ಚಾಮರಾಜನಗರ ದೇಗುಲದಲ್ಲಿ ಎಳನೀರು ದೀಪ, ಗಾಳಿ ಬಂದ್ರೂ ಆರೋದಿಲ್ಲ!
ಚಾಮರಾಜನಗರ,ಏಪ್ರಿಲ್,01: ಈಗ ಮಾರಮ್ಮನ ಜಾತ್ರೆ ಸಂಭ್ರಮ..ಗ್ರಾಮಗಳಿಂದ ಹಿಡಿದು ಪಟ್ಟಣದವರೆಗೆ ಗ್ರಾಮದೇವತೆ ಅವತಾರದಲ್ಲಿರುವ ಮಾರಮ್ಮನ ವಿಶೇಷ ಪೂಜೆ, ಜಾತ್ರೆ, ರಥೋತ್ಸವಗಳು ನಡೆಯುತ್ತಿವೆ. ಎಲ್ಲೆಡೆಯೂ ಜಾತ್ರೆ ನಡೆಯುತ್ತದೆ ಅದರಲ್ಲೇನು ವಿಶೇಷ ಏನಂತೀರಾ? ಮುಂದೆ ಓದಿ
ಚಾಮರಾಜನಗರ ಜಿಲ್ಲೆಯ ದೊಡ್ಡರಾಯಪೇಟೆ ಗ್ರಾಮದಲ್ಲಿ ನಡೆಯುವ ಬಿಸಿಲು ಮಾರಮ್ಮನ ಹಬ್ಬ ಮಾತ್ರ ವಿಭಿನ್ನ ಮತ್ತು ವಿಚಿತ್ರ. ಕಾರಣ ಇಲ್ಲಿ ನಡೆಯುವ ಹಬ್ಬದ ಸಂದರ್ಭ ಹಚ್ಚುವ ದೀಪಗಳಿಗೆ ಎಣ್ಣೆ ಹಾಕಲ್ಲ ಬದಲಿಗೆ ಎಳನೀರು ಹಾಕಲಾಗುತ್ತದೆ. ಆ ಎಳನೀರಿನಲ್ಲೇ ದೀಪ ಉರಿಯುತ್ತದೆ.[ಶಿರಸಿ ಮಾರಿಕಾಂಬಾ ಜಾತ್ರೆಯ ಇತಿಹಾಸವೇನು?]
ಬಿಸಿಲು ಮಾರಮ್ಮನ ವಿಶೇಷ ಏನು?
ದೊಡ್ಡರಾಯಪೇಟೆ ಗ್ರಾಮದ ಹೊರವಲಯದ ವಿಶಾಲವಾದ ಮೈದಾನದಲ್ಲಿರುವ ಅರಳಿ ಮರದ ಬುಡದಲ್ಲಿ ಬಿಸಿಲು ಮಾರಮ್ಮ ನೆಲೆನಿಂತಿದ್ದಾಳೆ. ಈಕೆ ನಂಬಿದವರ ಇಷ್ಟಾರ್ಥ ನೆರವೇರಿಸುವುದಲ್ಲದೆ ಜನರ ತೊಂದರೆಗಳನ್ನು ನಿವಾರಿಸುತ್ತಾ ಬಂದಿದ್ದಾಳೆ. ಪ್ರತಿ ದಿನವೂ ಪೂಜಾ ಕೈಂಕರ್ಯ ನಡೆಯುತ್ತದೆಯಾದರೂ ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ವಿಶಿಷ್ಟವಾಗಿರುತ್ತದೆ.
ಜಾತ್ರೆಯ ದಿನದಂದು ಮೂಡ್ಲುಮೋಳೆ ಗ್ರಾಮದ ಉಪ್ಪಾರ ಸಮೂದಾಯದ ಇನ್ನೂ ಪ್ರೌಢಾವಸ್ಥೆಗೆ ಕಾಲಿಡದ ಯುವತಿಯ ಮೇಲೆ ದೇವಿಯನ್ನು ಆಹ್ವಾನಿಸಿ ಮೆರವಣಿಗೆ ಮಾಡಲಾಗುತ್ತದೆ.[ವಾದಿರಾಜರ ತಪೋಭೂಮಿ ಸೋಂದಾ ಕ್ಷೇತ್ರಕ್ಕೆ ನೂತನ ಬ್ರಹ್ಮರಥ]
ಮುಂಜಾನೆ ಸುಮಾರು 4ಗಂಟೆ ಸಮಯದಲ್ಲಿ ದೇವಾಲಯದ ಪೂಜಾರಿ ಭಕ್ತಿಯಿಂದ ದೇವಿಯನ್ನು ಪ್ರಾರ್ಥಿಸಿ, ಎಳನೀರನ್ನು ದೀಪಕ್ಕೆ ಹಾಕಿ ಅದಕ್ಕೆ ಬತ್ತಿ ಇಟ್ಟು ಹಣತೆ ಹಚ್ಚುತ್ತಾರೆ. ಅಷ್ಟೇ ಅಲ್ಲ ಗಾಳಿ ಬಂದರೂ ಆರುವುದಿಲ್ಲ. ಒಂದು ವೇಳೆ ಆರಿ ಹೋದರೆ ಗ್ರಾಮಕ್ಕೆ ಗಂಡಾಂತರ ಕಾದಿದೆ ಎಂದರ್ಥ.[ಮೈಲಾರಲಿಂಗೇಶ್ವರನ ಜಾತ್ರೆಯಲ್ಲಿ ಗೊರವಯ್ಯ ನುಡಿದ ಭವಿಷ್ಯವಾಣಿ]
ಪ್ರತಿವರ್ಷವೂ ದೊಡ್ಡರಾಯಪೇಟೆ ಮತ್ತು ಮೂಡ್ಲುಹೊಳೆ ಗ್ರಾಮಸ್ಥರು ಭಕ್ತಿಭಾವದಿಂದ ಕಟ್ಟುನಿಟ್ಟಿನ ವ್ರತ ಮಾಡಿ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದಲ್ಲಿ ಗ್ರಾಮದ ಜನರಲ್ಲದೆ ಇತರರು ನೆರೆಯುತ್ತಾರೆ. ಎಣ್ಣೆಯಿಲ್ಲದೆ ಎಳನೀರಿನಲ್ಲಿ ದೀಪ ಉರಿಯುವುದನ್ನು ಜನ ಬಿಸಿಲು ಮಾರಮ್ಮನ ಪವಾಡ ಎಂದೇ ನಂಬಿದ್ದಾರೆ.