ದಲಿತ ಸ್ವಾಮೀಜಿಯ ಎಂಜಿಲು ಅನ್ನ ತಿಂದ ಶಾಸಕ ಜಮೀರ್
ಬೆಂಗಳೂರು, ಮೇ. 23: ದಲಿತ ಸ್ವಾಮೀಜಿಯ ಬಾಯಿಂದ ಎಂಜಿಲು ಅನ್ನ ತೆಗೆದುಕೊಂಡು ತಿನ್ನುವ ಮೂಲಕ ಶಾಸಕ ಜಮೀರ್ ಅಹ್ಮದ್ ಖಾನ್ ಕ್ರಾಂತಿಕಾರಿ ಸಂದೇಶ ಸಾರಿದ್ದಾರೆ.
ಪಾದರಾಯನಪುರದಲ್ಲಿ ಅಲ್ ಅಜರ್ ಫೌಂಡೇಶನ್ ಶಾಲೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಗೂ ಈದ್ ಮಿಲಾದ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಜಮೀರ್ ಅಹ್ಮದ್ ವಹಿಸಿದ್ದರು. ದಲಿತ ಸ್ವಾಮೀಜಿ ಹಾಗೂ ಮುಸ್ಲಿಂ ಧರ್ಮ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೃದಯವಂತ ಯಡಿಯೂರಪ್ಪ: ಹೊಗಳಿ ಅಟ್ಟಕ್ಕೇರಿಸಿದ ಜಮೀರ್ ಅಹ್ಮದ್
ದಲಿತ ಸ್ವಾಮೀಜಿ ತಿಂದ ಅನ್ನದ ತುತ್ತನ್ನು ಶಾಸಕ ಜಮೀರ್ ಅಹ್ಮದ್ ಸ್ವೀಕರಿಸಿ ತಿನ್ನುವ ಮೂಲಕ ಸಹೋದರತ್ವ ಸಾರಿದರು. ಮಾನವೀಯತೆ ಮುಂದೆ ಜಾತಿ, ಧರ್ಮಗಳು ಏನೂ ಅಲ್ಲ ಎಂಬ ಸಂದೇಶವನ್ನು ರವಾನಿಸಿದರು. ಶಾಸಕರು ಅನ್ನದ ತುತ್ತು ತೆಗೆದುಕೊಂಡು ತಿನ್ನುತ್ತಿದ್ದಂತೆ ಅವರ ಅಭಿಮಾನಿಗಳು ಸಿಳ್ಳೆ ಹೊಡೆದು ಸಂಭ್ರಮಿಸಿದರು.
ಈ ಕುರಿತು ಮಾತನಾಡಿದ ಜಮೀರ್, "ಉತ್ತರ ಪ್ರದೇಶದ ಶಾಲೆಯಲ್ಲಿ ದಲಿತರು ಮಾಡಿದ ಕಾರಣಕ್ಕೆ ವಿದ್ಯಾರ್ಥಿಗಳು ಊಟ ತಿನ್ನಲಿಲ್ಲ. ಈ ಘಟನೆ ನೋಡಿ ನನ್ನ ಮನಸಿಗೆ ನೋವಾಯಿತು. ಹೀಗಾಗಿ ದಲಿತ ಸ್ವಾಮೀಜಿ ನಾಗರಾಜ ಸ್ವಾಮಿ ಅವರ ಎಂಜಿಲು ತುತ್ತು ತಿಂದು ಸೋದರತ್ವ ಸಂದೇಶ ಸಾರಿದ್ದೇನೆ. ಒಬ್ಬ ದಲಿತ ಊಟ ಮಾಡಿದ ಕಾರಣಕ್ಕೆ ವಿದ್ಯಾರ್ಥಿಗಳು ಊಟ ಸೇವಿಸಲ್ಲ ಎಂಬುದನ್ನು ನೋಡಿದರೆ ನಮ್ಮ ಸಮಾಜ ಎಲ್ಲಿಗೆ ಹೋಗುತ್ತಿದೆ? ಎಂಬ ನೋವಾಗುತ್ತಿದೆ" ಎಂದು ವಿಷಾದ ವ್ಯಕ್ತಪಡಿಸಿದರು.
"ಜಾತಿ ಧರ್ಮಗಳನ್ನು ಮೀರಿದ್ದು ಮಾನವೀಯತೆ. ನಮ್ಮೆಲ್ಲರ ಜಾತಿ ಒಂದೇ. ಅದು ಮನುಷ್ಯ ಜಾತಿ. ಮನುಷ್ಯರಾಗಿ ಬಾಳುವುದೇ ನಿಜವಾದ ಧರ್ಮ. ಮನುಷ್ಯ ಸಂಬಂಧಗಳಿಗೆ ಜಾತಿ ಧರ್ಮ ಎಂದಿಗೂ ಅಡ್ಡಿಯಾಗಬಾರದು. ನಾವೆಲ್ಲರೂ ಸಹೋದರರಂತೆ ಬಾಳಬೇಕು" ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಪೌರ ಕಾರ್ಮಿಕರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಊಟ ಉಣಬಡಿಸಿದರು. ದಲಿತ ಸ್ವಾಮೀಜಿ ತುತ್ತನ್ನು ಸ್ವೀಕರಿಸಿ ತಿಂದ ಶಾಸಕರ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.