ಚಾಮರಾಜಪೇಟೆ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಅಂತಿಮ?
ಬೆಂಗಳೂರು, ಫೆಬ್ರವರಿ 7 : ಕರ್ನಾಟಕ ಬಿಜೆಪಿ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆಯೇ?. ಲಹರಿ ವೇಲು ಅವರಿಗೆ ಪಕ್ಷ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದೆ ಎಂಬ ಸುದ್ದಿ ಹಬ್ಬಿದೆ.
ಲಹರಿ ವೇಲು ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಚಾಮರಾಜಪೇಟೆಯಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ.
ಲಹರಿ ಆಡಿಯೋ ಸಂಸ್ಥೆಗಳ ಮಾಲೀಕರಾದ ಲಹರಿ ವೇಲು ಅವರು 2017ರ ಆಗಸ್ಟ್ನಲ್ಲಿ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಹೊಸ ಮುಖಗಳಿಗೆ ಆದ್ಯತೆ ನೀಡಲು ವೇಲು ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂಬುದು ಸದ್ಯದ ಸುದ್ದಿ.
ಲಹರಿ ವೇಲು ರಾಜಕಾರಣಕ್ಕೆ, ಬಿಜೆಪಿಗೆ ಸೇರ್ಪಡೆ
ಚಾಮರಾಜಪೇಟೆ ಕ್ಷೇತ್ರದ ಹಾಲಿ ಶಾಸಕರು ಜಮೀರ್ ಅಹಮದ್ ಖಾನ್. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಶೀಘ್ರವೇ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದು, 2018ರ ಚುನಾವಣಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿ ಯಾರು? ಎಂಬುದು ಇನ್ನೂ ಖಚಿತವಾಗಿಲ್ಲ.
ಲಹರಿ ವೇಲು ಕಣಕ್ಕೆ ಏಕೆ?
2018ರ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಬೇಕು ಎಂಬುದು ಬಿಜೆಪಿಯ ಉದ್ದೇಶವಾಗಿದೆ. ಆದ್ದರಿಂದ, ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಲ್ಲಿ ಲಹರಿ ವೇಲು ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.
ಬಿಜೆಪಿ ಗೆಲುವನ್ನು ಕಾಣದ ಕ್ಷೇತ್ರ
ಚಾಮರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. 1994ರ ನಂತರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿಲ್ಲ. ಆದ್ದರಿಂದ, ಈ ಬಾರಿ ಗೆಲ್ಲಲೇಬೇಕು ಎಂದು ತಂತ್ರ ರೂಪಿಸಲಾಗಿದೆ. 2013ರ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಬಿ.ವಿ.ಗಣೇಶ್ 17,720 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದರು.
ಲಹರಿ ವೇಲು ಸಕ್ರಿಯರಾಗಿದ್ದಾರೆ
ಬಿಜೆಪಿ ಸೇರಿರುವ ಲಹರಿ ವೇಲು ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ಹಲವು ವರ್ಷಗಳ ಕಾಲ ಲಹರಿ ಸಂಸ್ಥೆಯ ಕಚೇರಿ ಚಾಮರಾಜಪೇಟೆಯಲ್ಲಿತ್ತು. ಆದ್ದರಿಂದ, ಕ್ಷೇತ್ರದ ಜನರಿಗೆ ಅವರು ಚಿರಪರಿಚಿತರು.
ಗೆಲುವು ಸುಲಭದ ಮಾತಲ್ಲ
ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ಅವರನ್ನು ಸೋಲಿಸುವುದು ಸುಲಭದ ಮಾತಲ್ಲ. ಮೂರು ಬಾರಿ ಕ್ಷೇತ್ರದಲ್ಲಿ ಗೆದ್ದಿರುವ ಅವರು ಭಾರೀ ಪ್ರಭಾವ ಹೊಂದಿದ್ದಾರೆ. 2013ರ ಚುನಾವಣೆಯಲ್ಲಿ 56,339 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ದೇವೇಗೌಡರ ನಡೆ ನಿಗೂಢ
ಜೆಡಿಎಸ್ ಸಹ ಜಮೀರ್ ಅಹಮದ್ ಅವರನ್ನು ಸೋಲಿಸಬೇಕು ಎಂದು ಪಣ ತೊಡಲಿದೆ. ಎಚ್.ಡಿ.ದೇವೇಗೌಡರು ಪ್ರಬಲ ಅಭ್ಯರ್ಥಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಇತ್ತ ಲಹರಿ ವೇಲು ಕಣಕ್ಕಿಳಿದರೆ ಚಾಮರಾಜಪೇಟೆ ಕ್ಷೇತ್ರ ಕುತೂಹಲದ ಕಣವಾಗಲಿದೆ.