ಮಕ್ಕಳ ಸಮ್ಮುಖದಲ್ಲೇ ಶಿಕ್ಷಕಿಯ ಮೇಲೆ ಪಾದ್ರಿ ಹಲ್ಲೆ
ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮದ ಕ್ರೈಸ್ತ ವಿದ್ಯಾಸಂಸ್ಥೆಯ ಪಾದ್ರಿ ಇನ್ನಾಸಿ ಮುತ್ತು ಎಂಬಾತ ಅದೇ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೊಕೆಸಾನ್ ಗ್ರೆಸಿಲ್ಲಾ ಎಂಬಾಕೆಯನ್ನು ಮಕ್ಕಳ ಮುಂದೆ ಎಳೆದಾಡಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಗ್ರಾಮದ ಕ್ರೈಸ್ತ ವಿದ್ಯಾಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿ ಕೊಕೆಸಾನ್ ಗ್ರೆಸಿಲ್ಲಾ ಅವರಿಗೆ ಅವರ ಸೇವಾ ಪುಸ್ತಕವನ್ನು ತರಲು ನ. 25ರಂದು ಪಾದ್ರಿ ಹೇಳಿದ್ದರಂತೆ. ಅದರಂತೆ ಶಿಕ್ಷಕಿ ನ. 26ರಂದು ಚಾಮರಾಜನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಕಡತ ತಂದು ಪಾದ್ರಿಯವರಿಗೆ ನೀಡಿದ್ದಾರೆ.
ಸೇವಾ ಪುಸ್ತಕದ ಜತೆಗೆ ಅದನ್ನು ಜೆರಾಕ್ಸ್ ಪ್ರತಿ ಮಾಡಿಸಿ ತಂದು ಕೊಡುವಂತೆಯೂ ಆನಂತರ ಸೂಚಿಸಿದ್ದಾರೆ. ಅದರಂತೆ ಜೆರಾಕ್ಸ್ ಅಂಗಡಿಗೆ ಹೋಗಿದ್ದು, ಕರೆಂಟ್ ಇಲ್ಲದಿದ್ದ ಕಾರಣ ಸ್ವಲ್ಪ ಸಮಯ ಅಲ್ಲೇ ಕಾದಿದ್ದಾರೆ. ಆದರೆ ಎಷ್ಟೊತ್ತಾದರೂ ಕರೆಂಟ್ ಬಾರದಿದ್ದರಿಂದ ಕತ್ತಲಾಗುತ್ತಿದೆಯೆಂದು ಶಿಕ್ಷಕಿ ಗ್ರೆಸಿಲ್ಲಾ ತಮ್ಮ ಮನೆಗೆ ಹೊರಟಿದ್ದಾರೆ.
ಮರು ದಿನ ಶಾಲೆಗೆ ಬಂದಾಗ ಪಾದ್ರಿ ಜೆರಾಕ್ಸ್ ಪ್ರತಿ ನೀಡುವಂತೆ ಕೇಳಿದ್ದಾರೆ. ಆಗ ಹಿಂದಿನ ಕರೆಂಟ್ ಇಲ್ಲದಿದ್ದರ ಬಗ್ಗೆ ತಿಳಿಸಿ, ಇಂದು ಸಂಜೆ ಜೆರಾಕ್ಸ್ ಮಾಡಿಸಿಕೊಂಡು ಬರುವುದಾಗಿ ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡು ಅಲ್ಲಿಂದ ತೆರಳಿದ ಪಾದ್ರಿ, ಶಿಕ್ಷಕಿ ಗ್ರೆಸಿಲ್ಲಾ ಬಳಿಯಿರುವ ಸೇವಾ ಪುಸ್ತಕವನ್ನು ತೆಗೆದುಕೊಂಡು ಹೋಗಿ ಜೆರಾಕ್ಸ್ ಮಾಡಿಸಿಕೊಂಡು ಬರುವಂತೆ ಅಡುಗೆ ಸಿಬ್ಬಂದಿಗೆ ಆದೇಶಿಸಿದ್ದಾರೆ.
ಅದರಂತೆ ಸಿಬ್ಬಂದಿ ಮೇಡಂ ಪಾಠ ಮಾಡುತ್ತಿದ್ದ ಕೊಠಡಿಗೆ ಬಂದು ಪಾದ್ರಿ ಹೇಳಿದ್ದಾರೆ. ಜೆರಾಕ್ಸ್ ಮಾಡಿಸಿಕೊಂಡು ಬರಲು ಪುಸ್ತಕ ಕೊಡಿ ಎಂದು ಕೇಳಿದ್ದಾರೆ. ಆದರೆ ಶಿಕ್ಷಕಿ 'ನಾನು ಪಾದ್ರಿಗೆ ಈಗಾಗಲೇ ಹೇಳಿದ್ದೇನೆ. ಇಂದು ಸಂಜೆಗೆ ಜೆರಾಕ್ಸ್ ತರುತ್ತೇನೆ' ಎಂದು ಹೇಳಿ ಕಳುಹಿಸಿದ್ದಾರೆ.
ಇದನ್ನು ಕೇಳಿಸಿಕೊಂಡ ಪಾದ್ರಿ ನಖಶಿಖ ಉರಿದು ಶಿಕ್ಷಕಿ ಪಾಠ ಮಾಡುತ್ತಿದ್ದ ಕೊಠಡಿಗೆ ಬಂದು ನುಗ್ಗಿ 'ನಾನು ಇಂದು ನಿಮ್ಮನ್ನು ಭೇಟಿಯೇ ಆಗಿಲ್ಲ. ಸುಳ್ಳು ಹೇಳುತ್ತೀಯ' ಎಂದು ಅವ್ಯಾಚ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಶಿಕ್ಷಕಿ ಕೊಕೆಸಾನ್ ಗ್ರೆಸಿಲ್ಲಾ ಅಲವತ್ತುಕೊಂಡಿದ್ದಾರೆ. ಈ ಸಂಬಂಧ ಶಿಕ್ಷಕಿ ಕೊಕೆಸಾನ್ ಗ್ರೆಸಿಲ್ಲಾ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ನ. 29ರಂದು ಸಬ್ ಇನ್ಸ್ ಪೆಕ್ಟರ್ ಮಹದೇವಸ್ವಾಮಿ ಸಿಬ್ಬಂದಿ ಜತೆ ಬಂದು ಪಾದ್ರಿಯ ಬಳಿ ವಿಚಾರಣೆ ನಡೆಸಿದ್ದಾರೆ. ಹಲ್ಲೆಗೊಳಗಾದ ಶಿಕ್ಷಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದಾದ ಮಾರನೆಯ ದಿನ ಪಾದ್ರಿ ಇನ್ನಾಸಿ ಮುತ್ತು ಪರಾರಿಯಾಗಿದ್ದು, ಆತನ ವಿರುದ್ಧ ಭಾರತೀಯ ದಂಡ ಸಂಹಿತೆ ಕಾಯ್ದೆ 323, 506, 354 ಬಿ ಅನುಸಾರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.