ಏನಿದು ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಕುಕ್ಕೆ ದೇವಾಲಯದ ಮೂಲ ಮೃತ್ತಿಕಾ?
ಮಂಗಳೂರು, ಡಿ 10: ರಾಜ್ಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖಾ ವ್ಯಾಪ್ತಿಯ ಪ್ರಮುಖ ದೇವಾಲಯಗಳಲ್ಲೊಂದಾದ, ದೇಶದ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆಶ್ರೀ ಸುಬ್ರಮಣ್ಯ ದೇವಾಲಯದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ.
ಚಂಪಾಷಷ್ಠಿ ಉತ್ಸವ ಎಂದೇ ಕರೆಯಲ್ಪಡುವ ಈ ಜಾತ್ರೆ ಇದೇ ಬರುವ ಶನಿವಾರ (ಡಿ 12) ಆರಂಭವಾಗಲಿದೆ. ಹದಿನೈದು ದಿನಗಳ ಕಾಲ ನಡೆಯುವ ಈ ಜಾತ್ರೆ, ಡಿಸೆಂಬರ್ 26ರಂದು ಮುಕ್ತಾಯಗೊಳ್ಳಲಿದೆ. ಕೊರೊನಾ ಹಾವಳಿಯ ನಡುವೆ ಈ ಜಾತ್ರೆ ನಡೆಯುತ್ತಿರುವುದರಿಂದ ಮುಜರಾಯಿ ಇಲಾಖೆ ಎಲ್ಲಾ ಮುಂಜಾಗೃತಾ ಕ್ರಮವನ್ನು ತೆಗೆದುಕೊಂಡಿದೆ.
ಆಶ್ಲೇಷ ಪೂಜೆಗೆ ಕುಕ್ಕೆಯಲ್ಲಿ ಸಾಲುಗಟ್ಟಿ ನಿಂತ ಭಕ್ತರು
ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಕ್ಷೇತ್ರದ ಪ್ರಮುಖ ಸೇವೆಯಾಗಿದ್ದು, ಕಳೆದ ಕೆಲವು ವಾರಾಂತ್ಯಗಳಿಂದ ಕುಕ್ಕೆ ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಇವೆಲ್ಲದರ ನಡುವೆ, ಕ್ಷೇತ್ರದಲ್ಲಿ ಇಂದು (ಡಿ 10) ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ಪ್ರತೀ ವರ್ಷಕ್ಕೊಮ್ಮೆ ಅಂದ್ರೆ ಚಂಪಾಷಷ್ಠಿ ಉತ್ಸವದ ಸಂದರ್ಭದಲ್ಲಿ ಕ್ಷೇತ್ರದ ಮಹಾಪ್ರಸಾದ ಎಂದೇ ಕರೆಯಲ್ಪಡುವೆ ಮೂಲ ಮೃತ್ತಿಕೆಯನ್ನು ತೆಗೆಯುವ ಕ್ರಮವಿದೆ. ಇದನ್ನು ವರ್ಷಕ್ಕೆ ಒಂದು ಬಾರಿ ಮಾತ್ರ ತೆಗೆಯಲಾಗುವುದು. ಏನಿದು ಮೂಲ ಮೃತ್ತಿಕಾ ಪ್ರಸಾದ?
ಸಿಗಂದೂರು ದೇವಾಲಯ ಮುಜರಾಯಿಗೆ; ಹೈಕೋರ್ಟ್ಗೆ ಪಿಐಎಲ್
ಚಂಪಾಷಷ್ಠಿ ಉತ್ಸವ
ಚಂಪಾಷಷ್ಠಿ ಉತ್ಸವ ಆರಂಭವಾಗುವ ಮುನ್ನಾದಿನ ನಡೆಯುವ ಧಾರ್ಮಿಕ ವಿಧಿವಿಧಾನ ಇದಾಗಿದೆ. ಅಂದರೆ, ಕಾರ್ತಿಕ ಬಹುಳ ಏಕಾದಶಿಯ ದಿನದಂದು ಮೂಲ ಗರ್ಭಗುಡಿಯ ಹುತ್ತದಿಂದ ತೆಗೆಯುವ ಪವಿತ್ರ ಮಹಾಪ್ರಸಾದ ಇದಾಗಿದೆ. ಇದನ್ನು ವರ್ಷಕ್ಕೊಮ್ಮೆ ಮಾತ್ರ ತೆಗೆಯುವ ಕ್ರಮವಿದೆ. ಇದಾದ ಮರುದಿನ ಕಾರ್ತಿಕ ಬಹುಳ ದ್ವಾದಶಿಯಂದು ದೇವಸ್ಥಾನದಲ್ಲಿ ಕೊಪ್ಪರಿಗೆ ಏರುವುದರೊಂದಿಗೆ ಚಂಪಾಷಷ್ಠಿ ವಾರ್ಷಿಕ ಜಾತ್ರೆ ಆರಂಭವಾಗಲಿದೆ.
ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಕುಕ್ಕೆಯಲ್ಲಿ ಆರಾಧಿಸಲಾಗುತ್ತದೆ
ಈಶ್ವರನ ಪುತ್ರ ಷಣ್ಮುಖ ದೇವರನ್ನು ನಾಗನ ರೂಪದಲ್ಲಿ ಸುಬ್ರಹ್ಮಣ್ಯ ಎಂಬ ಹೆಸರಿನಲ್ಲಿ ಕುಕ್ಕೆಯಲ್ಲಿ ಆರಾಧಿಸಲಾಗುತ್ತದೆ. ಗುಪ್ತ ಕ್ಷೇತ್ರ ಎಂದೂ ಈ ಕ್ಷೇತ್ರವನ್ನು ಕರೆಯುತ್ತಾರೆ. ವರ್ಷಕ್ಕೊಮೆ ತೆಗೆಯುವ ಮೃತ್ತಿಕಾ ಇಲ್ಲಿನ ಶ್ರೇಷ್ಠ ಪ್ರಸಾದವಾಗಿದೆ. ದೇವಾಲಯದ ಪಕ್ಕದಲ್ಲೇ ಆದಿ ಸುಬ್ರಮಣ್ಯ ದೇವಾಲಯವಿದೆ. ಗರ್ಭಗುಡಿಯ ಹಿಂದೆ ಹುತ್ತವೊಂದು ಇದ್ದು, ಇದನ್ನು ವಲ್ಮೀಕ ಎಂದು ಕರೆಯಲಾಗುತ್ತದೆ.
ಕಾರ್ತಿಕ ಬಹುಳ ಏಕಾದಶಿಯ ಸುಮಹೂರ್ತ
ಕಾರ್ತಿಕ ಬಹುಳ ಏಕಾದಶಿಯ ಸುಮಹೂರ್ತದಂದು ಕ್ಷೇತ್ರದ ಪ್ರಧಾನ ಅರ್ಚಕರು (ಸೀತಾರಾಮ ಎಡಪಡಿತ್ತಾಯರು) ವೈದಿಕ ವಿಧಿವಿಧಾನದ ಮೂಲಕ ಹುತ್ತದಿಂದ ಮೃತ್ತಿಕೆಯನ್ನು ತೆಗೆಯುತ್ತಾರೆ. ಹುತ್ತದ ಮಣ್ಣನ್ನು ಮೂಲ ಮೃತ್ತಿಕಾ ಎಂದು ಕರೆಯುತ್ತಾರೆ. ಈ ಮೃತ್ತಿಕೆ ನಾಗನ ಅತ್ಯಂತ ಪವಿತ್ರ ಮಹಾ ಪ್ರಸಾದ ಎಂಬ ನಂಬಿಕೆಯಿದೆ.
Recommended Video
ಏನಿದು ವರ್ಷಕ್ಕೊಮ್ಮೆ ಮಾತ್ರ ಹುತ್ತದಿಂದ ತೆಗೆಯುವ ಕುಕ್ಕೆಯ ಮೂಲ ಮೃತ್ತಿಕಾ?
ಈ ಮೃತ್ತಿಕೆ ಪ್ರಸಾದ ರೋಗ ನಿರೋಧಕ, ಸಂತಾನಕಾರಕ, ಚರ್ಮ ರೋಗಗಳ ಪರಿಹಾರಕ್ಕೆ ದಿವ್ಯ ಔಷಧ ಎಂಬುದು ಭಕ್ತರ ನಂಬಿಕೆ. ಮೃತ್ತಿಕಾ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ, ವ್ಯಾಧಿಗಳ ನಿವಾರಣೆಗೂ ಭಕ್ತರು ಬಳಸುತ್ತಾರೆ.