರಿಸುತ್ತಿದ್ದರೋ, ಅದೇ ನಿಯತ್ತನ್ನು ಜಮೀರ್ ಈಗ ಸಿದ್ದರಾಮಯ್ಯ ಮೇಲೆ ತೋರುತ್ತಿರುವುದು ಗೊತ್ತಿರುವ ವಿಚಾರ. ಇದು, ಕಾಂಗ್ರೆಸ್ಸಿನಲ್ಲಿ ಹಲವರ ಕೆಂಗಣ್ಣಿಗೂ ಗುರಿಯಾಗಿದ್ದುಂಟು.
ಕೊರೊನಾ: ಮೋದಿ ಸರಕಾರ ಇನ್ನಾದರೂ ರಾಹುಲ್ ಗಾಂಧಿ ಮಾತಿಗೆ ಮನ್ನಣೆ ನೀಡಲಿ
ಕಾಂಗ್ರೆಸ್ - ಜೆಡಿಎಸ್ ಅತೃಪ್ತರ ರಾಜೀನಾಮೆ, ಕುಮಾರಸ್ವಾಮಿ ಸರಕಾರದ ಪತನದ ನಂತರ, ಜಮೀರ್ ಅಹ್ಮದ್ ಅವರ ರಾಜಕೀಯದ ಶೈಲಿ ತೀರಾ ಅಗ್ರೆಸ್ಸೀವ್ ಆಗಿರುವುದು, ಹಲವು ಬಾರಿ ಕಾಂಗ್ರೆಸ್ಸಿಗೂ ನುಂಗಲಾರದ ತುತ್ತಾಗಿತ್ತು. ಜಮೀರ್ ಅವರ ಈ ಕಾರ್ಯಶೈಲಿಗೆ ಕಾರಣ ಇಲ್ಲದಿಲ್ಲ.
ಜಾಫರ್ ಷರೀಫ್ ನಂತರ
ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಭಾವೀ ಮುಖಂಡರು ಎಂದರೆ ಯಾರು? ಜಾಫರ್ ಷರೀಫ್ ನಂತರ ಒಂದು ಹಂತಕ್ಕೆ ಪಕ್ಷದಲ್ಲಿ ಆ ಮಟ್ಟಕ್ಕೆ ಬೆಳೆದವರು ಎಂದರೆ ಸಿ.ಎಂ.ಇಬ್ರಾಹಿಂ ಮತ್ತು ರೋಷನ್ ಬೇಗ್. ಅದರಲ್ಲಿ, ಇಬ್ರಾಹಿಂ ಮಾತನ್ನು ಜನರು ಸೀರಿಯಸ್ಸಾಗಿ ತೆಗೆದುಕೊಳ್ಳುವುದು ಆಮೇಲಿನ ಪ್ರಶ್ನೆ, ಖುದ್ದು ಕಾಂಗ್ರೆಸ್ಸಿಗರೇ ತೆಗೆದುಕೊಳ್ಳುವುದು ಅನುಮಾನ.
ರೋಷನ್ ಬೇಗ್
ಇನ್ನು ರೋಷನ್ ಬೇಗ್, ಅತೃಪ್ತ ಶಾಸಕರಲ್ಲಿ ಗುರುತಿಸಿಕೊಂಡು, ಕಾಂಗ್ರೆಸ್ ತೊರೆದಿದ್ದವರು. ಸದ್ಯ ಬಿಜೆಪಿಯಲ್ಲಿ ಒಲವು ಹೊಂದಿರುವ ರೋಷನ್ ಬೇಗ್, ಕಾಂಗ್ರೆಸ್ಸಿನಿಂದ ಅಲ್ಪಸಂಖ್ಯಾತ ಸಮುದಾಯದ ಪ್ರಭಾವೀ ನಾಯಕನಾಗಿ ಹೊರಹೊಮ್ಮುವ ಅವಕಾಶವನ್ನು ಕಳೆದುಕೊಂಡರು. ಇಂತಹ ಪರಿಸ್ಥಿತಿಯಲ್ಲಿ, ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮಲು ಜಮೀರ್ ಹೊರಟಿದ್ದಾರೆಯೇ ಎನ್ನುವ ಪ್ರಶ್ನೆ ಮೂಡವಂತೆ ಮಾಡುತ್ತಿದೆ ಅವರ ವರ್ಕಿಂಗ್ ಸ್ಟೈಲ್.
ಈ ಸಮಯವನ್ನು ಜಮೀರ್ ಬಳಸಿಕೊಳ್ಳುತ್ತಿದ್ದಾರೆ
ರಾಜ್ಯ ಮಟ್ಟದಲ್ಲಿ ಅಲ್ಪಸಂಖ್ಯಾತ ನಾಯಕನ ಕೊರತೆ ಕಾಡುತ್ತಿರುವ ಈ ಸಮಯವನ್ನು ಜಮೀರ್ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಕೊಡಬಹುದಾದ ಉದಾಹರಣೆ ಎಂದರೆ, ಆಶಾ ಕಾರ್ಯಕರ್ತರ ಮೇಲಿನ ಹಲ್ಲೆ ಮತ್ತು ಪಾದರಾಯನಪುರ ಪ್ರಕರಣ. ತಮ್ಮ ಸಮುದಾಯವನ್ನು ಸಮರ್ಥಿಸಿಕೊಂಡು, ಕಾಂಗ್ರೆಸ್ಸಿಗೆ ಮುಜುಗರ ತಂದೊಡ್ಡಿದ್ದರೂ , ಜಮೀರ್, ಕೊನೆಯ ಪಕ್ಷ ಬೆಂಗಳೂರಿನಲ್ಲಿ, ತಮ್ಮ ಸಮುದಾಯದವರ ಮೇಲೆ ಇನ್ನಷ್ಟು ಪ್ರಭಾವ ಬೀರಲು ಶಕ್ತವಾಗುತ್ತಿರುವುದಂತೂ ಸತ್ಯ.
ಜೆಡಿಎಸ್ ಹಾಗೂ ಕುಮಾರಸ್ವಾಮಿ
ಮುಸ್ಲಿಂ ಸಮುದಾಯದ ಮೇಲೆ ಜೆಡಿಎಸ್ ಹಾಗೂ ಕುಮಾರಸ್ವಾಮಿ ಇತರರು ಯಾವಾಗಲೂ ಮೃದುಧೋರಣೆ ಹೊಂದಿರುತ್ತಾರೆ. ಆದರೆ, ಪಾದರಾಯನಪುರದಲ್ಲಿ ದಾಂಧಲೆ ಮಾಡಿದ್ದವನ್ನು ಕುಮಾರಸ್ವಾಮಿ ಅವರು ಪುಂಡರು, ಗಲಭೆಕೋರರು ಎಂದು ತಮ್ಮ ಟ್ವೀಟ್ನಲ್ಲಿ ಪ್ರಸ್ತಾಪಿಸಿದ್ದರು. ಕಾಂಗ್ರೆಸ್ನಲ್ಲಿ ಜಮೀರ್ ಅಹ್ಮದ್ ಖಾನ್ ಬೆಳೆಯುತ್ತಿರುವುದಕ್ಕೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯಲು ಜಮೀರ್ ಗೆ ಅವಕಾಶ ಇರುವುದಕ್ಕೆ ಕುಮಾರಸ್ವಾಮಿ ಅವರ ಅಸಮಾಧಾನ ಹೆಚ್ಚಾಯ್ತಾ?
ಸಿದ್ದರಾಮಯ್ಯನವರ ಕೃಪಾಕಟಾಕ್ಷ ಜಮೀರ್ ಮೇಲಿದ್ದರೆ
ಅವರು ಪ್ರತಿನಿಧಿಸುತ್ತಿರುವ ಚಾಮರಾಜಪೇಟೆ ಕ್ಷೇತ್ರದಲ್ಲಿ ಅನಕ್ಷರಸ್ಥರು ಮತ್ತು ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ, ಕ್ಷೇತ್ರದ ಅಭಿವೃದ್ದಿಗೆ ಗಮನ ಕೊಡುವ ಬದಲು, ವೈಯಕ್ತಿಕ ನೆರವನ್ನು ನೀಡುತ್ತಾ, ಜಮೀರ್ ಇಲ್ಲಿ ಹಿಡಿತ ಸಾಧಿಸುತ್ತಾ ಬಂದಿದ್ದಾರೆ. ಕಾಂಗ್ರೆಸ್ಸಿನ ಹಲವು ಹಿರಿಯ/ಕಿರಿಯ ಮುಖಂಡರಿಗೆ ಜಮೀರ್ ಅಹ್ಮದ್ ಮೇಲೆ ಸಿಟ್ಟಿದ್ದರೂ, ಸಿದ್ದರಾಮಯ್ಯನವರ ಕೃಪಾಕಟಾಕ್ಷ ಜಮೀರ್ ಮೇಲಿದ್ದರೆ, ತಾನು ಬಯಸಿದ್ದ ಮಹತ್ವಾಕಾಂಕ್ಷೆಯ ಪಟ್ಟ ಜಮೀರ್ ಗೆ ಸಿಗುವ ದಿನ ದೂರವಿಲ್ಲ.