'ನಾನು 6 ಅಡಿ ನೀನು 3 ಅಡಿ ಬಾ ನೋಡೇ ಬಿಡೋಣ': ಜಮೀರ್ಗೆ ಸವಾಲು
ಬೆಂಗಳೂರು, ಏಪ್ರಿಲ್ 02: ಕಾಂಗ್ರೆಸ್ ತೊರೆದು ದೇವೇಗೌಡರ ಸಮ್ಮುಖದಲ್ಲಿ ಇಂದು ಜೆಡಿಎಸ್ ಸೇರಿದ ಅಲ್ತಾಫ್ ಖಾನ್ ತನ್ನ ಎದುರಾಳಿ ಜಮೀರ್ ಅಹ್ಮದ್ ವಿರುದ್ಧ ಭರ್ಜರಿಯಾಗಿ ತೊಡೆ ತಟ್ಟಿದ್ದಾರೆ.
ಜಮೀರ್ ಅಹ್ಮದ್ ಅವರನ್ನು ಸೋಲಿಸಲು ದೇವೇಗೌಡ ಪ್ರಯೋಗಿಸಿರುವ ಅಸ್ತ್ರ ಎಂದು ಮಾಧ್ಯಮಗಳಲ್ಲಿ ಬಿಂಬಿತವಾಗಿರುವ ಅಲ್ತಾಫ್ ಅವರು ಇಂದು ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಜಮೀರ್ ವಿರುದ್ಧ ಕಟು ಟೀಕೆಗಳನ್ನು ಮಾಡಿ ಪಂಥಾಹ್ವಾನ ಮಾಡಿದರು.
ಸೋತರೆ ತಲೆ ಕತ್ತರಿಸಿ ಕೊಡುತ್ತೇನೆ: ಜಮೀರ್ ಸವಾಲು
'ನಾನು 6 ಅಡಿ ನೀನು 3 ಅಡಿ ನನಗೆ ನೀನ್ಯಾವ ಲೆಕ್ಕ, ಬಾ ನೊಡೇ ಬಿಡೋಣ' ಎಂದು ಸಿನಿಮಾ ಶೈಲಿಯಲ್ಲಿ ಗುಟುರು ಹಾಕಿ, ಜಮೀರ್ ಅವರನ್ನು ಅಖಾಡಕ್ಕೆ ಕರೆದಿದ್ದಾರೆ.
'ಜಮೀರ್ ಅಹ್ಮದ್ ಮಾಡಿರುವ ಹಗರಣಗಳ ದಾಖಲೆಗಳು ನನ್ನ ಬಳಿ ಇವೆ ಅದನ್ನೆಲ್ಲಾ ಬಿಡುಗಡೆ ಮಾಡುತ್ತೇನೆ, 10 ವರ್ಷಗಳ ಹಿಂದೆ ಚಾಮರಾಜಪೇಟೆಗೆ ಬಂದಾಗ ಬಿಡಿಗಾಸಿಲ್ಲದಿದ್ದ ಜಮೀರ್ 10 ವರ್ಷದಲ್ಲಿ 300 ಕೋಟಿ ರೂಪಾಯಿ ಆಸ್ತಿಯ ವಾರಸುದಾರನಾಗಿದ್ದಾನೆ' ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಅಲ್ತಾಪ್ ಅವರ '6 ಅಡಿ, 3 ಅಡಿ' ಮಾತಿಗೆ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, 'ಹೌದು ನಾನು ಕುಳ್ಳ, ಅಮಿತಾಭ್ ಬಚ್ಚನ್ 7 ಅಡಿ ಇದ್ದಾರೆ, ಆದರೆ ಸಚಿನ್ ಕುಳ್ಳ ಆದರೆ ಹೆಚ್ಚು ಫೇಮಸ್ ಆಗಿರುವುದು ಸಚಿನ್' ಎಂದು ತಿರುಗೇಟು ನೀಡಿದರು. ಮುಂದುವರೆದು ನಾನು ಸಚಿನ್ನಂತೆ ಎಂದರು ಜಮೀರ್.
ಜಮೀರ್ ವಿರುದ್ಧ ದೇವೇಗೌಡ ದಾಳ, ಕಾಂಗ್ರೆಸ್ನ ಅಲ್ತಾಫ್ ಜೆಡಿಎಸ್ಗೆ
ನಾನು ಈ ಬಾರಿ ಚಾಮರಾಜಪೇಟೆಯಲ್ಲಿ ಸೋತರೆ ನನ್ನ ತಲೆ ಕಡಿದು ಕೊಡುತ್ತೇನೆ, ದೇವೇಗೌಡರು ಎಲ್ಲಾ ಕೇವಲ ರಾಜ್ಯದ ಮುಸ್ಲಿಮರನ್ನಷ್ಟೆ ಅಲ್ಲ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರನ್ನು ಕರೆಸಿ ಚುನಾವಣೆಗೆ ನಿಲ್ಲಿಸಿದರೂ ನನ್ನದೇ ಗೆಲವು ಎಂದು ಎದಿರೇಟು ನೀಡಿದರು.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಅಲ್ತಾಫ್ ಖಾನ್ ಅವರು ಚಾಮರಾಜಪೇಟೆಯಲ್ಲಿ ಜಮೀರ್ ವಿರುದ್ಧ ಅಧಿಕೃತ ಅಭ್ಯರ್ಥಿ ಎಂದು ಸ್ವತಃ ದೇವೇಗೌಡರೇ ಘೋಷಿಸಿದ್ದು, ಚಾಮರಾಜಪೇಟೆಯಲ್ಲಿ ಜಮೀರ್ ಅವರನ್ನು ಸೋಲಿಸಲು ಜೆಡಿಎಸ್ ಶತಾಯಗತಾಯ ಪ್ರಯತ್ನ ಮಾಡುತ್ತಿದೆ.